ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆ. ಸರ್ಕಾರ ವಿಶೇಷಚೇತನರಿಗಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದರೂ ಸಮರ್ಪಕವಾಗಿ ತಲುಪುತ್ತಿಲ್ಲ. ಇದರಿಂದ ಸೌಲಭ್ಯಕ್ಕಾಗಿ ಪರದಾಡಬೇಕಾಗಿದೆ ಎಂದು ಚಿಂತಾಮಣಿ ತಾಲೂಕಿನ ವಿಶೇಷಚೇತನರು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಉಪ್ಪರಪೇಟೆ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರಿಗೆ ರ್ಯಾಂಪ್ ಮಾಡದೆ ಇರುವ ಕಾರಣ ಆಕ್ರೋಶಗೊಂಡ ಅಂಗವಿಕಲರು ಪಂಚಾಯಿತ ಎದುರು ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ವಿಶೇಷಚೇತನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಿರಣ ನಾಯಕ್ ಮಾತನಾಡಿ, “ಸರ್ಕಾರದ ವಿವಿಧ ಕಚೇರಿಗಳಲ್ಲಿ ಅಂಗವಿಕಲರ ಅನುಕೂಲಕ್ಕಾಗಿ ರ್ಯಾಂಪ್ ವ್ಯವಸ್ಥೆ ಇರಬೇಕು. ದೈಹಿಕ ನ್ಯೂನತೆಯಿಂದ ಕೂಡಿದ ವಿಶೇಷಚೇತನರು ಸರಾಗವಾಗಿ ಕಚೇರಿಗಳನ್ನು ತಲುಪಲು ಸಾಧ್ಯವಾಗುತ್ತದೆ. ಆದರೆ, ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಈ ಸೌಲಭ್ಯವೇ ಇಲ್ಲ” ಎಂದು ಆರೋಪಿಸಿದರು.
“ಅಂಗವಿಕಲರೆಂದು ಅನುಕಂಪ ತೋರಿಸುವವರೇ ಹೆಚ್ಚು.ಆದರೆ, ಸರ್ಕಾರಿ ಸೌಲಭ್ಯ ಒದಗಿಸಿಕೊಡುವಲ್ಲಿ ಆಡಳಿತಯಂತ್ರ ಹಿಂದೆ ಇದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
.”ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ರ್ಯಾಂಪ್ ವ್ಯವಸ್ಥೆ ಚಾಲ್ತಿಗೆ ಬರುತ್ತದೆ. ಆದಾದ ನಂತರ ಮತ್ತೆ ಮೂಲೆಗುಂಪು ಆಗುತ್ತಿದೆ. ಇದರಿಂದ ವಿಶೇಷಚೇತನರು ಮೆಟ್ಟಿಲುಗಳನ್ನು ಹತ್ತಿ ಕಚೇರಿ ತಲುಪಲು ಮತ್ತೊಬ್ಬರ ಸಹಾಯ ಪಡೆಯುವ ಅನಿವಾರ್ಯತೆ ಎದುರಾಗಿದೆ” ಎಂದರು.
“ಐದರಿಂದ ಆರು ಮೆಟ್ಟಿಲು ಇರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಅಂಗವಿಕಲರು ಪ್ರವೇಶ ಮಾಡಲು ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಅದರಿಂದ ಉಪ್ಪರಪೇಟೆ ಸೇರಿದಂತೆ ಚಿಂತಾಮಣಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ರ್ಯಾಂಪ್ ವ್ಯವಸ್ಥೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಯುಕೆಇಎಂ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಎನ್ಒಸಿ ಕೊಡಲು ತಕರಾರು: ಗ್ರಾ.ಪಂ ಎದುರು ಗ್ರಾಮಸ್ಥರ ಪ್ರತಿಭಟನೆ
“ರ್ಯಾಂಪ್ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಿಜ್ವಾನ್ ಬಾಷಾ, ರಿಹಾನ ತಾಜ್, ನೂರ್ ಜಾನ್, ರಾಮಕೃಷ್ಣ, ಮಂಜುಳಾ, ಮೊಹಮ್ಮದ್ ಅಜರುದ್ದೀನ್, ಮುನಿಯಪ್ಪ, ನಿಖಿಲ್, ಮುನೇಂದ್ರ, ಅಂಜಮ್ಮ, ಕವಿತಾ, ಹರ್ಷಿತ್ ಸೇರಿದಂತೆ ಮತ್ತಿತರರು ಇದ್ದರು.