ಕುದುರೆಮುಖ ಪೊಲೀಸರ ದೌರ್ಜನ್ಯದಿಂದ ಮನನೊಂದು ದಲಿತ ಯುವಕ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜನಶಕ್ತಿ ಜಿಲ್ಲಾ ಸಮಿತಿಯು, ತಪ್ಪಿತಸ್ಥ ಅಧಿಕಾರಿಗಳು ಮತ್ತು ಗೂಂಡಾಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಳಸದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸುವುದಾಗಿ ಸಮಿತಿ ತಿಳಿಸಿದೆ.
ಜನಶಕ್ತಿ ಜಿಲ್ಲಾ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವಂತೆ, ನಾಗೇಶ್ ಅವರ ಮೇಲೆ ಪೊಲೀಸ್ ಸಿಬ್ಬಂದಿ ಸಿದ್ದೇಶ್ ಹಾಗೂ ಸ್ಥಳೀಯ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ನಂತರ, ಕುದುರೆಮುಖ ಸಬ್ ಇನ್ಸ್ಪೆಕ್ಟರ್ ಆದರ್ಶ್ ಅವರು ಸುಳ್ಳು ಪ್ರಕರಣಗಳನ್ನು ದಾಖಲಿಸಿ, ನಾಗೇಶ್ ಅವರ ಆಟೋವನ್ನು ಸೀಜ್ ಮಾಡಿ ಕಿರುಕುಳ ನೀಡಿದ್ದಾರೆ. ಪೊಲೀಸರ ಈ ನಡೆ ನಾಗೇಶ್ ಅವರ ಆತ್ಮಸ್ಥೈರ್ಯವನ್ನು ಕುಂದಿಸಿ, ಕೊನೆಗೆ ಅವರು ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ ಎಂದು ಸಮಿತಿ ಆರೋಪಿಸಿದೆ.
ಜನಶಕ್ತಿ ಸಮಿತಿಯ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ: 1.ನಾಗೇಶ್ ಮೇಲೆ ಹಲ್ಲೆ ಮಾಡಿದ ಪೊಲೀಸ್ ಸಿದ್ದೇಶ್ ಮತ್ತು ಸಬ್ ಇನ್ಸ್ಪೆಕ್ಟರ್ ಆದರ್ಶ್ ಇಬ್ಬರನ್ನೂ ಸೇವೆಯಿಂದ ವಜಾಗೊಳಿಸಿ, ಅವರ ಮೇಲೆ ಕೊಲೆ ಪ್ರಕರಣಗಳನ್ನು ದಾಖಲಿಸಬೇಕು. 2.ಸ್ಥಳೀಯ ಗೂಂಡಾ ರಕ್ಷಿತ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. 3.ನಾಗೇಶ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಿ, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು. 4.ಪೊಲೀಸ್ ದೌರ್ಜನ್ಯದಿಂದಾಗಿ ಬೀದಿಪಾಲಾಗಿರುವ ನಾಗೇಶ್ ಕುಟುಂಬದ ಸಂಪೂರ್ಣ ನಿರ್ವಹಣಾ ಜವಾಬ್ದಾರಿಯನ್ನು ಪೊಲೀಸ್ ಇಲಾಖೆ ವಹಿಸಿಕೊಳ್ಳಬೇಕು.
ಈ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದಲ್ಲಿ, ರಾಜ್ಯದ ಎಲ್ಲ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಕಳಸ ಚಲೋ ಪ್ರತಿಭಟನೆ ನಡೆಸುವುದಾಗಿ ಜನಶಕ್ತಿ ಜಿಲ್ಲಾ ಸಮಿತಿ ಘೋಷಿಸಿದೆ. ಸಮಾಜದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುವ ಉದ್ದೇಶದಿಂದ ಈ ಹೋರಾಟ ಅನಿವಾರ್ಯವಾಗಿದೆ ಎಂದು ಸಮಿತಿ ಹೇಳಿದೆ.
ಪ್ರಕರಣದ ಹಿನ್ನೆಲೆ ಪೊಲೀಸರಿಂದ ಹಲ್ಲೆಗೊಳಗಾಗಿದ್ದ ದಲಿತ ಯುವಕ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು ಸಂಸೆ ಗ್ರಾಮದ ಬಸ್ತಿಗದ್ದೆ ವ್ಯಾಪ್ತಿಯಲ್ಲಿ ನಡೆದಿತ್ತು. ಮೃತ ಯುವಕ ನಾಗೇಶ್ (29), ಕುದುರೆಮುಖ ಠಾಣೆಯ ಪೊಲೀಸ್ ಪೇದೆ ಸಿದ್ದೇಶ್ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿ ಯುವಕ ನಾಗೇಶನಿಗೆ ಮನಸೋ ಇಚ್ಛೆ ಬಂದಂಗೆ ಹಲ್ಲೆ ಮಾಡಲಾಗಿತ್ತು ಎಂದು ಎಲ್ಲೆಡೆ ಸುದ್ದಿ ಹರಡಿತ್ತು ಹಾಗೂ ಎಫ್ಐಅರ್ ಕೂಡ ದಾಖಲಾಗಿತ್ತು. ಹಾಗೆಯೇ, ನಾಗೇಶ್ ವಿರುದ್ಧ ಸುಳ್ಳು ಎಫ್ಐಆರ್ ಪೊಲೀಸರು ದಾಖಲಿಸಿದ್ದರು ಎನ್ನಲಾಗಿದೆ. ಮೃತ ಯುವಕನ ಜೀಪ್ ಸಹ ಪೊಲೀಸರು ಸೀಜ್ ಮಾಡಿದ್ದರು. ಇದರಿಂದ ಮನನೊಂದು ನಾಗೇಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಪ್ರಕರಣದ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮಟೆ, ಕೊಪ್ಪ DYSP ನೇತೃತ್ವದಲ್ಲಿ ತಂಡ ರಚಿಸಿದ್ದರು. ಮಂಗಳವಾರ ಪೊಲೀಸ್ ಠಾಣೆಯಲ್ಲಿ ಎಂಟು ಸಾವಿರ ಹಣ ದಂಡ ಕಟ್ಟುವಂತೆ ನಾಗೇಶ್ ಗೆ ತಿಳಿಸಿದರು. ಈ ಕುರಿತು ಹಣ ಸಂಗ್ರಹಿಸಲು ಎಲ್ಲರ ಬಳಿ ಕೇಳಿದಾಗ ಇಲ್ಲವೆಂದು ತಿಳಿದಾಗ, ಮಾಡದ ತಪ್ಪಿಗೆ ದಂಡ ಕಟ್ಟಬೇಕೆಂದು ಬುಧಾವಾರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಈದಿನ.ಕಾಮ್ ಗೆ ಮಾಹಿತಿ ತಿಳಿಸಿದ್ದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪೊಲೀಸ್ ದೌರ್ಜನ್ಯ ಆರೋಪ: ದಲಿತ ಯುವಕ ಆತ್ಮಹತ್ಯೆ
ಈ ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಆಮಟೆ ಪೊಲೀಸ್ ಪೇದೆ ಸಿದ್ದೇಶ್ ನನ್ನು ಅಮಾನತ್ತು ಮಾಡಿದ್ದಾರೆ. ಆದರೆ, ಕುದುರೆಮುಖ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.