ನಕ್ಸಲ್ ಶರಣಾಗತಿ ರಾಜ್ಯ ಸರ್ಕಾರ ಕರೆ ನೀಡಿದ ಬಳಿಕ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ 6 ಮಂದಿ ನಕ್ಸಲರು ಜ. 8ರಂದು ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದೆ ಶರಣಾಗಲಿದ್ದಾರೆ.
ಮುಂಡಗಾರು ಲತಾ, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರೆಪ್ಪ ಅರೋಲಿ, ಕೆ. ವಸಂತ, ಟಿ.ಎನ್. ಜೀಶ್ 2024ರ ನಕ್ಸಲ್ ಶರಣಾಗತಿ ಪ್ಯಾಕೇಜ್ನಡಿ ಸಮಾಜದ ಮುಖ್ಯವಾಹಿಗೆ ಬರುವುದು ಬಹುತೇಕ ಖಚಿತವಾಗಿದೆ.
ಉಡುಪಿ ಜಿಲ್ಲೆ ಕಾರ್ಕಳ ಸಮೀಪದಲ್ಲಿ ನಕ್ಸಲ್ ಮುಖಂಡ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ಭೂಗತರಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ನಕ್ಸಲ್ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ನಡೆಸಿದ್ದರು.
ಮುಂಡಗಾರು ಲತಾ ಅವರು ಮುಖ್ಯವಾಹಿನಿಗೆ ಬರುವ ಕುರಿತು ಸಮಿತಿ ಸದಸ್ಯರ ಮುಂದೆ ಮಾತನಾಡಿದ್ದು, “ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಆರು ಜನ ಕಾಮ್ರೇಡ್ಗಳು ಮುಖ್ಯವಾಹಿನಿಗೆ ಬರಬೇಕು ಎಂದುಕೊಂಡಿದ್ದೇವೆ. ಸಕಾರಾತ್ಮಕವಾಗಿ ಯೋಚಿಸಿ ನಿರ್ಧಾರ ಮಾಡಿದ್ದೇವೆ” ಎಂದಿದ್ದಾರೆ.
“ಮೊದಲ ಹಂತದಲ್ಲಿ ನಾವು ಒಂದು ಕಡೆ ಸೇರಿ ಚರ್ಚಿಸಿದ್ದೇವೆ. ಈಗ ಎರಡನೇ ಹಂತದಲ್ಲಿ ಮುಖ್ಯವಾಹಿನಿಗೆ ಬರಲು ಉತ್ಸುಕರಾಗಿದ್ದೇವೆ. ಎರಡು ಸಮತಿಯವರು ನಮ್ಮನ್ನು ಬಂದು ಭೇಟಿಯಾಗಿದ್ದಾರೆ. ಸರ್ಕಾರದ ನಿರ್ಧಾರಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಸಮಿತಿಯವರ ಮಾತುಗಳ ನಮಗೆ ಖುಷಿ ತಂದಿವೆ. ನಾವೆಲ್ಲ ಕಾಮ್ರೇಡ್ಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ” ಎಂದು ತಿಳಿಸಿದ್ದಾರೆ.
“ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಸರ್ಕಾರ ನಮ್ಮ ಭರವಸೆ ಈಡೇರಿಸುತ್ತದೆ ಎಂಬ ಭರವಸೆ ನಮಗಿದೆ. ಸಮಿತಿಯ ಸದಸ್ಯರು ಸಾಕಷ್ಟು ಶ್ರಮ ಹಾಕಿ ನಮ್ಮನ್ನು ಮುಖ್ಯವಾಹಿನಿಗೆ ಕರೆತರಲು ಶ್ರಮಿಸಿದ್ದಾರೆ. ಅವರ ಮಾತಿಗೆ ಬೆಲೆ ಕೊಡುತ್ತೇವೆ. ಪ್ರಜಾತಾಂತ್ರಿಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಹೋರಾಟ ಮುಂದುವರಿಯುತ್ತದೆ. ಜನರ ಪರವಾಗಿ ನಾವು ಕೊನೆ ತನಕ ನಿಲ್ಲುತ್ತೇವೆ. ಈ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ನಮ್ಮ ಉಸಿರು ಇರೋವರೆಗೂ ನಮ್ಮ ಹೋರಾಟ ಇರಲಿದೆ” ಎಂದು ಮುಂಡಗಾರು ಲತಾ ಸ್ಪಷ್ಟಪಡಿಸಿದ್ದಾರೆ.
ಶರಣಾಗುವ ನಕ್ಸಲರು ಯಾರು?
- ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ)
- ವನಜಾಕ್ಷಿ (ಬಾಳೆಹೊಳೆ ಕಳಸ)
- ಸುಂದರಿ (ಕುಂತಲೂರು ದಕ್ಷಿಣ ಕನ್ನಡ)
- ಮಾರಪ್ಪ ಅರೋಳಿ (ಕರ್ನಾಟಕ)
- ವಸಂತ ಟಿ (ತಮಿಳುನಾಡು)
- ಎನ್. ಜೀಶಾ (ಕೇರಳ)