ಚಳ್ಳಕೆರೆ ನಗರದಲ್ಲಿ ಮಳೆ ಸುರಿದು ಅಂಡರ್ಪಾಸ್ಗಳು ತುಂಬಿ ನಿಂತಿವೆ. ಒಳಚರಂಡಿ, ರಾಜಕಾಲುವೆಯಲ್ಲಿ ಕಸ ಕಡ್ಡಿಗಳು ಶೇಖರಣೆಗೊಂಡು ರಸ್ತೆ ಮೇಲೆಲ್ಲಾ ನೀರು ಹರಿಯುತ್ತಿದ್ದರೂ ಸ್ವಚ್ಛಗೊಳಿಸದೆ, ನಗರಸಭೆ ಆಡಳಿತ ಅಧಿಕಾರಿಗಳು ಮತ್ತು ನಗರಸಭಾ ಸದಸ್ಯರು ಅಧ್ಯಯನ ಪ್ರವಾಸ ಕೈಗೊಂಡಿರುವ ಬಗ್ಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಾಗರಿಕರು ಕಿಡಿಕಾರಿದ್ದಾರೆ.
ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಗೆ ನಗರದ ಅಂಡರ್ಪಾಸ್ಗಳು, ಚರಂಡಿಗಳು ತುಂಬಿ ಹರಿದಿದ್ದು, ರಸ್ತೆ ಮೇಲೆಲ್ಲಾ ಚರಂಡಿಯ ಗಲೀಜು ಹರಿಯುತ್ತಿದೆ. ಇದನ್ನು ಸ್ವಚ್ಛಗೊಳಿಸದೆ ಸಾರ್ವಜನಿಕರಿಗೆ ರೋಗಗಳ ಭೀತಿ ಎದುರಾಗಿದೆ. ಚರಂಡಿಯಿಂದ ಹೊರಬಂದ ಕಸ ರಸ್ತೆಗಳಲ್ಲಿ ತುಂಬಿ ತುಳುಕುತ್ತಿದೆ. ಇದೆಲ್ಲವನ್ನೂ ಮಳೆಗೂ ಮೊದಲೇ ಸಮರ್ಪಕವಾಗಿ ನಿರ್ವಹಿಸಬೇಕಾಗಿತ್ತು. ಇದನ್ನು ನಿರ್ವಹಿಸುವಲ್ಲಿ ನಗರಾಡಳಿತ ಸೋತಿದೆ. ಜನಪ್ರತಿನಿಧಿಗಳು ಕೂಡ ವಿಫಲರಾಗಿದ್ದಾರೆ.
ಪಾರ್ಕಿಂಗ್ ಸಮಸ್ಯೆ, ಕಸದ ಸಮಸ್ಯೆ, ಕಸದ ವಿಲೇವಾರಿ ಸಮಸ್ಯೆ ನಗರದಲ್ಲಿ ತುಂಬಿ ತುಳುಕುತ್ತಿದ್ದು, ಇದಕ್ಕೆ ಪರಿಹಾರವೆಂಬುದು ಮರೀಚಿಕೆಯಾಗಿದೆ ಎಂಬುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.

“ಚರಂಡಿಗಳು ಹೂಳು ತುಂಬಿಕೊಂಡು, ಮಳೆ ಬಂದು ಅಂಡರ್ ಪಾಸ್ಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ಇದನ್ನು ಸರಿಪಡಿಸಬೇಕಾಗಿದ್ದ ನಗರಸಭೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಇದೀಗ ಇವರೇ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಇಲ್ಲಿ ಜನರ ಸಮಸ್ಯೆ ಕೇಳುವವರಾರು?” ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐದು ವರ್ಷ ಆಡಳಿತ ಅವಧಿಯ ನಗರಸಭೆಯಲ್ಲಿ ಈಗಿನ ಸದಸ್ಯರು ಮಧ್ಯಪ್ರದೇಶದ ಕ್ಲೀನ್ ಸಿಟಿ ಎಂದು ಹೆಸರಾಗಿರುವ ಇಂದೋರ್ನ ಸ್ವಚ್ಛತೆಯ ಬಗ್ಗೆ ಅಧ್ಯಯನಕ್ಕೆ ತೆರಳಿದ್ದು, ಇವರ ಅಧಿಕಾರಾವಧಿ ಇನ್ನು ಕೇವಲ ಐದು ತಿಂಗಳು ಬಾಕಿ ಇದೆ. ಈ ಆಡಳಿತ ಅವಧಿಯ ಅಂತ್ಯದಲ್ಲಿ ಈ ಅಧ್ಯಯನ ಬೇಕಿತ್ತೇ? ಉಳಿದಿರುವ ಐದು ತಿಂಗಳ ಅಧಿಕಾರದ ಅವಧಿಯಲ್ಲಿ ನಗರಸಭೆ ಸದಸ್ಯರು ಯಾವ ಪರಿವರ್ತನೆ ಮಾಡಲಿದ್ದಾರೆ, ಅದನ್ನು ಇಲ್ಲಿ ಐದು ತಿಂಗಳ ಅವಧಿಯಲ್ಲಿ ಕಾರ್ಯಗತಗೊಳಿಸಲು ಸಾಧ್ಯವೇ? ಎಂದು ಜನರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಸತತ 7ನೇ ಬಾರಿಗೆ ಸ್ವಚ್ಛತೆ ನಗರ ಎಂದು ಹೆಸರು ಪಡೆದಿರುವ ಕ್ಲೀನ್ ಇಂಧೋರ್ನಲ್ಲಿ ಒಳ್ಳೆಯ ಚರಂಡಿ ವ್ಯವಸ್ಥೆ, ಕಸ ವಿಲೇವಾರಿ, ಕಸದಿಂದ ಆದಾಯ ಮತ್ತು ವಿದ್ಯುತ್ ತಯಾರಿಕೆಯಂತಹ ಕಾರ್ಯಕ್ರಮಗಳ ಬಗ್ಗೆ ಅಧ್ಯಯನಕ್ಕೆ ಸುಮಾರು ₹25 ಲಕ್ಷ ವೆಚ್ಚ ಮಾಡಿಕೊಂಡು ಅಧ್ಯಯನ ಪ್ರವಾಸಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿರುವ ಸಾಮಾಜಿಕ ಕಾರ್ಯಕರ್ತರು, ನಾಗರಿಕರು ನಗರಂಗೆರೆ ಅಂಡರ್ ಪಾಸಿನಲ್ಲಿ ಈಗ ಸುಮಾರು ನಾಲ್ಕೈದು ವರ್ಷಗಳಿಂದ ನೀರು ಸಂಗ್ರಹವಾಗುತ್ತಿತ್ತು. ಅದರ ನಿರ್ವಹಣಾ ಕಾರ್ಯಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ, ರೈಲ್ವೆ ಇಲಾಖೆಯೊಂದಿಗೆ ವ್ಯವಹರಿಸಿ ಈವರೆಗೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅಲ್ಲದೆ ನಗರದ ಒಳಚರಂಡಿ ಅವ್ಯವಸ್ಥೆಗಳ ಬಗ್ಗೆ, ಕಸದ ವಿಲೇವಾರಿ, ರಾಜಕಾಲುವೆ ಸ್ಥಿತಿಯ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ, ನಾಲ್ಕೂವರೆ ವರ್ಷಗಳ ಅಧಿಕಾರ ಅವಧಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ಈಗ ಅಧಿಕಾರ ಅವಧಿಯ ಐದು ತಿಂಗಳು ಬಾಕಿ ಇರುವ ಸಮಯದಲ್ಲಿ ಅಧ್ಯಯನಕ್ಕೆ ತೆರಳಿದ್ದು, ಬಂದ ನಂತರ ಐದು ತಿಂಗಳಲ್ಲಿ ಇವರು ಚಳ್ಳಕೆರೆ ನಗರವನ್ನು ಸ್ವಚ್ಛ ನಗರವಾಗಿ ಪರಿವರ್ತಿಸಲು ಸಾಧ್ಯವೇ?.
“ನಾಲ್ಕೂವರೆ ವರ್ಷಗಳಲ್ಲಿ ಆಗದ ಕೆಲಸಗಳು ಐದು ತಿಂಗಳಲ್ಲಿ ಸಾಧ್ಯವಾಗಲಿದೆಯೇ? ಇದು ಜನರ ತೆರಿಗೆ ಹಣವನ್ನು ವ್ಯಯಿಸುವ, ಕೇವಲ ವೈಯಕ್ತಿಕ ಪ್ರವಾಸವಾಗಿ ಗೋಚರಿಸುತ್ತಿದೆ” ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಕಿಡಿಕಾರಿದರು.

ತ್ಯಾಗರಾಜನಗರ ನಿವಾಸಿ ಉದ್ಯೋಗಿ ರವಿಕುಮಾರ್ ಮಾತನಾಡಿ, “ಕಸ ವಿಲೇವಾರಿ ಮತ್ತು ಕಸ ಸಾಗಿಸುವ ವಾಹನಗಳು, ಸ್ವಚ್ಛಗೊಳಿಸುವ ಜೆಸಿಬಿ ಇತರ ವಾಹನಗಳು ದುರಸ್ತಿಯಾಗದೇ ನಿಂತು ನಗರಸಭೆ ಆವರಣದಲ್ಲಿ ಧೂಳು ತಿನ್ನುತ್ತಿವೆ. ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಸರಿಪಡಿಸುವಂತೆ ಕೇಳಿದರೆ ದುರಸ್ತಿ, ರಿಪೇರಿಗೆ ಹಣವಿಲ್ಲವೆಂದು ಹೇಳುತ್ತಾರೆ. ಆದರೆ ಅವಧಿ ಮುಗಿಯುವ ಈ ಹೊತ್ತಿನಲ್ಲಿ ವಾಹನಗಳ ರಿಪೇರಿಗೆ ಇಲ್ಲದ ಹಣ ಪ್ರವಾಸಕ್ಕೆ ಎಲ್ಲಿಂದ ಬಂದಿದೆ? ಮಳೆ ಸುರಿದ ಕಾರಣ ನಗರದ ಹಲವೆಡೆ ಅಸ್ತವ್ಯಸ್ತ ಉಂಟಾಗಿದ್ದು, ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳೇ ಸ್ಥಳದಲ್ಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಮುಖಂಡ ಪಟೇಲ್ ಕೆ ಬಿ ಕೃಷ್ಣಮೂರ್ತಿ ಮಾತನಾಡಿ, “ಗುಂಡಿಬಿದ್ದಿರುವ ರಸ್ತೆಗಳನ್ನು ದುರಸ್ತಿ, ನಿರ್ವಹಣೆ ಮಾಡಿಲ್ಲ. ಚರಂಡಿಗಳು ಹೂಳು ತುಂಬಿವೆ. ಮುಂಜಾಗೃತಾ ಕ್ರಮವಾಗಿ ರಸ್ತೆ, ಚರಂಡಿ ನಿರ್ಮಾಣ, ನಿರ್ವಹಣೆ ಕ್ರಮ ಕೈಗೊಳ್ಳಬೇಕಿತ್ತು. ವಾಡಿಕೆಗೆ ಮುನ್ನವೇ ಮುಂಗಾರು ಆರಂಭವಾಗಿದೆ. ಚಳ್ಳಕೆರೆಯಲ್ಲಿ ಮಳೆ ಸುರಿದು ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದು ಹೀಗೆ ಮುಂದುವರೆದರೆ ಅಜ್ಜನ ಗುಡಿ ರಸ್ತೆ, ಕಾಟಯ್ಯನಹಟ್ಟಿಯ ತಗ್ಗು ಪ್ರದೇಶಲ್ಲಿ, ಬೆಂಗಳೂರು ರಸ್ತೆ ಸೇರಿದಂತೆ ನಗರದ ಹಲವೆಡೆಗಳಲ್ಲಿ ನೀರು ನುಗ್ಗಿ ನೆರೆ ಉಂಟಾಗುವ ಸಾಧ್ಯತೆಗಳಿವೆ. ಇದಕ್ಕೆಲ್ಲ ಮಳೆಗಾಲಕ್ಕೆ ಮುನ್ನವೇ ತಯಾರಿ ಮಾಡಿಕೊಳ್ಳಬೇಕಿದ್ದ ಇಡೀ ನಗರಾಡಳಿತ ಮಧ್ಯಪ್ರದೇಶಕ್ಕೆ ಅಧ್ಯಯನಕ್ಕೆ ತೆರಳಿದ್ದು, ಜನರ ಸಂಕಷ್ಟ ಕೇಳುವವರಿಲ್ಲದಾಗಿದೆ. ಕೆಲವೇ ತಿಂಗಳು ಬಾಕಿ ಇರುವ ಅವಧಿಯಲ್ಲಿ ಯಾವ ಅಭಿವೃದ್ಧಿ ಸಾಧ್ಯವಿದೆ. ಮೋಜು ಮಸ್ತಿಗಾಗಿ ಪ್ರವಾಸ ಕೈಗೊಂಡಿದ್ದಾರಾ ಎನ್ನುವ ಅನುಮಾನಗಳು ಜನರಿಗೆ ಮೂಡಿವೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕ ವರ್ಗದ ಸಮಸ್ಯೆ ಪರಿಹರಿಸಿ; ಎಐಯುಟಿಯುಸಿ, ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ.
ಅಧ್ಯಯನಕ್ಕೆ ತೆರಳಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಾಪಾಸ್ ಮರಳಿದ ನಂತರ ಎಷ್ಟರಮಟ್ಟಿಗೆ ಸುರಕ್ಷತೆ ಮತ್ತು ಸ್ವಚ್ಛತೆ ಕಾರ್ಯಗಳು ನೆಡೆಯಲಿವೆ ಎಂದು ಚಳ್ಳಕೆರೆ ಜನತೆ ಕಾದು ನೋಡಬೇಕಿದೆ. ಪ್ರವಾಸದಿಂದ ನಗರಕ್ಕೆ ಉತ್ತಮ ಯೋಜನೆ, ಸ್ವಚ್ಛತೆ ಬರುವುದೋ ಇಲ್ಲವೇ ಕೇವಲ ಪ್ರವಾಸದ ರೀತಿ ಪರಿವರ್ತನೆಯಾಗುವುದೋ ಎನ್ನುವುದು ಹಿಂದಿರುಗಿದ ನಂತರ ನಗರಸಭೆ ಮಾಡುವ ನಿರ್ವಹಣಾ ಕಾರ್ಯಗಳ ಮೇಲೆ ನಿಂತಿದೆ. ಇಂಧೋರ್ ಅಧ್ಯಯನ ಪ್ರವಾಸದ ಮೂಲಕ ನಗರಸಭೆ, ಜನಪ್ರತಿನಿಧಿಗಳು ಚಳ್ಳಕೆರೆಯ ಸ್ವಚ್ಛತೆಗೆ ನಾಂದಿ ಹಾಡಲಿ, ಈ ಮೂಲಕ ಸ್ವಚ್ಛತೆಯ ಕಾರ್ಯದಲ್ಲಿ ಯಶಸ್ಸು ಸಾಧಿಸಿದರೆ ಪ್ರವಾಸಕ್ಕೊಂದು ಅರ್ಥ ದೊರೆಯಲಿದೆ ಎನ್ನುವುದು ಚಳ್ಳಕೆರೆ ನಾಗರಿಕರ ಆಶಯ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು
Good sir,
Super sir