ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ‘ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಿ – ರೈತ ಸಮುದಾಯವನ್ನು ಉಳಿಸಿ’ ಅಭಿಯಾನ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ತೀರ್ಮಾನಿಸಿದೆ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ ವೀರಸಂಗಯ್ಯ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “10 ವರ್ಷದ ಮೋದಿ ನೇತೃತ್ವದ ಎನ್.ಡಿ.ಎ ಆಡಳಿತದಲ್ಲಿ ರೈತ ಸಮುದಾಯವನ್ನು ನಿರ್ಲಕ್ಷಿಸಿ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ವಲಯಕ್ಕೆ ಒಪ್ಪಿಸುವ ಕೆಟ್ಟ ನೀತಿಗಳು ರೂಪುಗೊಂಡಿವೆ. ಹಾಗಾಗಿ ಎನ್.ಡಿ.ಎ ಒಕ್ಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಇಡೀ ರೈತ ಕುಲ ನಾಶವಾಗಲಿದೆ” ಎಂದು ಕಿಡಿಕಾರಿದರು.
ಈ ನಿಟ್ಟಿನಲ್ಲಿ ದೆಹಲಿಯಲ್ಲಿ ನಡೆದ ಬೃಹತ್ ರೈತ ಕಾರ್ಮಿಕ ಮಹಾ ಪಂಚಾಯತ್ ನಲ್ಲಿ ಎನ್.ಡಿ.ಎ ಒಕ್ಕೂಟವನ್ನು ಅಧಿಕಾರದಿಂದ ಕಿತ್ತೊಗೆಯಲು ದೇಶದ ರೈತರು ಪ್ರತಿಜ್ಞೆ ಮಾಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯನ್ನು ಆಲಂಗಿಸಿದ ಜೆಡಿಎಸ್ ರೈತ ಪಕ್ಷವೂ ಅಲ್ಲ, ಜಾತ್ಯಾತೀತ ಪಕ್ಷವೂ ಅಲ್ಲ
ಎನ್.ಡಿ.ಎ ಒಕ್ಕೂಟದಲ್ಲಿರುವ ಜೆಡಿಎಸ್ ಕೂಡ ರೈತಪರ ಪಕ್ಷವಾಗಿ ಉಳಿದಿಲ್ಲ. ಬಿಜೆಪಿಯನ್ನು ಆಳಂಗಿಸಿದ ಜೆಡಿಎಸ್ ರೈತಪಕ್ಷವೂ ಅಲ್ಲ, ಜಾತ್ಯಾತೀತ ಪಕ್ಷವೂ ಅಲ್ಲ. ಜೆಡಿಎಸ್ ತಾನು ರೈತಪರ ಪಕ್ಷ ಎಂದು ಕರೆದುಕೊಳ್ಳುತ್ತಿರುವುದು ನಕಲಿ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ 1,00,474 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ಚಳುವಳಿಗಳಲ್ಲಿ ಸುಮಾರು 754 ಜನ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ ನೀಡುವುದಾಗಿ ಹೇಳಿತ್ತು. ಆದರೆ, ಓಟು ಪಡೆದು ಗೆದ್ದ ನಂತರ ಎಂ.ಎಸ್.ಪಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ರೈತರಿಗೆ ಮೋಸ ಮಾಡಿದೆ. ರೈತರ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿ, ರೈತರನ್ನು ಮತ್ತಷ್ಟು ಸಾಲದ ಸುಳಿಗೆ ಸಿಲುಕಿಸಿದೆ. ರೈತರ ಆದಾಯ ದ್ವಿಗುಣಗೊಳಿಸುವ ಬದಲು ಕೃಷಿ ಸಬ್ಸಿಡಿ ಕಡಿತಗೊಳಿಸಿದೆ. ಕೃಷಿ ಪರಿಕರಗಳ ಬೆಲೆ ಹೆಚ್ಚಳ ಮಾಡಿ ಕೃಷಿ ಉತ್ಪನ್ನಗಳ ಬೆಲೆ ದ್ವಿಗಿನಗೊಳಿಸಿದೆ ಎಂದು ಆರೋಪ ಮಾಡಿದರು.
ಮನರೇಗಾ ಯೋಜನೆಯಡಿ 100 ದಿನ ಉದ್ಯೋಗ ನೀಡುವ ಬದಲು 44 ದಿನಕ್ಕೆ ಇಳಿಸಲಾಗಿದೆ. ಸೂಕ್ತ ರೀತಿಯಲ್ಲಿ ದಿನಗೂಲಿ ಪಾವತಿ ಮಾಡುತ್ತಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವ ಬದಲಾಗಿ ಉದ್ಯೋಗ ಕಿತ್ತುಕೊಳ್ಳುವ ಕೆಲಸಕ್ಕೆ ಎನ್.ಡಿ.ಎ ಒಕ್ಕೂಟ ಮುಂದಾಗಿದೆ ಎಂದು ದೂರಿದರು.
18 ಸಾವಿರ ಕೋಟಿ ಬರ ಪರಿಹಾರ ನೀಡದ ಕೇಂದ್ರ ಸರ್ಕಾರ
ರಾಜ್ಯದ 223 ತಾಲೂಕುಗಳಿಗೆ ಬರಬೇಕಿರುವ 18 ಸಾವಿರ ಬರ ಪರಿಹಾರದ ಪೈಕಿ ಒಂದು ಪೈಸೆ ಹಣವನ್ನು ಸಹ ಬಿಡುಗಡೆ ಮಾಡದೆ ರೈತರನ್ನು ವಂಚಿಸಿದೆ. ಇದಲ್ಲದೆ ಬೆಲೆ ಕುಸಿತದಿಂದ ಕೊಬ್ಬರಿ, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿ ಮಾಡಿ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದರು.
ಪ್ರಜಾಪ್ರಭುತ್ವ, ಸಂವಿಧಾನ ನಾಶ ಮಾಡಲು ಬಿಜೆಪಿ ಮುಂದಾಗಿದೆ
ಪ್ರಜಾಪ್ರಭುತ್ವ, ಸಂವಿಧಾನವನ್ನು ನಾಶ ಮಾಡಲು ಕೇಂದ್ರ ಸರಕಾರ ಮುಂದಾಗಿದೆ ಎಂದು ರೈತ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಕಿಡಿಕಾರಿದರು.
ಬಿಜೆಪಿ ತಿರಸ್ಕರಿಸಲು ಮನೆಗೊಂದು ಕರಪತ್ರ ಅಭಿಯಾನ
ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿ ಗ್ರಾಮಕ್ಕೆ ತೆರಳಿ ಮನೆಗೊಂದು ಕರಪತ್ರ ಹಂಚಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳನ್ನು ತಿರಸ್ಕರಿಸುವಂತೆ ಸಂಘ ಮನವಿ ಮಾಡಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ, ಪದಾಧಿಕಾರಿಗಳಾದ ವೆಂಕಟಸ್ವಾಮಿ, ಅರುಣ್ ಕುಮಾರ್, ಕೋಟೆ ಚನ್ನೇಗೌಡ, ಮಾರುತಿ ಮುಂತಾದವರು ಹಾಜರಿದ್ದರು.
