ಹೈದರಾಬಾದ್ ಕರ್ನಾಟಕದ ಸಣ್ಣಕಥೆಗಳಲ್ಲಿ ದಲಿತ ಲೋಕದ ಸ್ವರೂಪ ಎನ್ನುವ ವಿಷಯದ ಮೇಲೆ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಸಂಶೋಧನೆ ಕೈಗೊಂಡು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿ ಗೌರವಿಸಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವೆಂಕಟಾಪುರ ಗ್ರಾಮದ ಎಲ್ಲಪ್ಪ ಜಿ ಅವರು ಡಾ. ನಟರಾಜ್ ಆರ್ ಎಂಬುವವರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರಧಾನ ಮಾಡಿ ಗೌರವಿಸಿದೆ.
ಕರ್ನಾಟಕದಲ್ಲಿ ಮೊಳಕಾಲ್ಮೂರು ಅತ್ಯಂತ ಹಿಂದುಳಿದ ತಾಲೂಕು. ಬಡತನ ಮತ್ತು ನಿರುದ್ಯೋಗ ಇಂದಿಗೂ ತೀರದ ಸಮಸ್ಯೆ. ಕೂಲಿ ಕಾರ್ಮಿಕ ವರ್ಗದ ಕುಟುಂಬಗಳೇ ಹೆಚ್ಚಾಗಿವೆ. ಇನ್ನು ಪರಿಶಿಷ್ಟರ ಬದುಕು ಹೇಳತೀರದು. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಇಂದಿಗೂ ಹೋರಾಟ ನಿಂತಿಲ್ಲ. ಇದರ ಮಧ್ಯೆ ಇರುವ ಸಂಪನ್ಮೂಲ, ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯುವ ಪ್ರತಿಭೆಗಳಿಗೇನೂ ಕೊರತೆ ಇಲ್ಲ.
ಬಡತನವೊಂದು ಓದಿಗೆ ನಿರ್ಣಾಯಕವಲ್ಲ. ನೂರು ಸಮಸ್ಯೆಗಳನ್ನು ಮೆಟ್ಟಿ ಕಠಿಣ ಪರಿಶ್ರಮದ ಮೂಲಕ ಯಾರೇ ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಬಾರಿ ಹಂಪಿ ವಿಶ್ವವಿದ್ಯಾಲಯದಿಂದ ಎಲ್ಲಪ್ಪ ಜಿ ಡಾಕ್ಟರೇಟ್ ಪದವಿ ಪಡೆದಿರುವುದೇ ಸಾಕ್ಷಿಯಾಗಿದೆ.

ಎಲ್ಲಪ್ಪ ಜಿ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲೂಕಿನ ದೇವಸಮುದ್ರ ಹೋಬಳಿಯ ವೆಂಕಟಾಪುರ ಎನ್ನುವ ಕುಗ್ರಾಮದವರು. ಪರಿಶಿಷ್ಟ ಜಾತಿಗೆ ಸೇರಿದ ಬಡ ಕುಟುಂಬದ ಗಂಗಪ್ಪ ಹಾಗೂ ತಿಮ್ಮಕ್ಕ ಎನ್ನುವ ದಂಪತಿಯ ಮಗ. ಪ್ರಾಥಮಿಕ ಶಿಕ್ಷಣವನ್ನು ವೆಂಕಟಾಪುರ, ಪ್ರೌಢ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ದೇವಸಮುದ್ರ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೊಳಕಾಲ್ಮೂರಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಿ ಎ ಪದವಿಯನ್ನು ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ. ಬಿಇಡಿ ಶಿಕ್ಷಕರ ತರಬೇತಿಯನ್ನು ಪಿವಿಎಸ್ ಶಿಕ್ಷಣ ಮಹಾವಿದ್ಯಾಲಯ ಚಿತ್ರದುರ್ಗದಲ್ಲಿ, ಎಂಎ ಪದವಿಯನ್ನು ನಂದಿಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಿಯುವ ಹಂಬಲ ಮತ್ತು ಆಸಕ್ತಿ ಯಾವುದೇ ಮನುಷ್ಯನನ್ನು ಸುಮ್ಮನೆ ಕೂರಿಸುವುದಿಲ್ಲ. ದಮನಿತ ಸಮುದಾಯಗಳಿಗೆ ಶಿಕ್ಷಣ ಹುಲಿಯ ಹಾಲು ಇದ್ದಂತೆ. ಅದನ್ನು ಕುಡಿಯುವ ಹಂಬಲ ಇರಾದೆ ಇದ್ದೇ ಇತ್ತು. ಹಾಗಾಗಿ 2018-19ನೇ ಸಾಲಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪದವಿ ಪ್ರವೇಶ ಪಡೆದರು. ತಾವು ಕೆಲಸ ಮಾಡುವ ಸ್ಥಳಕ್ಕೆ ಸಮೀಪವಾಗುವ ಹಾಗೂ ವಿಶ್ವವಿದ್ಯಾಲಯದ ಮಾನ್ಯತ ಕೇಂದ್ರವಾದ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ಗೆ ಪ್ರವೇಶ ದೊರೆಯಿತು. ಈ ಎರಡು ಸಾಂಸ್ಕೃತಿಕ ಕಲಿಕಾ ಕೇಂದ್ರಗಳ ಒಡನಾಟದಲ್ಲಿ ಅಧ್ಯಯನ ನಡೆದದ್ದು ಒಂದು ರೀತಿಯ ಖುಷಿಯ ವಿಚಾರವೇ.
ಇಪ್ಪತ್ತು ಇಪ್ಪತೈದು ವರ್ಷಗಳ ಕಾಲ ಜೀತ ಮಾಡಿದ ವ್ಯಕ್ತಿಯೊಬ್ಬರ ಮಗ ಸತತ ಪ್ರಯತ್ನ ಹಾಗೂ ಪರಿಶ್ರಮದ ಹಾದಿಯಲ್ಲಿ ಸಾಗಿದ ಪಯಣ ಕುತೂಹಲಕಾರಿಯಾದದ್ದು. ದಮನಿತರು ವಿಶ್ವವಿದ್ಯಾಲಯದ ಮೆಟ್ಟಿಲುಗಳನ್ನು ಹತ್ತುವುದು ಅಷ್ಟು ಸುಲಭವಲ್ಲ. ಹಿಂದೆ ಮುಂದೆ ಯಾವುದೇ ಬಲಗಳು ಇಲ್ಲದ ವ್ಯಕ್ತಿ ಓರ್ವ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನಿಂತ ಹೆಜ್ಜೆಗಳು ತೊಟ್ಟ ರೂಪಗಳು ಹಲವು.
ಪ್ರತಿಫಲಕ್ಕೆ ಪ್ರತಿಫಲನ ಇದ್ದೇ ಇರುತ್ತದೆ. ಈ ಮೇಲಿನ ಪಯಣ ಹೂವಿನ ಹಾಸಿಗೆಯದ್ದಲ್ಲ. ಸವಾಲುಗಳನ್ನು ಸ್ವೀಕರಿಸಿ, ಮೆಟ್ಟಿನಿಂತು ಕನ್ನಡ ವಿಶ್ವವಿದ್ಯಾಲಯಕ್ಕೆ ಇವರು ಸಲ್ಲಿಸಿದ ಸಂಶೋಧನೆಯ ಮಹಾ ಪ್ರಬಂಧಕ್ಕೆ ಈ ಬಾರಿ ಡಾಕ್ಟರೇಟ್ ಪದವಿ ಹಾಗೂ ಅತ್ಯುತ್ತಮ ದರ್ಜೆಯನ್ನು ನೀಡಿ ಗೌರವಿಸಿದೆ.
ಈ ಸುದ್ದಿ ಓದಿದ್ದೀರಾ? ಸದಾಶಿವ ಆಯೋಗದ ವರದಿ ಅಂಗೀಕಾರಕ್ಕೆ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಆಗ್ರಹ
ಇಂತಹ ಸಂದರ್ಭದಲ್ಲಿ ತಂದೆಯ ತ್ಯಾಗ ಮತ್ತು ಕುಟುಂಬದ ಶಕ್ತಿಗಳು ಬೇಕೇ ಬೇಕು ಎನ್ನುತ್ತಾರೆ. ಇಂತಹ ಸಾಮಾನ್ಯ ವ್ಯಕ್ತಿ ಎಲ್ಲಪ್ಪ. ಜಿ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿರುವುದು ಪ್ರಶಂಸನೀಯವಾಗಿದೆ. ಅಲ್ಲದೆ ಇವರ ಈ ಸಾಧನೆಗೆ ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥರು, ಮಾರ್ಗದರ್ಶಕರು, ಉಪನ್ಯಾಸಕ ವರ್ಗ, ಶಿಕ್ಷಕ ವರ್ಗ, ಕುಟುಂಬ, ಸ್ನೇಹಿತರು, ಶಿಷ್ಯವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ : ಸಿದ್ದೇಶ ಜಿ ವೆಂಕಟಾಪುರ, ಮೊಳಕಾಲ್ಮುರು.