ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಾದ್ಯಂತ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಏಲಕ್ಕಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ.
ಜಿಲ್ಲೆಯ ದೇವರುಂದ, ಹಂತೂರು, ಮೇಕನಗದ್ದೆ, ಹೊಸ್ಕೆರೆ, ಏರಿಕೆ, ಭೈರಾಪುರ, ಗುತ್ತಿ, ಹೆಸಗೋಡು, ಮೂಲರಹಳ್ಳಿ ಸೇರಿದಂತೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗಡಿ ಭಾಗದಲ್ಲಿ ಸಂಪ್ರಾದಾಯಿಕ ಪದ್ಧತಿಯಲ್ಲಿ ಏಲಕ್ಕಿ ಬೆಳೆಯುತ್ತಾರೆ. ಆಗಸ್ಟ್ ಅಂತ್ಯದಿಂದ ನವೆಂಬರ್ ಕೊನೆಯವರೆಗೆ ಏಲಕ್ಕಿ ಕಟಾವಿನ ಕಾಲವಾಗಿದೆ. ಆದರೆ, ಈ ಬಾರಿ ಮಳೆ ಮುಂದುವರೆದಿರುವುದರಿಂದ ಏಲಕ್ಕಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಏಲಕ್ಕಿ ಬೆಳೆಗಾರರಲ್ಲಿ ಹೆಚ್ಚಿನವರು ಸಣ್ಣ ಬೆಳೆಗಾರರಿದ್ದು, ಬೆಳೆ ಒಣಗಿಸಲು ಡ್ರೈಯರ್ನಂತಹ ಆಧುನಿಕ ವ್ಯವಸ್ಥೆ ಹೊಂದಿಲ್ಲ. ಮಳೆ ನಿಂತು, ಬಿಸಿಲು ಮೂಡಿದಾಗ ಏಲಕ್ಕಿ ಒಣಗಿಸಿ ಮಾರಾಟ ಮಾಡಬೇಕಾಗಿದೆ. ಈಗಾಗಲೇ ಕಟಾವು ಮುಕ್ತಾಯವಾಗಿದ್ದು, 3 ಹಾಗೂ 4ನೇ ಸುತ್ತಿನಲ್ಲಿ ಕಟಾವು ಮಾಡಬೇಕಾದ ಕಾಯಿಗಳು ಮಾತ್ರ ಗಿಡದಲ್ಲಿ ಉಳಿದಿವೆ.
ಮೊದಲ ಹಂತದ ಕಟಾವು ಮಳೆಯ ನಡುವೆಯೇ ನಡೆದಿದೆ. ಅಕ್ಟೋಬರ್ ಬಳಿಕ ಮಳೆ ಕಡಿಮೆಯಾಗಬಹುದೆಂದು ನಿರೀಕ್ಷಿಸಿ ಕಟಾವು ಮುಂದೂಡಿದ್ದ ರೈತರಿಗೆ, ಈಗ ನಿರಂತರವಾಗಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ. ಕಟಾವು ಮಾಡಿದರೆ ಏಲಕ್ಕಿಯನ್ನು ಒಣಗಿಸಲಾಗದ ಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಗಿಡದಲ್ಲೇ ಹಣ್ಣಾದ ಏಲಕ್ಕಿ ನೆಲಕ್ಕೆ ಉದುರಿ ಬಿದ್ದು, ನಷ್ಟವಾಗುತ್ತಿರುವುದು ನುಂಗಲಾರದ ತುತ್ತಾಗಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಜಿಟಿ ಜಿಟಿ ಮಳೆಗೆ ಜನಜೀವನ ಅಸ್ತವ್ಯಸ್ತ
ಸತತ ಮಳೆಯಿಂದ ಕಟಾವು ಮಾಡಲು ಸಮಸ್ಯೆಯಾಗಿದ್ದು, ವನ್ಯಪ್ರಾಣಿಗಳ ಹಾವಳಿ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ರೈತರು ಇತ್ಯಾದಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಏಲಕ್ಕಿ ಒಣಗಿಸಿಕೊಳ್ಳಲು ಸರ್ಕಾರದ ನೆರವಿನಲ್ಲಿ ಸೌಲಭ್ಯ ಕಲ್ಪಿಸಿದರೆ ಮಳೆಗಾಲದಲ್ಲಿ ಕಟಾವಿಗೆ ಬರುವ ಏಲಕ್ಕಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಏಲಕ್ಕಿ ಬೆಳೆಗಾರರ ನಿರೀಕ್ಷೆಯಾಗಿದೆ.