ಕರ್ನಾಟಕದ ಇತಿಹಾಸದಲ್ಲಿ ನಾವು ಅನೇಕ ರಾಜರನ್ನು, ರಾಜವಂಶಗಳನ್ನು ಹಾಗು ಅವರ ಸಾಧನೆಗಳನ್ನು ಕಂಡಿದ್ದೇವೆ. ಹಾಗೆಯೇ ಕದಂಬರು ಆಳಿದ ಚಿತ್ರದುರ್ಗಕ್ಕೆ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನ ಇದೆ ಎಂದರೆ ತಪ್ಪಾಗದು. ಚಿತ್ರದುರ್ಗದ ಇತಿಹಾಸದಲ್ಲಿ ಅನೇಕ ರಹಸ್ಯಗಳು ಸಹ ಅಡಗಿವೆ.
ಚಿತ್ರದುರ್ಗ ಎಂದೊಡನೆ ಕಣ್ಣಮುಂದೆ ಬರುವುದೇ ಐತಿಹಾಸಿಕ ಕಲ್ಲಿನ ಕೋಟೆ. ಅದರ ಜೊತೆಗೆ ತೆರೆದುಕೊಳ್ಳುವುದು ಇತಿಹಾಸ, ರಾಜ ಮಹಾರಾಜರ ಚರಿತ್ರೆ. ಕರ್ನಾಟಕದಲ್ಲೇ ಚಿತ್ರದುರ್ಗ ಪ್ರಸಿದ್ಧ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಸ್ಥಳವಾಗಿದೆ. ಇಲ್ಲಿನ ಪ್ರಸಿದ್ಧ ಏಳು ಸುತ್ತಿನ ಕೋಟೆಯು ಇಡೀ ಚಿತ್ರದುರ್ಗವನ್ನು ಆವರಿಸಿದೆ. ಸುಂದರ ಕೆರೆಗಳು ಚಿತ್ರದುರ್ಗದ ಅಂದವನ್ನು ಹೆಚ್ಚಿಸುತ್ತವೆ.
ಇಲ್ಲಿರುವ ಚಂದ್ರವಳ್ಳಿಯ ಗುಹೆಗಳಲ್ಲಿ ಕನ್ನಡದ ಮೊದಲ ಸಾಮ್ರಾಜ್ಯವಾದ ಕದಂಬರು ಸ್ಥಾಪಿಸಿರುವ ಶಾಸನಗಳು ಕಂಡುಬರುತ್ತವೆ. ಇವು ಕದಂಬರ ಕಾಲ ಹಾಗು ಅವರ ಇತಿಹಾಸವನ್ನು ಪತ್ತೆಹಚ್ಚಲು ಸಹಕಾರಿಯಾಗಿವೆ. ಕದಂಬ ಸಾಮ್ರಾಜ್ಯದ ಸ್ಥಾಪಕನಾದ ಮಯೂರವರ್ಮ ಈ ಶಾಸನಗಳನ್ನು ಬರೆಯಿಸಿದ್ದಾನೆ. ಚಂದ್ರವಳ್ಳಿಯ ಸರಿಯಾದ ಅರ್ಥವು “ಚಂದ್ರನ ಹಳ್ಳಿ”ಯಾಗಿದೆ.

ಚಂದ್ರವಳ್ಳಿ ಗುಹೆಯೊಳಗೆ ಭೈರವೇಶ್ವರ ದೇವಸ್ಥಾನದಲ್ಲಿ ಕಂಡುಬರುವ ಮೊದಲ ಕನ್ನಡ ಸಾಮ್ರಾಜ್ಯ ʼಕದಂಬʼ ಸಂಸ್ಥಾಪಕ ಮಯೂರವರ್ಮನ ಶಿಲಾಶಾಸನವಿದೆ. ಈ ಶಾಸನಗಳನ್ನು ಕೆತ್ತಿದ ಸಮಯದಲ್ಲಿ, ಚಿತ್ರದುರ್ಗವು ಮೈಸೂರು ಪ್ರಾಂತ್ಯದ ಆಡಳಿತದಲ್ಲಿತ್ತು. ಈ ಶಾಸನವನ್ನು ಪ್ರಾಕೃತ ಭಾಷೆಯಲ್ಲಿ ಕೆತ್ತಲಾಗಿದೆ. ಇದನ್ನು ಸ್ಥಾಪಿಸುವ ಪ್ರಮುಖ ಉದ್ದೇಶವು ಮಯೂರವರ್ಮ ನಿರ್ಮಿಸಿದ ನೀರಿನ ಜಲಾಶಯದ ದಾಖಲೆಯನ್ನು ಸಂರಕ್ಷಿಸಿ ಇಡುವುದಾಗಿತ್ತು. ಇನ್ನೊಂದು ಉದ್ದೇಶವು ಇವನು ಬಹಳಷ್ಟು ರಾಜವಂಶಗಳ ಮೇಲೆ ಯುದ್ಧ ಮಾಡಿದ ಕುರುಹಾಗಿ, ತನ್ನ ಗೆಲುವಿನ ಪ್ರದರ್ಶನ ಮಾಡುವುದಾಗಿತ್ತು. ಇದರಿಂದ ದಕ್ಷಿಣ ಭಾರತದಲ್ಲಿ ಕದಂಬರ ಪ್ರಾಬಲ್ಯ ಕಂಡುಬರುತ್ತದೆ.
ಚಂದ್ರವಳ್ಳಿಯ ಆರಂಭಿಕ ವಸಾಹತುಗಳು ಕೃಷ್ಣಾ ನೀರಾವರಿ ಪ್ರದೇಶ ಹಾಗು ಹೇರಳವಾದ ಖನಿಜಗಳ ಕಾರಣದಿಂದ ಸ್ಥಾಪಿತಗೊಂಡಿರುವ ಸಾಧ್ಯತೆಗಳಿವೆ. ಈ ಸ್ಥಳವು ಮೂರು ಅತಿದೊಡ್ಡ ಬೆಟ್ಟಗಳಾದ ಚಿತ್ರದುರ್ಗ ಗುಡ್ಡ, ಕಿರಕಣ ಕಲ್ಲುಗುಡ್ಡ ಹಾಗು ಚೋಳಗುಡ್ಡದಿಂದ ಸುತ್ತುವರೆಯಲ್ಪಟ್ಟಿದೆ. ಗಣಿಗಾರಿಕೆಯು ಈ ಪ್ರದೇಶದಲ್ಲಿರುವ ಜನರ ಜೀವನಕ್ಕೆ ಆರ್ಥಿಕವಾಗಿ ಆಸರೆಯಾಯಿತು. ಅಗಸ್ಟಸ್ (23 BC-14 AD) ಮತ್ತು ಟಿಬೇರಿಯಸ್ (14 AD-37 AD) ಯುಗಗಳ ರೋಮನ್ ನಾಣ್ಯಗಳು ಚಂದ್ರವಳ್ಳಿಯಲ್ಲಿ ಪತ್ತೆಯಾಗಿವೆ.
ಚಂದ್ರವಳ್ಳಿಯನ್ನು ಹಿಂದೆ ಚಂದನವತಿ ಎಂದು ಕರೆಯಲಾಗುತ್ತಿತ್ತು. ಚಂದನವತಿ ಎಂದರೆ ಚಂದ್ರನ ಆಕಾರದಲ್ಲಿರುವುದು ಎಂದರ್ಥ. ಇಲ್ಲಿ ಕಂಡು ಬಂದ ಮಣ್ಣಿನ ಮಡಿಕೆಗಳು, ನಾಣ್ಯಗಳು, ಬಟ್ಟಲುಗಳು ಮತ್ತು ಇತರ ವಸ್ತುಗಳು ಈ ಸ್ಥಳದ ಶ್ರೀಮಂತ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿನ ಗುಹೆ ದೇವಾಲಯವು ಸಮುದ್ರ ಮಟ್ಟಕ್ಕಿಂತ 80 ಅಡಿಗಳಷ್ಟು ಕೆಳಗಿದೆ.

ಒಟ್ಟಾರೆಯಾಗಿ ಪರಿಗಣಿಸಿದಾಗ, ಪುರಾವೆಗಳು ರೋಮನ್ ನಾಗರಿಕತೆಯೊಂದಿಗೆ ಇದ್ದಿರಬಹುದಾದ ವಾಣಿಜ್ಯ ವ್ಯವಹಾರಗಳನ್ನು ಸೂಚಿಸುತ್ತವೆ. ಇಲ್ಲಿ ಕ್ರೈಸ್ತ ಧರ್ಮದ ಆರಂಭಿಕ ದಶಕಗಳಲ್ಲಿ ರೋಮನ್ ಸಾಮ್ರಾಜ್ಯದೊಂದಿಗೆ ವ್ಯಾಪಾರವು ಉತ್ತಮ ಸ್ಥಿತಿಯಲ್ಲಿತ್ತು. ಇಲ್ಲಿಯ ಪ್ರಾರಂಭಿಕ ವಸಾಹತುಗಳು ಬಹುಶಃ 1ನೇ ಶತಮಾನದಿಂದ 4ನೇ ಶತಮಾನದವರೆಗೆ ಉಳಿದಿದ್ದವು.
ಇಲ್ಲಿರುವ ಶಾಸನಗಳನ್ನು ಹೊರತುಪಡಿಸಿದರೆ ಚಂದ್ರವಳ್ಳಿಯು ಹಲವಾರು ಮಣ್ಣಿನ ಪಾತ್ರೆಗಳು, ಉತ್ತಮ ಗುಣಮಟ್ಟದ ಟೆರಾಕೋಟಾಗಳು, ಆಭರಣಗಳು, ವಿಶೇಷವಾಗಿ ಮಣಿಗಳು, ನಾಣ್ಯಗಳು ಮತ್ತು ರೋಮನ್ ಕಲಾಕೃತಿಗಳ ನೆಲೆಯಾಗಿದೆ. ಈ ಸ್ಥಳವು ಈಗ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಸಂರಕ್ಷಣೆಯಲ್ಲಿದೆ.
ಈ ಶಾಸನಗಳ ಮೇಲೆ ಹಲವು ಅಧ್ಯಯನಗಳನ್ನು ಮಾಡಲಾಗಿದೆ. ಆದರೂ ಬಹಳಷ್ಟು ಇತಿಹಾಸ ಹಾಗು ಮಾಹಿತಿಯುನ್ನು ಸಂಪೂರ್ಣವಾಗಿ ತಿಳಿಯಲು ಈ ಕಾಲಕ್ಕೂ ಸಾಧ್ಯವಾಗಿಲ್ಲ. ಇಲ್ಲಿಯ ರಹಸ್ಯಗಳು ಪ್ರವಾಸಿಗಳ ರೋಮಾಂಚನವನ್ನು ಹೆಚ್ಚಿಸುತ್ತವೆ. ಒಟ್ಟಾರೆಯಾಗಿ ಈ ಗುಹೆಗಳು ಚಂದ್ರವಳ್ಳಿಯ ಹಾಗು ಚಿತ್ರದುರ್ಗದ ಐತಿಹಾಸಿಕ ಮಹಿಮೆಯನ್ನು ಮತ್ತು ಶ್ರೀಮಂತಿಕೆಯನ್ನು ಹೆಚ್ಚಿಸುತ್ತವೆ.

ಸುಹಾ ಅಹಮದ್
ಪತ್ರಿಕೋದ್ಯಮ ವಿದ್ಯಾರ್ಥಿನಿ, ಕ್ರೈಸ್ಟ್ ಯುನಿವರ್ಸಿಟಿ, ಬೆಂಗಳೂರು