ಮಲೆನಾಡ ಭಾಗದ ಹಿರಿಯ ನಾಯಕರು, ಶೃಂಗೇರಿ ಕ್ಷೇತ್ರದ ಮಾಜಿ ಶಾಸಕರೂ ಹಾಗೂ ಮಾಜಿ ಸಚಿವ ಬೇಗಾನೆ ರಾಮಯ್ಯ ಅವರು ಬೆಂಗಳೂರಿನಲ್ಲಿ ಗುರುವಾರ ನಿಧನರಾಗಿದ್ದಾರೆ.
ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರ ತಂದೆಯವರಾದ ಬೇಗಾನೆ ರಾಮಯ್ಯ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ ಸುಮಾರು 1:45ಕ್ಕೆ ಬೆಂಗಳೂರಿನ ಆಸ್ಟರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮಲೆನಾಡ ಹಿರಿಯ ನಾಯಕರು ಆಗಿದ್ದ, ಅವರು 1978ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬೇಗಾನೆ ರಾಮಯ್ಯ ಅಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮೀಣಾಭಿವೃದಿ ಹಾಗೂ ಗ್ರಾಮೀಣ ನೀರು ಪೂರೈಕೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಮಯ್ಯ, 1972 ರಲ್ಲಿ ನರಸಿಂಹರಾಜಪುರದ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕರಾಗಿ ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಕೆಲಸ ನಿರ್ವಹಿಸಿದ ರಾಮಯ್ಯ ಶೃಂಗೇರಿ ಕ್ಷೇತ್ರ ಕಂಡ ಅಪರೂಪದ ರಾಜಕಾರಣಿ. ಕೆ. ಎನ್ ವೀರಪ್ಪಗೌಡರ ಎದುರಾಳಿಯಾಗಿ ಪ್ರಚಂಡ ಮತಗಳಿಂದ ಗೆದ್ದ ರಾಮಯ್ಯ ಗುಂಡೂರಾವ್ ಸಂಪುಟದಲ್ಲಿ ಸಚಿವರಾಗಿದ್ದರು. ಮಲೆನಾಡು ಭಾಗದಲ್ಲಿ ಬೋರವೆಲ್ ರಾಮಯ್ಯ ಎಂದೇ ಜನಪ್ರಿಯರಾದರು. ಇವರ ಮಗಳು ಆರತಿ ಕೃಷ್ಣ ಅನಿವಾಸಿ ಭಾರತೀಯ ಸಂಘದ ಉಪಾಧ್ಯಕ್ಷರಾಗಿ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿದ್ದಾರೆ. ಬೇಗಾನೆ ರಾಮಯ್ಯ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಚೀಟಿ ವ್ಯವಹಾರ: ಯುವಕನ ಕೊಲೆಯಲ್ಲಿ ಅಂತ್ಯ
ಬೇಗಾನೆ ರಾಮಯ್ಯನವರ ಸಂಸ್ಕಾರವನ್ನು ದಿನಾಂಕ:25.04.2025 ರಂದು ಸಂಜೆ: 03:00 ಗಂಟೆಗೆ ಸೀತಾ ಫಾರಂ, ಹೊಸಹಳ್ಳಿ ಮಂಡಗದ್ದೆ ರಸ್ತೆ, ಶಿವಮೊಗ್ಗ ಜಿಲ್ಲೆಯಲ್ಲಿ ನೆರವೇರಿಸಲು ಕುಟುಂಬದವರು ನಿಶ್ಚಯಸಿರುತ್ತಾರೆ. ಸಾರ್ವಜನಿಕರಿಗೆ ಅಂತಿಮ ದರ್ಶನವನ್ನು ಪಡೆಯಬಹುದಾಗಿದೆ.