ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಚಿಂತಾಮಣಿ ನಗರದ ಝಾನ್ಸಿರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಸಚಿವ ಡಾ. ಎಂ ಸಿ ಸುಧಾಕರ್ ಅಭಿಮಾನ ಬಳಗದಿಂದ ನಡೆಸುತ್ತಿರುವ ʼಹಿರಿಯ ನಾಗರಿಕರಿಗೆ ವಿವಿಧ ಸ್ಪರ್ಧೆʼ ಕಾರ್ಯಕ್ರಮಕ್ಕೆ ಹಸಿರು ಬಾವುಟ ಹಾರಿಸುವ ಮೂಲಕ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ ಸಿ ಸುಧಾಕರ್ ಚಾಲನೆ ನೀಡಿದರು.
“ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಚಿಂತಾಮಣಿ ನಗರವನ್ನು ಸ್ವಚ್ಛ ಸುಂದರ ಹಾಗೂ ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಪ್ಲಾಸ್ಟಿಕ್ ಚೀಲಗಳಲ್ಲಿ ಕಸವನ್ನು ತುಂಬಿ ವಾಹನಗಳಲ್ಲಿ ಬಂದು ಎಸೆದು ಹೋಗುತ್ತಿರುವುದನ್ನು ನೋಡಿದರೆ ಸ್ವಚ್ಛ ನಗರವನ್ನಾಗಿಸಲು ಅಸಾಧ್ಯವಾಗಿದ್ದು, ಸಾರ್ವಜನಿಕರ ಸಹಕಾರವಿದ್ದಲ್ಲಿ ಮಾತ್ರ ಸ್ವಚ್ಛ ನಗರದ ಕನಸು ನನಸಾಗುತ್ತದೆ” ಎಂದು ಸಚಿವ ಡಾ. ಎಂ ಸಿ ಸುಧಾಕರ್ ಹೇಳಿದರು.
“ಕ್ಷೇತ್ರದ ಅಭಿವೃದ್ಧಿಗಾಗಿ ರಸ್ತೆ, ಕ್ರೀಡಾಂಗಣ, ಒಳಚರಂಡಿ, ಕೆರೆ, ಚೆಕ್ ಡ್ಯಾಂ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದು, ₹1,500 ಕೋಟಿ ವೆಚ್ಚ ವ್ಯಯ ಮಾಡಲಾಗುತ್ತಿದೆ. ಭಕ್ತರಹಳ್ಳಿ ಅರಸನಕೆರೆ, ನೆಕ್ಕುಂದಿ ಕೆರೆ, ಕನ್ನಂಪಲ್ಲಿಕೆರೆ ಸೇರಿದಂತೆ ತಾಲೂಕಿನ ವಿವಿಧ ಕೆರೆಗಳನ್ನು ಹಾಗೂ ಮುಂಗಾನಹಳ್ಳಿ ಹೋಬಳಿಯ ಕುಶಾವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂಗಳನ್ನು ನಿರ್ಮಿಸುತ್ತಿದ್ದು, ಇದರಿಂದ ಒಮ್ಮೆ ಭರಪೂರ ಮಳೆಯಾದರೆ 4-5 ವರ್ಷಗಳಿಗೆ ಆಗುವಷ್ಟು ನೀರು ಸಂಗ್ರಹಣೆಯಾಗಲಿದೆ” ಎಂದರು.
“ವಿರೋಧ ಪಕ್ಷದವರಿಗೆ ಇವೆಲ್ಲವೂ ಗೌಣ್ಯವಾಗಿರುತ್ತದೆ ಹಾಗೂ ಅವರ ಹತ್ತು ವರ್ಷಗಳ ಅವಧಿಗಳಲ್ಲಿ ಯಾವುದೇ ಅಭಿವೃದ್ಧಿಯಾಗದಿರುವುದನ್ನು ಜನತೆಗೆ ತಿಳಿದಿದೆ” ಎಂದು ಕಿಡಿಕಾರಿದರು.
ವಿವಿಧ ರೀತಿಯ ಸ್ಪರ್ಧೆಗಳಾದ ವಾಕಿಂಗ್, ಮಡಿಕೆ ಹೊಡೆಯುವುದು, ಗುಂಡುಎಸೆತ, ಮ್ಯೂಸಿಕಲ್ ಛೇರ್ ಹಾಗೂ ಚಮಚ ಮತ್ತು ನಿಂಬೆ ಹಣ್ಣಿನ ಓಟಗಳನ್ನು 60, 70, 80, 90 ವರ್ಷ ಮೇಲ್ಪಟ್ಟರ ಶ್ರೇಣಿಗಳನ್ನು ವರ್ಗೀಕರಿಸಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಟೋಟಗಳನ್ನು ಏರ್ಪಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಪೋಷಕರ ಆಯ್ಕೆ ನಮ್ಮ ಕೈಯ್ಯಲ್ಲಿಲ್ಲ: ಆರೋಗ್ಯದ ಆಯ್ಕೆ ನಮ್ಮ ಕೈಯ್ಯಲ್ಲಿದೆ: ಡಾ. ಸಿ.ಎಸ್. ಹಿರೇಮಠ್
ಪ್ರತಿಯೊಂದು ಸ್ಪರ್ಧೆಯಲ್ಲೂ ಮೂವರು ವಿಜೇತರನ್ನು ಆರಿಸಲಾಯಿತು. ಅವರಿಗೆ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಂದು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಸಂಘಟಕ ಡಾ. ವಿ ಅಮರ್, ವೈ ಬಿ ಅಶ್ವತ್ಥ ನಾರಾಯಣ, ಹೆಚ್ ಎನ್ ಮಹೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಜಗನ್ನಾಥ್, ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ, ವೆಂಕಟರವಣಪ್ಪ, ಉಮೇಶ್, ಕಲ್ಯಾಣ್ ರೆಡ್ಡಿ, ಫಾರೂಕ್, ಆರ್ ಡಿ ಮಂಜುನಾಥ್, ಎಸ್ ಮಂಜುನಾಥ್, ಮುನಿರಾಜು ಸೇರಿದಂತೆ ಇತರರು ಇದ್ದರು.