ಈ ದೇಶದಲ್ಲಿ ಮಠಾಧೀಶರು, ರಾಜಕಾರಣಿಗಳು ಇರುವವರೆಗೂ ಜಾತಿ ನಿರ್ಮೂಲನವಾಗುವುದಿಲ್ಲ ಎಂದು ಹಿರಿಯ ಸಾಹಿತಿ ಡಾ. ಬಿ ಎಲ್ ವೇಣು ಕಳವಳ ವ್ಯಕ್ತಪಡಿಸಿದರು.
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಕೆಂಧೂಳಿ ಪತ್ರಿಕೆಯ 200ನೇ ಸಂಚಿಕೆ ಬಿಡುಗಡಿ ಮಾಡಿ ಮಾತನಾಡಿದ ಅವರು, “ಎಲ್ಲವನ್ನೂ ಜಾತಿಯಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಪತ್ರಿಕೆಗಳಲ್ಲಿ ಬರಹಗಾರರಿಗೆ ಸ್ಥಳವಿತ್ತು. ಅದರಲ್ಲೂ ಬಂಡಾಯ ಬರಹಗಾರರಿಗೆ ಜಾಗವಿತ್ತು. ಆದರೆ ಈಗ ಎಲ್ಲವೂ ಜಾತಿಯಿಂದ ಗುರುತಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿರುವುದೇ ಮಠಾಧೀಶರು ಮತ್ತು ರಾಜಕಾರಣಿಗಳಿಂದ” ಎಂದು ಬೇಸರ ವ್ಯಕ್ತಪಡಿಸಿದರು.
“ಸಂವಿಧಾನ ಎಲ್ಲರನ್ನು ಸಮಾನವಾಗಿ ಕಾಣುತ್ತಿದೆ. ಮುಸಲ್ಮಾನರಿಗೆ ನೀಡಿರುವ ಓಟನ್ನು ಕಿತ್ತುಕೊಳ್ಳಬೇಕೆಂದು ಒಬ್ಬ ಸ್ವಾಮಿ ಹೇಳಿದರೆ, ಮತ್ತೊಬ್ಬ ರಾಜಕಾರಣಿ ಮುಸಲ್ಮಾನರ ಜೊತೆ ಹಿಂದೂಗಳು ಯಾವುದೇ ರೀತಿಯ ವ್ಯವಹಾರವಿಟ್ಟುಕೊಳ್ಳಬಾರದು ಎಂದು ಫರ್ಮಾನು ಹೊರಡಿಸುತ್ತಾರೆ. ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ದ ಮುಸಲ್ಮಾನರೂ ಹೋರಾಡಿದ್ದಾರೆನ್ನುವುದನ್ನು ಮೊದಲು ಅರ್ಥಮಾಡಿಕೊಂಡರೆ ಒಳ್ಳೆಯದು” ಎಂದರು.

“ಮುದ್ರಣ ಮಾಧ್ಯಮಕ್ಕಿರುವ ಬದ್ಧತೆ ಎಲೆಕ್ಟ್ರಾನಿಕ್ ಮಾಧ್ಯಮಕ್ಕಿಲ್ಲದಂತಾಗಿದೆ. ಒಂದು ಪಕ್ಷ, ವ್ಯಕ್ತಿಯ ತುತ್ತೂರಿಗಳಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು ಕೆಲಸ ಮಾಡುತ್ತಿರುವುದು ದುರಂತ. ಈ ನಿಟ್ಟಿನಲ್ಲಿ ಮುದ್ರಣ ಮಾಧ್ಯಮಗಳು ತನ್ನ ಘನತೆಯನ್ನು ಉಳಿಸಿಕೊಂಡಿವೆ” ಎಂದು ಅಭಿಪ್ರಾಯಪಟ್ಟರು.
“ಲಂಕೇಶ್ ಪತ್ರಿಕೆ ನಂತರ ವಾರ ಪತ್ರಿಕೆಗಳ ಕಾಲ ಮುಗಿಯಿತು ಎನ್ನುವಾಗಲೇ ಕೆಂಧೂಳಿ ಪತ್ರಿಕೆ ಗುಣಮಟ್ಟ ಕಾಪಾಡಿಕೊಂಡು ಬದ್ಧತೆಯನ್ನು ಕಾಪಾಡಿಕೊಂಡಿದೆ. ಯಾರ ಪರವೂ ಇಲ್ಲದೆ ಸೈದ್ಧಾಂತಿಕವಾಗಿ ಜನಪರವಾಗಿವ ಇಂಥ ಕಾಲಘಟ್ಟದಲ್ಲೂ ನಿಂತಿರುವುದು ತುರುವನೂರು ಮಂಜುನಾಥ ವೃತ್ತಿಗೆ ಬದ್ಧರಾಗಿ ನಿಂತಿದ್ದಾರೆ” ಎಂದರು.
“ಕೆಂಧೂಳಿ ವಾರ ಪತ್ರಿಕೆ ನೂರು ವಸಂತಗಳನ್ನು ದಾಟಲಿ, ಇನ್ನು ಮುಂದೆ ಒಂದಿಷ್ಟು ಚಳಿಯನ್ನು ಬಿಟ್ಟು ವ್ಯವಸ್ಥೆಯ ವಿರುದ್ದ ಭ್ರಷ್ಟರ, ದುಷ್ಟರ ಧೂಳು ಜಾಡಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಪತ್ರಿಕೆಗೆ ಚಂದಾದಾರರು ಜಾಸ್ತಿಯಾಗಬೇಕು. ಸರ್ಕಾರ ಮತ್ತು ಖಾಸಗಿಯವರು ಜಾಹಿರಾತುಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು” ಎಂದರು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಕೆಂಧೂಳಿ ಡಿಜಿಟಲ್ ಮೀಡಿಯಾ ಉದ್ಘಾಟಿಸಿ ಮಾತನಾಡಿ, “ಡಿಜಿಟಲ್ ಮೀಡಿಯಾ ಬಂದ ಮೇಲೆ ಪತ್ರಿಕೆಗಳು ಆತಂಕದಲ್ಲಿವೆ. ಟಿ ವಿ ಹಾವಳಿಯ ನಡುವೆಯೂ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ. ಸ್ವಾತಂತ್ರ್ಯಾ ನಂತರ ಅಭಿವೃದ್ಧಿ ಪತ್ರಿಕೋದ್ಯಮವಿತ್ತು. ಮುದ್ರಣ ಮಾಧ್ಯಮ ಸ್ವಂತಿಕೆ ಉಳಿಸಿಕೊಂಡು ಬರುತ್ತಿದೆ. ಕೆಂಧೂಳಿ ವಾರಪತ್ರಿಕೆ ಧೂಳೆಬ್ಬಿಸುವ ಕೆಲಸ ಮಾಡಬೇಕು. ಒಳ್ಳೆಯ ಪತ್ರಿಕೆ, ಪತ್ರಕರ್ತ ಇಂದಿನ ಸಮಾಜಕ್ಕೆ ಬೇಕು. ಸರ್ಕಾರ ದಾರಿ ತಪ್ಪಿಸಿದಾಗ ಎಚ್ಚರಿಸಿ ಸರಿದಾರಿಗೆ ತರುವ ಜವಾಬ್ದಾರಿ ಪತ್ರಿಕೆಗಳ ಮೇಲಿದೆ” ಎಂದು ಹೇಳಿದರು.
ಹಿರಿಯ ಪತ್ರಕರ್ತ ಸುಭಾಷ್ ಹೂಗಾರ್ ಮಾತನಾಡಿ, “ಟಿವಿಗಳಲ್ಲಿ ಧಾರವಾಹಿ, ಬಿಗ್ಬಾಸ್ ನೋಡುವವರಿದ್ದಾರೆ. ನ್ಯೂಸ್ ನೋಡುವವರನ್ನು ಹುಡುಕಬೇಕಾಗಿದೆ. ಪತ್ರಿಕೋದ್ಯಮ ಉಳಿದೆಲ್ಲಾ ವೃತ್ತಿಯಂತಲ್ಲ. ವಿಭಿನ್ನವಾಗಿರಬೇಕು. ವಿಪರ್ಯಾಸವೆಂದರೆ, ಈಗಿನ ಪತ್ರಿಕೋದ್ಯಮ ವ್ಯಾಪಾರೀಕರಣವಾಗಿದೆ. ಹಾಗಾಗಿ ಮುದ್ರಣ ಮಾಧ್ಯಮದ ಘನತೆ ದಿನೇ ದಿನೆ ಕುಗ್ಗುತ್ತಿದೆ. ಆವಿಷ್ಕಾರ ತಂತ್ರಜ್ಞಾನ ಬೆಳವಣಿಗಯಾಗಿದೆ. ಪತ್ರಿಕೆಗಳ ಪ್ರಸಾರ ಕುಸಿಯುತ್ತಿದೆ. ಜನರ, ಓದುಗರ ಪರವಾಗಿರುವ ಪತ್ರಿಕೋದ್ಯಮ ಜೀವಂತವಾಗಿರುತ್ತದೆ” ಎಂದರು.
ಸಾಹಿತಿ ಮತ್ತು ಪತ್ರಕರ್ತ ಆರ್ ಜಿ ಹಳ್ಳಿ ನಾಗರಾಜ್ ಮಾತನಾಡಿ, “ಮುದ್ರಣ ಮಾಧ್ಯಮ ಇಂದು ತನ್ನತನವನ್ನು ಬಿಟ್ಟುಕೊಟ್ಟಿಲ್ಲ. ಒಂದಿಷ್ಟು ಹಾದಿ ತಪ್ಪಿದ್ದರೂ ಘನತೆಯನ್ನು ಉಳಿಸಿಕೊಂಡಿವೆ. ಆದರೆ ಎಲೆಕ್ಟ್ರಾನಿಕ್ ಮೀಡಿಯಾಗಳ ವ್ಯವಸ್ಥೆ ಹದಗೆಟ್ಟಿದ್ದು, ವೃತ್ತಿಯ ಬದ್ಧತೆಯನ್ನೇ ಕಳೆದುಕೊಂಡುಬಿಟ್ಟಿವೆ” ಎಂದು ಕಳವಳ ವ್ಯಕ್ತಪಡಿದಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮರಳಿ ಮನೆ ಸೇರಿದ 101 ವರ್ಷದ ಅಜ್ಜಿ, ನಿತ್ಯಾನಂದ ಒಳಕಾಡುರವರ ಮಾನವೀಯ ಸೇವೆಗೊಂದು ಸಲಾಂ
ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ ಮಾತನಾಡಿ, “ಪತ್ರಿಕೆ ನಡೆಸುವುದು ಕಷ್ಟಕರವಾಗಿರುವ ಇಂದಿನ ಕಾಲದಲ್ಲಿ ಕೆಂಧೂಳಿ ವಾರ ಪತ್ರಿಕೆ ತನ್ನದೇ ಆದ ವೈಶಿಷ್ಟತೆಯನ್ನು ಉಳಿಸಿಕೊಂಡು ಬರುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಬಾಲಭವನದ ಅಧ್ಯಕ್ಷ ಬಿ ಆರ್ ನಾಯ್ಡು, ಕೆಂಧೂಳಿ ವಾರ ಪತ್ರಿಕೆ ಸಂಪಾದಕ ತುರುವನೂರು ಮಂಜೂನಾಥ್, ಅರುಣ್ ಕುಮಾರ್, ಪತ್ರಕರ್ತರಾದ ಎಚ್ ಲಕ್ಷ್ಮಣ, ನರೇನಹಳ್ಳಿ ಅರುಣ್ ಕುಮಾರ್ ಇದ್ದರು.