ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೇಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮಲೆನಾಡಿನ ಸಂರಕ್ಷಣ ವೇದಿಕೆ ಕರೆ ನೀಡಿದೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ವೇದಿಕೆಯ ಮುಖಂಡರು ತಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟರು.
ಮಲೆನಾಡಿನ ಆರ್ಥಿಕ ಶಕ್ತಿಯಾದ ಅಡಿಕೆ ಬೆಳೆಗೆ ಬಂದ ಹಳದಿಎಲೆ, ಎಲೆಚುಕ್ಕಿ ರೋಗಗಳ ಬಗ್ಗೆ ಹಾಲಿ ಕಾಸರಗೋಡಿನ ವಿಟ್ಲದಲ್ಲಿರುವ ಕೇಂದ್ರ ಸರ್ಕಾರದ ಸಿ.ಪಿ.ಸಿ.ಆರ್.ಐ ನಂತಹ ಸಂಶೋದನ ಕೇಂದ್ರವನ್ನ ಮಲೆನಾಡಿನಲ್ಲಿ ಸ್ಥಾಪಿಸಬೇಕು ಮತ್ತು ಈಗಾಗಲೇ ರೋಗ ಬಂದು ಸಂಪೂರ್ಣ ನಾಶವಾಗಿರುವ ತೋಟದ ಮಾಲೀಕರಿಗೆ ಪರ್ಯಾಯ ಬೆಳೆ ಬೆಳೆಯಲು 6 ಕಂತುಗಳಲ್ಲಿ ಹತ್ತು ಲಕ್ಷ ರೂಪಾಯಿ ಒದಗಿಸಬೇಕು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಗೆ 99 ವರ್ಷ ಗುತ್ತಿಗೆ ಆದಾರದಲ್ಲಿ ಕಾಫಿ ಬೆಳೆಯಲು ಕೊಟ್ಟಿರುವ ಸಾವಿರಾರು ಎಕರೆ ಕಾಫಿ ತೋಟ ಅನಧಿಕೃತವಾಗಿ ಕಂಪನಿ ಹಿಡಿತದಲ್ಲಿದೆ. ಆ ಎಲ್ಲಾ ಗುತ್ತಿಗೆಯನ್ನು ರದ್ದು ಮಾಡಿ ತೋಟಗಳನ್ನು ವಶಕ್ಕೆ ಪಡೆದು ಭೂರಹಿತ ಕೃಷಿ ಕಾರ್ಮಿಕರಿಗೆ ಹಂಚಬೇಕು ಎಂದರು.
2014ರಲ್ಲಿ ಮೋದಿ ಸರ್ಕಾರ ಕೃಷಿಗೆ ಬೆಂಬಲ ಬೆಲೆ ಮತ್ತು ಸ್ವಾಮಿನಾಥನ್ ವರದಿಯಂತೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆಯನ್ನು ನೀಡಿತ್ತು. ಆದರೆ, ಅದನ್ನು ಅನುಷ್ಠಾನಗೊಳಿಸಲಿಲ್ಲ. ರೈತರ ಬೆಳೆಗೆ ಕಾನೂನು ಬದ್ದ ಬೆಂಬಲ ಬೆಲೆ ಮತ್ತು ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನ ಮಾಡಿ ಎಲ್ಲಾ ರೈತರ ಸಾಲಮನ್ನ ಮಾಡಬೇಕು ಎಂದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ಅಥವಾ ಬಫರ್ ಜೋನ್ ಅಥವಾ ಕಂದಾಯ ಪರಿದಿಯಲ್ಲಿರುವ ಸ್ವಇಚ್ಛೆಯಿಂದ ಹೊರ ಹೋಗುವವರಿಗೆ ಪುನರ್ ವಸತಿ ಪ್ಯಾಕೇಜಿನಂತ ಪರಿಹಾರ ನೀಡಬೇಕು ಈಗ ಸ್ವ ಇಚ್ಛೆಯಂತೆ ಕಾಲುಭಾಗದಷ್ಟೆ ಪರಿಹಾರ ನೀಡಿ ಸಮಸ್ಯೆಯನ್ನು ಇದನ್ನು ಸರಿಪಡಿಸಬೇಕು ಎಂದರು.
ಕೇಂದ್ರ ಸರ್ಕಾರದ ರಸ್ತೆ ಅಭಿವೃದ್ಧಿ ಯೋಜನೆಗಳೆಲ್ಲವು, ಅನಗತ್ಯವಾಗಿ ಚತುರ್ಥ, ಅಷ್ಟಪಥ, ದಶಪಥವೆಂದು ಕಂಪನಿ ಸರಕುಗಳ ಸಾಗಾಣಿಕೆಗೆ ಅನುಕೂಲವಾಗುವಂತೆ ಮಾಡಲಾಗುತ್ತಿದೆ. ಹಳ್ಳಿಯ ಯಾವ ರಸ್ತೆಯಲ್ಲೂ ಕನಿಷ್ಟ ಮೋಟಾರ್ ಸೈಕಲ್ ಓಡಿಸಲಾಗದಷ್ಟು ಹೀನಾಯ ಸ್ಥಿತಿಯಲ್ಲಿದೆ. ಆ ಎಲ್ಲಾ ರಸ್ತೆಗಳಿಗೆ ಕೇಂದ್ರ ಸರ್ಕಾರದ ಯೋಜನೆಯಿಂದ ಅಭಿವೃದ್ಧಿ ಪಡಿಸಬೇಕು ಎಂದರು.
ಅರಣ್ಯ ಯೋಜನೆಯಿಂದ ಪರಿಸರ ಸ್ನೇಹಿಯಾಗಿ ಬದುಕುತ್ತಿದ್ದ ಮಲೆನಾಡಿನ ಉನ್ನತ ಸಂಸ್ಕೃತಿಗೆ ದಕ್ಕೆ ತಂದು ಕಾಡಿನ ಮಕ್ಕಳನ್ನು ಕಳ್ಳರನ್ನಾಗಿಸುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ತಾಲ್ಲೂಕನ್ನು ಘಟಕವನ್ನಾಗಿಟ್ಟುಕೊಂಡು ಶೇಕಡ 33 ರಷ್ಟು ವೈಜ್ಞಾನಿಕವಾಗಿ ಇರಬೇಕಾದ ಕಾಡನ್ನು ಅರಣ್ಯ ವಲಯವೆಂದು ಜನವಸತಿ ಸಾಗುವಳಿ ಭೂಮಿ ಹಾಗೂ ಜನರ ಜಮೀನು ಮತ್ತು ಭೂಮಿ ನಿರ್ವಹಣೆಗೆ ಅವಶ್ಯಕವಾದ ಅರಣ್ಯವನ್ನು ವಿಭಾಗಿಸಿ ರೈತರಿಗೂ, ಇಲಾಖೆಗೂ ಸಂಘರ್ಷವಾಗುವುದನ್ನು ತಪ್ಪಿಸಲು ಆರಣ್ಯವಲಯ ಮತ್ತು ಕೃಷಿವಲಯವನ್ನಾಗಿ ಮಾಡಬೇಕು ಎಂಧು ಹೇಳಿದರು.
ಈ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಲೋಕಸಭೆಯಲ್ಲಿ ಮಂಡಿಸಬಹುದಾ ಸಾಮರ್ಥ್ಯವಿರುವ ಅಭ್ಯರ್ಥಿ ಗೆಲ್ಲಿಸಬೇಕು ನಮ್ಮ ಅಭಿಪ್ರಾಯದಲ್ಲಿ ಕೆ. ಜಯಪ್ರಕಾಶ್ ಹೆಗ್ಡೆ ಸಮರ್ಥರಿದ್ದಾರೆ. ಬೆಂಬಲಿಸಬೇಕೆಂದು ಸಮಿತಿ ನಿರ್ಧರಿಸಿದೆ ಎಂದರು.
ಶ್ರೀನಿವಾಸ ಪೂಜಾರಿಯವರು ಈಗಾಗಲೆ ವಿರೋಧ ಪಕ್ಷದ ನಾಯಕನ ಹುದ್ದೆ ಹೊಂದಿರುವುದರಿಂದ, ಅವರು ಈ ಜಿಲ್ಲೆಯ ಸಮಸ್ಯೆಗಳನ್ನು ಗಂಭೀರವಾಗಿ ವಿಧಾನ ಸಭೆಯಲ್ಲಿ ಚರ್ಚಿಸಿ ಬಗೆಹರಿಸಬೇಕೆಂದು ಮಲೆನಾಡಿನ ಸಂರಕ್ಷಣ ವೇದಿಕೆ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕ ರಾಜ್ಯ ಸಮಿತಿ ಸದಸ್ಯರು, ಕರ್ನಾಟಕ ಜನಶಕ್ತಿ ಸಂಘಟಕರು, ಪ್ರಗತಿ ಪರ ಚಿಂತಕರು ಹಾಗೂ ಪರಿಸರವಾದಿಗಳು ಇದ್ದರು.