ಮಲೆನಾಡಿನ ಪ್ರದೇಶದಲ್ಲಿ ಹೆಚ್ಚಿನದಾಗಿ ಗುಡ್ಡ ಗಾಡು ಇರುವುದು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ. ನೋಡುವುದಕ್ಕೂ ಹಸಿರಿನಿಂದ ಕೂಡಿದ್ದು, ವಾತಾವರಣವೂ ಪ್ರಶಾಂತವಾಗಿರುತ್ತದೆ. ಬೇರೆ ಬೇರೆ ಭಾಗದಿಂದ ಜನರು ಸ್ಥಳ ವೀಕ್ಷಿಸಲು ಕಳಸ ಕಡೆ ಬರುತ್ತಾರೆ. ನೋಡಲು ಏಷ್ಟು ಚಂದವೋ ಅಷ್ಟೂ ಸಮಸ್ಯೆ ಉಲ್ಬಣಗೊಂಡಿದೆ.
ಅದೇ ರೀತಿಯಲ್ಲಿ ಕಳಸ ಭಾಗದ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾರ್ಲೆ ಎಂಬ ಕುಗ್ರಾಮದಲ್ಲಿ ಅಂದಾಜು 100 ವರ್ಷಗಳಿಂದಲೂ ಜನರು ಕಾಡಂಚಿನಲ್ಲಿ ವಾಸಿಸುತ್ತಿದ್ದಾರೆ. ಸುಮಾರು 28 ಕುಟುಂಬಗಳು ಹಲವು ವರ್ಷಗಳಿಂದಲೂ ಇಲ್ಲಿ ಬದುಕು ನಡೆಸುತ್ತಿದ್ದಾರೆ.
ಇಲ್ಲಿನ ನಿವಾಸಿಗಳಿಗೆ ಪೇಟೆ ಜನ ಕಂಡರೆ ಭಯ, ಗಾಬರಿ ಹೆಚ್ಚಾಗುತ್ತಿತ್ತು. ಏಕೆಂದರೆ ಇವರು ವಾಸಿಸುವ ಸುತ್ತಮುತ್ತಲಿನ ಪ್ರದೇಶ ಹಲವು ವರ್ಷಗಳ ಹಿಂದೆ ನಕ್ಸಲೈಟ್ ಪ್ರದೇಶವಾಗಿತ್ತು. ಹಾಗಾಗಿ ಇಲ್ಲಿನ ನಿವಾಸಿಗಳು ಜೀವವನ್ನು ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದರು.
“ಕಾರ್ಲೆ ಎಂಬ ಕುಗ್ರಾಮದಲ್ಲಿ ಬದುಕು ನಿರ್ವಹಣೆಗೆ ಇಂದಿಗೂ ಸರಿಯಾದ ವ್ಯವಸ್ಥೆ ಇಲ್ಲ. ಕಾಲ್ನಡಿಗೆ ಓಡಾಟಕ್ಕೂ ಸಮರ್ಪಕ ರಸ್ತೆ, ಸೇತುವೆಗಳಿಲ್ಲ. ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಹಾಗೆಯೇ ಕುಗ್ರಾಮದಿಂದ ಜೇಡಿಕೊಂಡಕ್ಕೆ ಹೋಗಬೇಕಾದರೆ ಎರಡು ಕಿಲೋಮೀಟರ್ ದೂರದ ಮನೆಗಳಿಗೆ ಸರಿಯಾದ ಮೂಲ ಸೌಕರ್ಯವಿರಲಿ, ಜೀವನ ನಡೆಸಲು ಒಂದು ವ್ಯವಸ್ಥೆಯೇ ಇಲ್ಲ. ಇವರಿಗೆ ಯಾವುದೇ ರೀತಿಯ ಪಡಿತರ ಚೀಟಿ, ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಕೊಟ್ಟರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ನಮ್ಮ ಗ್ರಾಮಗಳಿಗೆ ಯಾವ ಆಧಿಕಾರಿಗಳೂ ಬರುವುದಿಲ್ಲ. ನಮ್ಮ ಕಷ್ಟಗಳನ್ನು ಯಾರ ಹತ್ತಿರ ಹೇಳಿಕೊಳ್ಳುವುದು” ಎಂಬುದು ಸ್ಥಳೀಯರ ಅಳಲಾಗಿದೆ.
“ನಾವು ದಿನನಿತ್ಯ ಕೂಲಿ ಕೆಲಸ ಮಾಡಿ ವಾರಕ್ಕೊಮ್ಮೆ ರೇಷನ್ ತರಬೇಕು. ಇಲ್ಲಿಂದ ಸುಮಾರು 22 ಕಿಮೀ ದೂರದಲ್ಲಿರುವ ಕಳಸದಿಂದಲೇ ಅಗತ್ಯ ವಸ್ತುಗಳನ್ನು ಕೊಂಡು ತರಬೇಕು. ಆರೋಗ್ಯ ಹದಗೆಟ್ಟು, ಹುಷಾರಿಲ್ಲದಿದ್ದರೆ ಆಸ್ಪತ್ರೆ ಹೋಗಲು ಜೋಳಿಗೆ ಕಟ್ಟಿ ಹೊತ್ತುಕೊಂಡು ಹೋಗಬೇಕು. ಇಂಥ ಸ್ಥಿತಿಯಲ್ಲಿದ್ದೇವೆ. ವಾಸ ಮಾಡಲು ಹುಲ್ಲಿನ ಸೂರು ಹಾಗೂ ಸುತ್ತಲು ಅಡಿಕೆ ಮರದ ಹಾಳೆಯ ತಟ್ಟಿಯನ್ನು ಕಟ್ಟಿಕೊಂಡಿದ್ದೇವೆ” ಎಂದು ಅವಲತ್ತುಕೊಂಡರು.
ಸ್ಥಳೀಯ ನಿವಾಸಿ ಗೋಪಾಲ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಈ ಕುಗ್ರಾಮದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗಕ್ಕೆ ಸೇರಿರುವ ನಾಲ್ಕು ಕುಟುಂಬಗಳು ಮೂಲಸೌಕರ್ಯಗಳಿಲ್ಲದೆ ಪರದಾಡುತ್ತಿವೆ. ನಮಗೆ ಮನೆ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರದಿಂದ ಒಂದು ಯೋಜನೆ ಬಂದಿತ್ತು. ಆದರೆ ಈ ಗ್ರಾಮಕ್ಕೆ ಬಂದ ಕೇರಳ ಮೂಲದ ಒಬ್ಬ ವ್ಯಕ್ತಿ ನಿಮಗೆ ಮನೆ ಕಟ್ಟಿಕೊಡುತ್ತೇನೆಂದು ಆಶ್ವಾಸನೆ ಕೊಟ್ಟು, ಇದ್ದ ಮನೆಯನ್ನೂ ಕೆಡವಿ ನಾಪತ್ತೆಯಾಗಿದ್ದಾನೆ” ಎಂದು ಹೇಳಿದರು.
ಸ್ಥಳೀಯ ನಿವಾಸಿಗಳು ಈ ದಿನ.ಕಾಮ್ನೊಂದಿಗೆ ಮಾತನಾಡಿ “ವೋಟ್ ಹಾಕಿಸಿಕೊಳ್ಳಲು ಮಾತ್ರ ಮತದಾರರ ಗುರುತಿನ ಚೀಟಿ(ವೋಟರ್ ಐಡಿ) ಕೊಟ್ಟಿದ್ದಾರೆ. ರಾಜಕೀಯ ನಡೆಸಲು ಅವರಿಗೆ ನಮ್ಮ ಮತ ಮಾತ್ರ ಬೇಕು. ಆದರೆ ನಮಗೆ ಸೌಲಭ್ಯಗಳನ್ನು ಮಾತ್ರ ಒದಗಿಸಿಲ್ಲ” ಎಂದು ನೋವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ಕೊಪ್ಪ-ಶೃಂಗೇರಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಸರಾಯಿ ದರ್ಬಾರ್
“ನಾವು ದಿನ ಕೂಲಿ ಮಾಡುವವರು. ಮನೆ, ರೇಷನ್ ಕಾರ್ಡ್, ವಿದ್ಯುತ್ ವ್ಯವಸ್ಥೆಯೂ ಇಲ್ಲ. ಈ ಸಂಬಂಧ ಮನವಿ ನೀಡಲು ಕಚೇರಿಗಳಿಗೆ ಹೋದರೆ ಅಲ್ಲಿ ಅಧಿಕಾರಿಗಳೇ ಇರುವುದಿಲ್ಲ. ಇಂತಹ ದುಃಸ್ಥತಿಯಲ್ಲಿ ನಾವು ವಾಸಿಸುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮುಗ್ಧ ಜನಗಳೇ ಇರೋದರಿಂದ ಇವರಿಗೆ, ಮನೆ, ರೇಷನ್ ಕಾರ್ಡ್ ಸೇರಿದಂತೆ ಓಡಾಟಕ್ಕೂ ಸರಿಯಾದ ರಸ್ತೆ ಇಲ್ಲ. ಹಿರಿಯರಿಗೆ ವೃದ್ಧಾಪ್ಯ ಪಿಂಚಣಿಯೂ ಬರುತ್ತಿಲ್ಲ. ಹಲವು ಬಾರಿ ಮನವಿ ಕೊಟ್ಟರು ಕೂಡ ಅದಕ್ಕೆ ಸ್ಪಂದಿಸದ ಅಧಿಕಾರಿಗಳು ಇವತ್ತು ಬನ್ನಿ ನಾಳೆ ಬನ್ನಿ ಎಂದು ಉದಾಸೀನದ ಮಾತುಗಳನ್ನಾಡುತ್ತಾರೆ” ಎಂದು ಆ ಗ್ರಾಮಕ್ಕೆ ರೇಷನ್ ತಂದು ಕೊಟ್ಟು ಸಹಾಯ ಮಾಡುತ್ತಿರುವ ನವೀನ್ ಅವರು ಈ ದಿನ.ಕಾಮ್ಗೆ ತಿಳಿಸಿದರು.