ರಾಜ್ಯದ ಅತಿ ಹಿಂದುಳಿದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಮರಳು ಮಾಫಿಯಾ, ಭೂ ಕಬಳಿಕೆ, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಿದ್ದ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಾಸಕರು ಜನರ ಸಮಸ್ಯೆಗಳಿಗೆ ಗಮನ ಹರಿಸುತ್ತಿಲ್ಲ. ಬದಲಾಗಿ ಕೇವಲ ಶಾಸಕರ ಆಪ್ತರಿಗೆ, ಟೆಂಡರ್ದಾರರ ಜೊತೆ ಸೇರಿಕೊಂಡು ಹಣ ಮಾಡುವ ಉದ್ದೇಶದಿಂದ ಮಾತ್ರ ಶಾಸಕರಾಗಿದ್ದಾರೆಯೇ ಹೊರತು ಕ್ಷೇತ್ರದ ಜನರ ಸ್ಪಂದನೆಗಲ್ಲ. ಕ್ಷೇತ್ರ ಉದ್ದಾರ ಮಾಡಲು ಅಲ್ಲ ಎಂದು ಮಾಜಿ ಶಾಸಕ ದೂರಿದರು.
“ಕ್ಷೇತ್ರದ ಜನರು ಗುಳೆ ಹೋಗುವಂತಹ ಪರಿಸ್ಥಿತಿ ಇದೆ, ರೈತರು ಸಂಕಷ್ಟದಲ್ಲಿದ್ದಾರೆ. ರೈತರ ಬೆಳೆಗಳನ್ನು ಸಮೀಕ್ಷೆ ಮಾಡಿಸಿ, ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಬೇಕಿತ್ತು. ಆದರೆ ರಾಜ್ಯ ಸರ್ಕಾರ ಪರಿಹಾರ ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇನ್ನೂ ಗ್ಯಾರಂಟಿ ಯೋಜನೆಗಳ ಪೂರ್ವದಲ್ಲಿ ಅನುದಾನ ಒದಗಿಸುತ್ತೇವೆ. ರಾಜ್ಯದ ಅಭಿವೃದ್ಧಿಗೆ ಕಂಕಣ ಬದ್ದರಾಗಿದ್ದೇವೆ ಎನ್ನುವ ಇವರುಗಳು, ಎರಡು ವರ್ಷದಲ್ಲಿ ಕ್ಷೇತ್ರದಲ್ಲಿ ಯಾವುದೇ ಜನಪರ ಯೋಜನೆಗಳ ಕಾರ್ಯಕ್ರಮ ಮಾಡಿಲ್ಲ” ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಪ್ರೇಮಿಗಳನ್ನು ಒಂದುಗೂಡಿಸಿದ ಭೀಮ್ ಆರ್ಮಿ ಸಂಘಟನೆ
“ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಮೊಳಕಾಲ್ಮೂರು ಕ್ಷೇತ್ರಕ್ಕೆ ವರ್ಗಾವಣೆ ಮಾಡಿಸಿಕೊಳ್ಳುವುದು ಏಕೆ? ಚಿತ್ರದುರ್ಗ ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳಿಲ್ಲವೇ? ಇದರ ಹಿಂದಿನ ಉದ್ದೇಶವಾದರೂ ಏನು? ಕ್ಷೇತ್ರದ ವ್ಯಾಪ್ತಿಯಲ್ಲಿ ಮರಳು ದಂಧೆ ಹೇರಳವಾಗಿ ನಡೆಯುತ್ತಿದೆ. ಇನ್ನೂ ಭೂಮಿಯನ್ನು ಅಕ್ರಮವಾಗಿ ಕಬಳಿಸಿದವರ ಬಗ್ಗೆ ಇದುವರೆಗೆ ಕ್ರಮ ಜರುಗಿಸಿಲ್ಲ. ತಹಶೀಲ್ದಾರ್ ಹಾಗೂ ಮೇಲಿನ ಅಧಿಕಾರಿಗಳು ಕೂಡ ಇವರ ಕಪಿ ಮುಷ್ಠಿಯಲ್ಲಿ ಇದ್ದಾರೆಯೇ ಎಂಬುದು ಅನುಮಾನ ಕ್ಷೇತ್ರದ ಜನರಲ್ಲಿ ಕಾಡುತ್ತಿದೆ ಎಂದು ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
