ಚಿಕ್ಕಬಳ್ಳಾಪುರ ಜಿಲ್ಲೆಯ ವರದಹಳ್ಳಿಯಲ್ಲಿ ಹಕ್ಕಿಜ್ವರ ಪ್ರಕರಣಗಳು ಪತ್ತೆಯಾದ ನಂತರ ಪಶುವೈದ್ಯರ ತಂಡವು 442 ಕೋಳಿಗಳನ್ನು ಸಾಮೂಹಿಕವಾಗಿ ಕೊಂದಿರುವುದಾಗಿ ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ತಿಳಿಸಿದ್ದಾರೆ.
“ಗ್ರಾಮದಲ್ಲಿ ಇತ್ತೀಚೆಗೆ 15 ಕೋಳಿಗಳು ಸಾವನ್ನಪ್ಪಿದ್ದವು ಈ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳನ್ನು ಕೋಳಿಗಳನ್ನು ಪರೀಕ್ಷೆಗಳಿಗಾಗಿ ಮಧ್ಯಪ್ರದೇಶದ ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷೆ ಮಾದರಿಗಳಲ್ಲಿ ಹಕ್ಕಿ ಜ್ವರ ಇರುವುದಾಗಿ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದ್ದು, ಗ್ರಾಮದಲ್ಲಿ 442 ಕೋಳಿಗಳನ್ನು ಕೊಲ್ಲಲಾಗಿದೆ” ಎಂದು ತಿಳಿಸಿದ್ದಾರೆ.
“ಸಂತೆಯಿಂದ ಕೋಳಿ ತಂದು ಸಾಕಾಣಿಕೆ ಮಾಡಿರುವುದರಿಂದ ಹಕ್ಕಿಜ್ವರ ಹರಡಿರಬಹುದು. ಈಗ ರೋಗ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ” ಎಂದು ತಿಳಿಸಿದ್ದಾರೆ.

“ವರದಹಳ್ಳಿ ಗ್ರಾಮದಲ್ಲಿ 405 ಜನಸಂಖ್ಯೆ ಇದ್ದು, 96 ಮನೆಗಳಿವೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಅವರ ನಿರ್ದೇಶನದ ಮೇರೆಗೆ ತುರ್ತು ಸಭೆ ಕರೆಯಲಾಗಿದ್ದು, ಅಧಿಕಾರಿಗಳು, ಪಶುವೈದ್ಯರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ರೋಗ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು” ಎಂದು ಹೇಳಿದ್ದಾರೆ.
“ವರದಹಳ್ಳಿಯ ಎಲ್ಲ ನಿವಾಸಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾರಿಗೂ ಹಕ್ಕಿ ಜ್ವರದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲವೆಂದು ಗ್ರಾಮದಲ್ಲಿಯೇ ಬೀಡುಬಿಟ್ಟಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್ ತಿಳಿಸಿದ್ದಾರೆ.

ದಸಂಸ ಮುಖಂಡ ಜಿ ವಿ ಗಂಗಪ್ಪ ಮಾತನಾಡಿ, “ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಅವರು ಸಂತ್ರಸ್ತ ಗ್ರಾಮಸ್ಥರಿಗೆ ಪರಿಹಾರದ ಭರವಸೆ ನೀಡಿದ್ದು, ಒಂದು ಕೋಳಿಗೆ ₹90 ಕೊಡುವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಬರದ ನಾಡಿನಲ್ಲಿ ರೈತರು ಯಾವುದೇ ಬೆಳೆಗಳನ್ನು ಬೆಳೆಯಲಾಗದೆ ಈಗಾಗಲೇ ಕಂಗೆಟ್ಟಿದ್ದಾರೆ. ಇದೀಗ ಕೋಳಿ ಉದ್ಯಮ, ಕೋಳಿ ಸಾಕಾಣಿಕೆದಾರರಿಗೆ ತುಂಬಾ ನಷ್ಟವಾಗುತ್ತದೆ” ಎಂದು ತಿಳಿಸಿದರು.
“ಸಂತ್ರಸ್ತರಿಗೆ ನೀಡಬಯಸಿರುವ ದರ ಅವೈಜ್ಞಾನಿಕವಾಗಿದ್ದು, ರೈತರು ಇನ್ನಷ್ಟು ಸಂಕಷ್ಟಕ್ಕೆ ಈಡಾಗುವಂತಾಗಿದೆ. ಗ್ರಾಮದ ಸುತ್ತಮುತ್ತಲಿನ ಕೋಳಿಗಳನ್ನು 15 ದಿನಗಳಿಗೆ ಒಮ್ಮೆ ಪರೀಕ್ಷೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. 90 ದಿನ ಮಾದರಿಗಳ ಪರೀಕ್ಷೆ ನಡೆಯಲಿದೆಯೆಂದು ಜಿಲ್ಲಾಡಳಿತ ತಿಳಿಸಿದೆ” ಎಂದರು.

ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಈ ದಿನ.ಕಾಮ್ಗೆ ಮಾತನಾಡಿ, “ಕೋಳಿಗಳನ್ನು ಸಾಗಿಸುವ ವಾಹನಗಳ ಪ್ರವೇಶ ಮತ್ತು ನಿರ್ಗಮನವನ್ನು ತಡೆಯಲು ವರದಹಳ್ಳಿಯ ಹೊರಗೆ ತಾತ್ಕಾಲಿಕ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಪ್ರತಿ ನಿತ್ಯವೂ ಅಲ್ಲಿ ಸಂಚರಿಸುವಂತಹ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ಬರುವವರೆಗೂ ಚೆಕ್ಪೋಸ್ಟ್ ಚಾಲನೆಯಲ್ಲಿರುತ್ತದೆ” ಎಂದು ತಿಳಿಸಿದರು.
ಪಶುವೈದ್ಯಾಧಿಕಾರಿ ರಂಗಪ್ಪ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದ್ದು, ಬ್ಯುಸಿ ಇರುವುದಾಗಿ ಕರೆ ಕಡಿತಗೊಳಿಸಿದ್ದಾರೆ.
ಹಕ್ಕಿಜ್ವರ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಸಾರ್ವಜನಿಕರು, ಸ್ಥಳೀಯರು ಆತಂಕಕ್ಕೆ ಒಳಗಾಗಬಾರದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಪಾತಾಳಕ್ಕಿಳಿದ ಶುಂಠಿ ಬೆಲೆ; ಬೆಳೆಗಾರರ ಆದಾಯಕ್ಕೆ ಪೆಟ್ಟು
ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 14 ಕಾಗೆಗಳು ಸೇರಿ 30 ಹಕ್ಕಿಗಳು ನಿಗೂಢವಾಗಿ ಮೃತಪಟ್ಟಿವೆ. ಹಕ್ಕಿ ಜ್ವರದ ಭೀತಿಯ ಕಾರಣಕ್ಕೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವೈದ್ಯರ ತಂಡ ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ್ದು, ಅಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿರುವುದಾಗಿ ತಿಳಿದುಬಂದಿದೆ.
ಬಳ್ಳಾರಿ ತಾಲೂಕಿನ ಕುರೆಕುಪ್ಪ ಜಾನುವಾರು ಸಂವರ್ಧನ ಕೇಂದ್ರದಲ್ಲಿ ಸಾಕಣೆ ಮಾಡಲಾಗಿದ್ದ 2,400 ಕೋಳಿಗಳು ಒಂದು ವಾರದ ಅವಧಿಯಲ್ಲಿ ಹಕ್ಕಿಜ್ವರದಿಂದ ಮೃತಪಟ್ಟಿವೆ. ಸಾಕಣೆ ಕೇಂದ್ರದಲ್ಲಿ ಆರಂಭದಲ್ಲಿ ನಿತ್ಯ 20 ರಿಂದ 30 ಕೋಳಿಗಳು ಮೃತಪಟ್ಟರೆ, ನಂತರದ ದಿನಗಳಲ್ಲಿ ನಿತ್ಯ 100 ರಿಂದ 200 ಕೋಳಿಗಳು ಸಾವಿಗೀಡಾಗಿದ್ದವು. ಸಾವಿಗೆ ಹಕ್ಕಿಜ್ವರವೇ ಕಾರಣವೆಂದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ. ನಂತರ 1,020 ಕೋಳಿಗಳನ್ನು ಹತ್ಯೆ ಮಾಡಲಾಗಿದೆ. ಸೋಂಕು ಹರಡದಂತೆ ಎಲ್ಲ ಕ್ರಮ ಕೈಗೊಳ್ಳಲಾಗಿದೆಯೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.