ಪ್ರಜಾಪ್ರಭುತ್ವ ನಮ್ಮ ಧರ್ಮವಾಗಬೇಕು. ಕಾನೂನುಗಳು, ಸಂವಿಧಾನ ನಮ್ಮ ಧರ್ಮಗ್ರಂಥವಾಗಬೇಕು ಎಂದು ಹಿರಿಯ ವಕೀಲೆ ಎಂ ಎನ್ ವಿಜಯಲಕ್ಷ್ಮಿ ಕರೆ ನೀಡಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಮೊಳಕಾಲ್ಮೂರು ಸಮಾಜ ಪರಿವರ್ತನಾ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾನೂನು ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
“ಭಾರತೀಯ ಕಾನೂನಿನಲ್ಲಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲಾಗಿದೆ. ಶಿಕ್ಷಣದಿಂದ ನೈತಿಕ ಮೌಲ್ಯಗಳನ್ನು ಬಿತ್ತುವುದರಿಂದ ಉತ್ತಮ ಸಮಾಜವು ನಿರ್ಮಾಣವಾಗುತ್ತದೆ. ಉತ್ತಮ ಸಮಾಜ ನಿರ್ಮಾಣವಾದರೆ ಉತ್ತಮ ದೇಶ ನಿರ್ಮಿತವಾಗುತ್ತದೆ. ಆದ್ದರಿಂದ ಭಾರತೀಯ ಕಾನೂನಿನ ಒಳಗೆ ಶಿಕ್ಷಣವನ್ನು 14 ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಮಾಡಲಾಗಿದೆ” ಎಂದು ತಿಳಿಸಿದರು.
“ಶಿಕ್ಷಣ ಒಂದು ದೇಶದ ಅಭಿವೃದ್ಧಿಯ ಬಾಗಿಲನ್ನು ತೆರೆಯುವ ಕೀಲಿ ಕೈಯಿದ್ದಂತೆ. ‘ಶಿಕ್ಷಣವೇ ಮಾನವನ ವಿಕಾಸದ ಹೆದ್ದಾರಿ’. ಹಾಗಾಗಿ ನಾವೆಲ್ಲರೂ ಶಿಕ್ಷಿತರಾಗುವುದರ ಮೂಲಕ, ಭಾರತೀಯ ಸಂವಿಧಾನದ ಮತ್ತು ಕಾನೂನಿನ ಘನತೆ ಗೌರವ ಸ್ವಾಭಿಮಾನವನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಬೇಕು” ಎಂದು ಕರೆ ನೀಡಿದರು.

“ಭಾರತದಲ್ಲಿ ಸಾಮಾಜಿಕ ಮೂಲ ಪಿಡುಗುಗಳಾದ ಬಾಲ್ಯ ವಿವಾಹ, ವರದಕ್ಷಿಣೆ, ಬಾಲಕಾರ್ಮಿಕ ಪದ್ಧತಿ ಹಾಗೂ ಜೀತಪದ್ಧತಿ ಸೇರಿದಂತೆ ಇನ್ನೂ ಮೊದಲಾದ ಅನಿಷ್ಟ ಪದ್ದತಿಗಳನ್ನು ಹೋಗಲಾಡಿಸಬೇಕಿದೆ. ಸಮಾನತೆ, ಮಹಿಳಾ ಹಕ್ಕುಗಳು ಮತ್ತು ಮಕ್ಕಳ ಹಕ್ಕುಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ರಾಜ್ಯನೀತಿ ನಿರ್ದೇಶಕ ತತ್ವಗಳು, ಇವುಗಳು ಸಂವಿಧಾನದ ಮತ್ತು ಕಾನೂನಿನ ಆಸ್ತಿಯಾಗಿವೆ. ಆದ್ದರಿಂದ ಇವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಬೇಕು” ಎಂದು ಅಭಿಪ್ರಾಯಪಟ್ಟರು.
“ಕಾನೂನುಗಳು ನಮ್ಮ ಸಂವಿಧಾನದ ಜೀವಾಳ. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಸಂವಿಧಾನ ಮತ್ತು ಭಾರತೀಯ ಕಾನೂನಿನ ಆಶಯಗಳನ್ನು ಎತ್ತಿ ಹಿಡಿಯಬೇಕಾಗಿದೆ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರ; ಯತ್ನಾಳ್ ಪರ ನಿಂತ ಜಯಮೃತ್ಯುಂಜಯ ಶ್ರೀ
ಸಮಾಜ ಪರಿವರ್ತನಾ ಚಳುವಳಿಯ ಎಸ್ ಪರಮೇಶ್ ಮಾತನಾಡಿ, “ಸೂರ್ಯನಿಲ್ಲದ ಜಗತ್ತನ್ನು ಹೇಗೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲವೋ, ಹಾಗೆಯೇ ಕಾನೂನುಗಳು ಇಲ್ಲದ ದೇಶವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಕಾನೂನುಗಳು ಒಂದು ದೇಶದ ರಕ್ಷಾ ಕವಚ ಇದ್ದಂತೆ. ಕಾನೂನುಗಳಿಂದಾಗಿ ಇಂದು ಭಾರತದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಕಾನೂನುಗಳಿಲ್ಲದೆ ಹೋದರೆ, ಇಡೀ ದೇಶ ಅಶಾಂತಿ, ದೌರ್ಜನ್ಯ, ದಬ್ಬಾಳಿಕೆ ಮೊದಲಾದವುಗಳಿಂದ ದೇಶ ಅವನತಿಯ ಹಂತಕ್ಕೆ ಸಾಗುತ್ತದೆ. ಆದ್ದರಿಂದ ಕಾನೂನುಗಳನ್ನು ಗೌರವಿಸಿ ಅವುಗಳನ್ನು, ಪಾಲಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಕಾನೂನುಗಳನ್ನು ನಾವೆಲ್ಲರೂ ರಕ್ಷಿಸೋಣ” ಎನ್ನುವ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ, ಸಮಾಜ ಪರಿವರ್ತನಾ ಸೇವಾ ಸಂಸ್ಥೆಯ ಅಧ್ಯಕ್ಷ ಮರಿಸ್ವಾಮಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ವೀರೇಶ್, ಗ್ರಾಮ ಪಂಚಾಯಿತಿ ಸದಸ್ಯ ಪಾಲಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಣ್ಣ, ಶಿಕ್ಷಕ ಸಮಿವುಲ್ಲಾ ಸೇರಿದಂತೆ ಬಹುತೇಕರು ಇದ್ದರು.