ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಡವರು ಜೀವನಕ್ಕಾಗಿ ಬದುಕಿಗಾಗಿ ಒಂದು ಹಾಗೂ ಎರಡು ಎಕರೆ ಭೂಮಿ ಸಾಗುವಳಿ ಮಾಡಿ ಬದುಕನ್ನು ಕಟ್ಟಿಕೊಂಡಿರುವ ಕುಟುಂಬಗಳನ್ನು ಅದೆಷ್ಟೋ ಇದೆ. ಸುಮಾರು 30-40 ವರ್ಷಗಳಿಂದ ಆ ಜಾಗದಲ್ಲಿ ವಾಸವಿದ್ದು ಕಷ್ಟಪಟ್ಟು ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ಬೆಳೆಸಿ ಜೀವನವನ್ನು ನಡೆಸುತ್ತಿದ್ದರು. ಇದರಲ್ಲಿ ಸಣ್ಣ, ಮದ್ಯಮ ಹಾಗೂ ದೊಡ್ಡ ರೈತರನ್ನು ಮಲೆನಾಡಿನ ಭಾಗದಲ್ಲಿ ನೋಡಬಹುದು.
ಇನ್ನೂ ಕೂಡ ಕೆಲವರಿಗೆ ಸರಿಯಾದ ಸೂರು ಕೂಡ ಇಲ್ಲ. ಅದೇ ರೀತಿಯಲ್ಲಿ ಸೂರು ಇದ್ದವರಿಗೆ ಹಕ್ಕುಪತ್ರಗಳಿಲ್ಲ. ಆ ಹಕ್ಕು ಪತ್ರಗಳಿಗೋಸ್ಕರ ಅದೆಷ್ಟೋ ಹೋರಾಟ ಹಾಗೂ ಅಲೆದಾಟ ಮಾಡಿದರೂ ಜನರ ಬದುಕಿಗೆ ಅವರದೇ ಸ್ವತ್ತು ಎಂದು ಹೇಳಿಕೊಳ್ಳುವುದಕ್ಕೂ ಒಂದು ಪತ್ರ ಕೂಡ ಈವರೆಗೆ ಸಿಕ್ಕಿಲ್ಲ.
ತಾವು ಬೆಳೆದ ಗಿಡ, ಮರಗಳನ್ನು ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಒತ್ತುವರಿ ತೆರವುಗೊಳಿಸುವ ಆದೇಶವು ಅವರ ಜೀವನವನ್ನೇ ಬುಡಮೇಲುಗೊಳಿಸಿದೆ. ಆದೇಶದ ಪ್ರಕಾರ ಕಂದಾಯ ಹಾಗೂ ಅರಣ್ಯ ಇಲಾಖೆಯವರು ಭೂ ಒತ್ತುವರಿ ತೆರವುಗೊಳಿಸುತ್ತಿದ್ದಾರೆ.

“ಒತ್ತುವರಿ ತೆರವುಗೊಳಿಸುತ್ತೇವೆಂದು ಯಾವುದೇ ತಿಳುವಳಿಕೆ ಪತ್ರವಿಲ್ಲದೆ ಜನರನ್ನು ಒಕ್ಕಲೆಬ್ಬಿಸಿ ಅವರ ಬದುಕನ್ನು ಕಿತ್ತುಕೊಂಡು ಬೀದಿಗೆ ಬೀಳಿಸುತ್ತಿದ್ದಾರೆ” ಎಂದು ಜನಶಕ್ತಿ ಸಂಘಟನೆಯ ಗೌಸ್ ಮೊಹಿದ್ದೀನ್ ಅವರು ಈ ದಿನ.ಕಾಮ್ ಜೊತೆ ತಿಳಿಸಿದ್ದಾರೆ.
“ಒತ್ತುವರಿ ಹೆಸರಿನಲ್ಲಿ ಬಡವರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಈಗಾಗಲೇ ನೂರಾರು ಎಕರೆ ಭೂಮಿಯನ್ನು ಹೊಂದಿರುವ ಭೂ ಮಾಲೀಕರು ಅತಿಕ್ರಮೇಣ ಮಾಡಿಕೊಂಡಿದ್ದರೂ, ಅವರ ವಿರುದ್ಧ ಕ್ರಮವಿಲ್ಲ. ಭೂ ಮಾಲೀಕರಿಗೆ ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡಲು ಹೊರಟಿರುವ ಸರ್ಕಾರದ ನಿಲುವು ಖಂಡನೀಯ. ಮೊದಲು ಭೂ ಮಾಲೀಕರ ಜಾಗವನ್ನು ತೆರವುಗೊಳಿಸಬೇಕೇ ಹೊರತು ಬಡವರದ್ದಲ್ಲ. ಇದೊಂದು ಮಲತಾಯಿ ಧೋರಣೆಯಾಗಿದೆ. ಪರಿಸರ ರಕ್ಷಣೆ ಮತ್ತು ವಿಕೋಪಕ್ಕೆ ಬಡವರು ಮಾಡಿದ ಸೂರು ಅಥವಾ 1-2 ಎಕರೆ ಭೂಮಿ ಮಾಡಿರುವವರು ಕಾರಣರಲ್ಲ” ಎಂದು ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ. ಎಲ್ ಅಶೋಕ್ ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.
ನೂರಾರು ಸಾವಿರಾರು ಎಕರೆ ಒತ್ತುವರಿ ಮಾಡಿದ ಭೂ ಮಾಲೀಕರು, ಕಾರ್ಪೋರೆಟ್ ಕಂಪನಿಗಳು, ಗಣಿಗಾರಿಕೆಗಳು ಹೊರತು ಬದುಕಿಗಾಗಿ ಸೂರು, ತುಂಡು ಭೂಮಿಯನ್ನು ಸಾಗುವಳಿ ಮಾಡಿದ ಕಡುಬಡವರಲ್ಲ. ಒಂದು ವೇಳೆ ಬಡವರು ಸಾಗುವಳಿ ಮಾಡಿದ ಭೂಮಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವುದಾರೆ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಾಗುವಳಿದಾರರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಬೇಕು. ಕಂದಾಯ ಇಲಾಖೆ ಅಥವಾ ಅರಣ್ಯ ಇಲಾಖೆ, ಇನ್ನು ಮುಂದೆ ಒತ್ತುವರಿ ತೆರವು ಹೆಸರಿನಲ್ಲಿ ಬಡವರ ಭೂಮಿ ತೆರವು ಮಾಡಬಾರದು ಎಂದು ಚಿಕ್ಕಮಗಳೂರಿನ ರೈತರಾದ ವೆಂಕಟೇಶ್ ಹಾಗಲಗಂಚಿಯವರು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು ವಿಶ್ವವಿದ್ಯಾನಿಲಯದ ಅಂಕಪಟ್ಟಿ ಸಮಸ್ಯೆಗೆ ತೆರೆ ಎಳೆದ ಸ್ಪೀಕರ್ ಯು ಟಿ ಖಾದರ್: ವಿದ್ಯಾರ್ಥಿಗಳು ನಿರಾಳ
ಇದೇ ರೀತಿಯಲ್ಲಿ ಭೂ ಒತ್ತುವರಿ ತೆರವುಗೂಳಿಸಿದರೆ ಸಾವಿರಾರು ಕುಟುಂಬಗಳು ಬೀದಿ ಪಾಲಾಗುತ್ತಾರೆ. ಇದಕ್ಕೆ ಯಾರು ಹೊಣೆ? ಸರ್ಕಾರ ಗಮನದಲ್ಲಿ ತೆಗೆದುಕೊಂಡು ಭೂಮಿ ಒತ್ತುವರಿ ತೆರವು ಮಾಡಿಸುವುದಕ್ಕಿಂತ ಮೊದಲೇ ಅಲ್ಲಿ ಬದುಕುತ್ತಿರುವ ಕಡು ಬಡಜನರು, ಸೂರು ಕಟ್ಟಿಕೊಂಡವರು ಹಾಗೂ ಎರಡು ಎಕರೆ ಜಾಗ ಮಾಡಿ ಬದುಕುತ್ತಿರುವ ಜನರು ಮತ್ತು ರೈತರ ಬಗ್ಗೆ ಕಾಳಜಿ ವಹಿಸಿ ಅವರಿಗೊಂದು ಬದುಕು ಕಟ್ಟಿಕೊಡಬೇಕೆಂದು ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತಿರುವ ಜನರು ಈ ದಿನ.ಕಾಮ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.