ಪ್ರಸ್ತುತ ಕಾಲಘಟ್ಟದಲ್ಲಿ ಬುದ್ಧ ಇದ್ದಿದ್ದರೆ ಹಣ ಪಡೆಯದೇ ಮತ ಹಾಕುವ ಮತ್ತು ಭ್ರಷ್ಟಾಚಾರ ಮಾಡದ ರಾಜಕಾರಣಿಯನ್ನು ಹುಡುಕಿಕೊಂಡು ಬಾ ಎಂದು ಹೇಳುತ್ತಿದ್ದರೇನೋ ಎಂದು ಮಾಜಿ ಸಚಿವ ಎಚ್ ಆಂಜನೇಯ ಹೇಳಿದರು.
ಕೋಟೆ ನಾಡು ಚಿತ್ರದುರ್ಗದಲ್ಲಿ ಈ ದಿನ.ಕಾಮ್ ನೇರ ಪ್ರಸಾರ ಮತ್ತು ಸಹಯೋಗದೊಂದಿಗೆ ನವಯಾನ ಬುದ್ಧ ಸಂಘ ಹಮ್ಮಿಕೊಂಡಿದ್ದ ಬುದ್ಧಧಮ್ಮ ಸಾಹಿತ್ಯ ಸಮ್ಮೇಳನ 2023ರ ʼಬುದ್ಧಧಮ್ಮ ಮತ್ತು ವಿಚಾರ ಸಂಕಿರಣಗಳುʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಪ್ರಸ್ತುತದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ದಲಿತ ಸಮುದಾಯಕ್ಕೆ ಬೌದ್ಧ ಧರ್ಮ ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ ನವಯಾನ ಅತಿ ಅವಶ್ಯಕವೆನಿಸುತ್ತದೆ. ಭೂಮಿ ಮತ್ತು ರಾಷ್ಟ್ರೀಯ ಸಂಪತ್ತು ರಾಷ್ಟ್ರೀಕರಣವಾಗಿ ಸಮಾನ ಹಂಚಿಕೆಯಾಗಬೇಕೆಂಬುದು ಅವರ ಕನಸಾಗಿತ್ತು. ಅದನ್ನು ಮುಂದುವರೆಸಿದ ಇಂದಿರಾಗಾಂಧಿಯವರು ದಲಿತರಿಗೆ ಭೂಮಿ ಸಿಗಲು ʼಉಳುವವನೇ ಭೂ ಒಡೆಯʼ ಎಂಬ ಕಾನೂನನ್ನು ಜಾರಿಗೆ ತಂದು ಅನುಷ್ಠಾನ ಮಾಡಿದರು. ಹಾಗಾಗಿ ಕರ್ನಾಟಕದಲ್ಲಿ ದಲಿತರಿಗೆ ಒಂದಷ್ಟು ಭೂಮಿ ಸಿಕ್ಕಿತ್ತು” ಎಂದು ಹೇಳಿದರು.
“ನೆರೆಯ ಆಂಧ್ರಪ್ರದೇಶದಲ್ಲಿ ನಕ್ಸಲ್ ಚಳವಳಿ ಹುಟ್ಟಲು, ಭೂಮಿ ಸಮಾನ ಹಂಚಿಕೆಯಾಗದೆ ಇರುವುದೇ ಕಾರಣವಾಗಿತ್ತು. ಹಾಗಾಗಿ ಅಲ್ಲಿ ನಕ್ಸಲ್ ಬೆಳೆದಿದೆ. ಇಂದಿನ ನವಯಾನ ಧಮ್ಮ ಶೋಷಿತ ಜನಾಂಗಗಳಿಗೆ ದಾರಿಯಾಗಿದೆ. ಮುಂದೆ ಅವಕಾಶ ಸಿಕ್ಕರೆ ನವಯಾನ ಧಮ್ಮದಲ್ಲಿ ಜೊತೆಗೂಡುತ್ತೇನೆ” ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಹರ್ಶಕುಮಾರ್ ಕುಗ್ವೆ ಮಾತನಾಡಿ, “ಸಂಪತ್ತು ಎನ್ನುವುದು ಜನಗಳ ಮಧ್ಯೆ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ಬುದ್ಧನ ಆಶಯವಾಗಿತ್ತು. ಅದೇ ಆಶಯದಂತೆ ಇಂದಿನ ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಯೋಜನೆಗಳು ಜಾರಿಯಾಗಿವೆ. ಇದನ್ನು ಬುದ್ಧನ ನವಯಾನ ಧಮ್ಮದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಗೌತಮಬುದ್ಧ ಹೇಳಿದ್ದಾನೆ. ಅಂಬೇಡ್ಕರ್ ಪ್ರತಿಪಾದಿಸುವ ಪ್ರಕಾರ ಭಾರತದ ಇತಿಹಾಸ ಸುಮಾರು 2,000 ವರ್ಷಗಳಿಂದಲೂ ಬೌದ್ಧ ಧರ್ಮ ಮತ್ತು ಹಿಂದೂ ಧರ್ಮದ ಸಂಘರ್ಷದ ಇತಿಹಾಸವಾಗಿದೆ” ಎಂದರು.
“ನೂರಾರು ವರ್ಷ ಹಲವು ಶತಮಾನಗಳು ವಿಜೃಂಭಣೆಯಿಂದ ಅನುಸರಿಸಿದ ಬೌದ್ಧ ಧರ್ಮ, ಬುದ್ಧನ ಚಿಂತನೆಗಳು ಈ ದೇಶದಿಂದ ಮರೆಯಾಗಲು ಕಾರಣ. ಅದರ ಒಳಗೆ ನಂತರದ ಕಾಲಘಟ್ಟದಲ್ಲಿ ಸಂಭವಿಸಿದ ಹಲವು ಬದಲಾವಣೆಗಳು ಮತ್ತು ಬೆಳವಣಿಗೆಗಳಿಗೆ ಕಾರಣವಾಗಿದೆ. ಈ ಅಂಶಗಳನ್ನು ಗುರುತಿಸಿ ಬುದ್ಧ ಮತ್ತು ಧಮ್ಮ ಕೃತಿಯಲ್ಲಿ ದಾಖಲಿಸಿದ್ದು ಅಂಬೇಡ್ಕರ್ ಅವರ ಹೆಗ್ಗಳಿಕೆಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಸಮಾರೋಪದಲ್ಲಿ ಮಾತನಾಡಿ, “ನಾವು ಪಕ್ಷದಲ್ಲಿ ನಿಷ್ಠೆಯಿಟ್ಟು ಸಿದ್ಧಾಂತಕ್ಕೆ ಕಟ್ಟುಬಿದ್ದು ಕೆಲಸ ಮಾಡುತ್ತೇವೆ. ಆದರೆ ಸಮಾಜದ ವಿಷಯ ಬಂದಾಗ ಅದರ ಏಳಿಗೆಗಾಗಿ ಕಾರ್ಯ ನಿರ್ವಹಿಸಲು ಸಿದ್ಧರಾಗಿರುತ್ತೇವೆ. ನವಯಾನ ಧಮ್ಮ ಮುಂದಿನ ಯುವ ಮನಸ್ಸುಗಳಿಗೆ ಮತ್ತು ಎಳೆಯ ಮನಸ್ಸುಗಳಿಗೆ ಅತ್ಯವಶ್ಯಕವಾಗಿದೆ. ಇದರ ವಿಚಾರಗಳನ್ನು ಬಿತ್ತರಿಸಿ ಪಸರಿಸುವುದು ಅವಶ್ಯಕ. ಈ ನಿಟ್ಟಿನಲ್ಲಿ ನವಯಾನ ಬುದ್ಧ ಸಂಘ ಮುಂದುವರೆಯಲಿ ಅದಕ್ಕೆ ನಾವೂ ಕೂಡ ಸಹಕಾರ ನೀಡುತ್ತೇವೆ” ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಸಿ ಕೆ ಮಹೇಶ್ವರಪ್ಪ ಮಾತನಾಡಿ, “ಅಂಬೇಡ್ಕರ್ ಪ್ರತಿಪಾದಿಸಿದ ಕೆಲವು ಸಿದ್ಧಾಂತ, ವಿಷಯಗಳನ್ನು ಒಳಗೊಂಡು ನವಯಾನವನ್ನು ಪ್ರಾರಂಭಿಸಿದ್ದೇವೆ. ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗಳಿಗೆ ಪ್ರಚಾರ ಮಾಡಿ ಅನುಸರಿಸಲು ತಿಳಿಸಲಾಗಿದೆ. ಈ ನವಯಾನ ಧಮ್ಮವು ದಲಿತರ ಶೋಷಣೆಯನ್ನು ತಪ್ಪಿಸಬಲ್ಲದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಹಣಕ್ಕಾಗಿ ಮೂವರ ಮೇಲೆ ಹಲ್ಲೆ: ಇಬ್ಬರ ಸಾವು
“ದಲಿತ ರಾಜಕಾರಣಿಗಳು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲೂ ನಿರ್ಣಾಯಕ ಎನಿಸುವಷ್ಟು ಮತಗಳಿರುವ ದಲಿತ ಸಮುದಾಯದ ರಾಜಕೀಯ ಪ್ರಜ್ಞೆಯನ್ನು ಬೆಳೆಸಿ, ಎಲ್ಲ ದಲಿತ ರಾಜಕಾರಣಿಗಳು ಒಟ್ಟಾಗಿ ದಲಿತರ ರಾಜಕೀಯವನ್ನು ಆರಂಭಿಸಿದಾಗ ಮಾತ್ರ ರಾಜಕೀಯವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಯಾರನ್ನೂ ಅವಲಂಬಿಸದೆ ದಲಿತರಿಗೆ ನ್ಯಾಯ ಸಿಗಲು ಸಾಧ್ಯವಿದೆ” ಎಂದು ಅಭಿಪ್ರಾಯಪಟ್ಟರು.
ವಕೀಲ ರಮೇಶ್, ರಾಮು ಗೋಸಾಯಿ, ಸಂಜೀವ್ ಕುಮಾರ್ ನೈಜತೆ, ದುರ್ಗೇಶಪ್ಪ, ಶಿವಾನಂದ್ ಕೆಳಗಿನಮನಿ, ಶ್ರೀನಿವಾಸ್ ದೊಡ್ಡೇರಿ, ಮಮತಾ, ರಾಮು, ಉಪಾಸಕ ಕಸವನಹಳ್ಳಿ ಶಿವಣ್ಣ, ಯಲ್ಲಪ್ಪ, ಮಲ್ಲಿಕಾರ್ಜುನ್, ಆನಂದ್, ಸಿದ್ದೇಶ್, ವಿಶ್ವನಾಥ್ ಸೇರಿದಂತೆ ಇತರರು ಇದ್ದರು.