ಚಿಕ್ಕಮಗಳೂರು ಜಿಲ್ಲೆ, ಕಳಸ ತಾಲೂಕಿನ, ಸಂಸೆ ಗ್ರಾಮದ ಬಸೀಕಲ್ ಮಾರ್ಗವಾಗಿ ಹಾದು ಹೋಗುವ ತೋರಣಕಾಡು, ಕುಚಿಗೇರಿ, ಬೊಮ್ಮನಮಕ್ಕಿ, ಮುತ್ತಿನಕೊಂಡ, ದಂಟಗನಕೊಂಡ ಮುಂತಾದ ಗ್ರಾಮಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಜನರು ನೂರಾರು ವರ್ಷಗಳಿಂದ ವಾಸವಾಗಿದ್ದಾರೆ.
ಈ ಎಲ್ಲ ಕುಟುಂಬಗಳಿಗೆ ಮೂಲಭೂತ ಸವಲತ್ತುಗಳಾದ ಸಮರ್ಪಕ ರಸ್ತೆ, ಮೊಬೈಲ್ ನೆಟ್ವರ್ಕ್, ಕುಡಿಯುವ ನೀರು, ಸಮುದಾಯ ಭವನ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಇಲ್ಲಿನ ಜನರು ವಂಚಿತರಾಗಿದ್ದಾರೆ.

ತೋರಣಕಾಡು-ಕುಚಿಗೇರಿ- ಬೊಮ್ಮನಮಕ್ಕಿ ಮುತ್ತಿನಕೊಂಡ- ದಂಟಗನಕಾಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪಂಚಾಯಿತಿ ಕಚ್ಚಾ ರಸ್ತೆ ಇದ್ದು, ಈ ರಸ್ತೆಯು ಹೊಂಡ-ಗುಂಡಿಗಳಿಂದ ಕೂಡಿದೆ. ಈ ರಸ್ತೆಯಲ್ಲಿ ಸಂಚಾರ ಮಾಡುವುದೇ ಬಹಳ ದುಸ್ತರವಾಗಿರುತ್ತದೆ. ಈ ರಸ್ತೆಯ ವ್ಯಾಪ್ತಿಯಲ್ಲಿ ಅಳವಡಿಸಿದ್ದ, ಮೋರಿ ಪೈಪ್ಗಳು ಹಾಗೂ ತಡೆಗೋಡೆಗಳು ಹೆಚ್ಚಿನ ಮಳೆಯಿಂದ ಸಂಪೂರ್ಣವಾಗಿ ಕುಸಿತವಾಗಿವೆ.

ಸ್ಥಳೀಯ ನಿವಾಸಿ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಮಳೆಗಾಲದಲ್ಲಂತೂ ಈ ರಸ್ತೆಯು ಕೆಸರುಮಯವಾಗಿರುತ್ತದೆ. ತುರ್ತಾಗಿ ಆಸ್ಪತ್ರೆಗೆ ಹೋಗಬೇಕೆಂದರೂ ಕೂಡ ತುಂಬಾ ಕಷ್ಟವಾಗಿದೆ. ಈ ಸಮಯದಲ್ಲಿ ಯಾವುದೇ ಬಾಡಿಗೆ ವಾಹನದವರನ್ನು ಕರೆದರು ಯಾರೂ ಬರಲು ಒಪ್ಪುವುದಿಲ್ಲ. ದಿನನಿತ್ಯ ಈ ರಸ್ತೆಯಲ್ಲಿ ಸಂಚಾರ ಮಾಡುವ ಗ್ರಾಮಸ್ಥರಿಗೆ, ವೃದ್ಧರಿಗೆ ಬಹಳ ತೊಂದರೆಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕುಡಿಯುವ ನೀರಿನ ಸಮಸ್ಯೆಯು ತೀವ್ರವಾಗಿದ್ದು, ಮಳೆಗಾಲದಲ್ಲಿ ಕೆಸರು ಮಿಶ್ರಿತ ನೀರನ್ನು ಕುಡಿಯುವ ಪರಿಸ್ಥಿತಿ ಎದುರಾಗಿದೆ. ಸುಮಾರು 1 ಕಿಮೀ ದೂರದಿಂದ ಕುಡಿಯುವ ನೀರನ್ನು ಹೊತ್ತು ತರಬೇಕಾಗಿದೆ. ಇದರಿಂದಾಗಿ ಈ ಗ್ರಾಮದ ಎಲ್ಲ ಗ್ರಾಮಸ್ಥರಿಗೂ ತೊಂದರೆಯಾಗುತ್ತಿದೆ. ನೀರಿನ ಟ್ಯಾಂಕ್ ನಿರ್ಮಿಸಿ, ಪೈಪ್ಲೈನ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲು ಅದೆಷ್ಟೋ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಏನೂ ಪ್ರಯೋಜನವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ತೋರಣಕಾಡಿನಿಂದ ಕುಚಿಗೇರಿ, ಬೊಮ್ಮನಮಕ್ಕಿ, ಮುತ್ತಿನಕೊಂಡ, ದಂಟಗನಕೊಂಡ ಸಂಪರ್ಕ ಕಲ್ಪಿಸುವ ಕಚ್ಚಾ ರಸ್ತೆಯನ್ನು ತುರ್ತಾಗಿ ದುರಸ್ತಿ ಪಡಿಸಿ, ಕಾಂಕ್ರೀಟೀಕರಣಗೊಳಿಸಬೇಕು. ಈ ನಿಟ್ಟಿನಲ್ಲಿ ಸಂಬಂದಪಟ್ಟ ಅಧಿಕಾರಿಗಳು ಸೂಕ್ತಕ್ರಮ ಕೈಗೊಂಡು ನಮ್ಮ ಓಡಾಟಕ್ಕೆ ಅನೂಕೂಲ ಮಾಡಿಕೊಡಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ | ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಮನೆ ಮೇಲೆ ಪೊಲೀಸರ ದಾಳಿ
“ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು ಇಲ್ಲಿನ ಗ್ರಾಮಗಳ ಸಮಸ್ಯೆಗಳನ್ನು ಗಮನಿಸಿ ಆದಷ್ಟು ಬೇಗ ಪರಿಹರಿಸಿಕೊಡಬೇಕು” ಎಂದು ಸ್ಥಳೀಯರು ಒತ್ತಾಯಿಸಿದರು.

ಗಿರಿಜಾ ಎಸ್ ಜಿ
ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ, ಮಹಿಳಾ ಪರ ಹೋರಾಟಗಾರ್ತಿ.