‘ಹಿಂದಿನ ಸರ್ಕಾರ ಮತ್ತು ಪ್ರಸ್ತುತ ಸರ್ಕಾರಗಳು ಶಿಕ್ಷಣದ ಗುಣಮಟ್ಟ, ಮೂಲಭೂತ ಸೌಕರ್ಯಗಳ ಸುಧಾರಿಸಲು ಕನಿಷ್ಠ ಗಮನ ನೀಡದಿರುವುದಕ್ಕೆ, ಸರ್ಕಾರಗಳು ಶಿಕ್ಷಣದ ಖಾಸಗೀಕರಣವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿರುವುದರಿಂದ ರಾಜ್ಯ ಮತ್ತು ದೇಶದ 80% ಕ್ಕಿಂತ ಹೆಚ್ಚು ಬಡವರಿಗೆ ಅನ್ಯಾಯವಾಗಿದೆ ಎಂದು ಆಕ್ಷೇಪಿಸಿ, ಶಿಕ್ಷಣದ ಗುಣಮಟ್ಟ, ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತಾಯಿಸಿ ಸರ್ಕಾರಿ ಶಾಲಾ ಅಭಿವೃದ್ಧಿ ವೇದಿಕೆಯ ಕಾರ್ಯಕರ್ತರು ಸಹಾಯಕ ಆಡಳಿತಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು “ಶಿಕ್ಷಣಕ್ಕೆ ಮೂಲಭೂತ ಸೌಕರ್ಯ ನೀಡದೆ ಖಾಸಗಿಕರಣಕ್ಕೆ ಉತ್ತೇಜನ ನೀಡುವುದು ದಲಿತರಿಗೆ ಮಾಡುತ್ತಿರುವ ಅನ್ಯಾಯ. ಇದನ್ನು ಸರ್ಕಾರ ನಿಲ್ಲಿಸಬೇಕು. ಜ್ಯೋತಿಬಾ ಪುಲೆ ಅವರ ಪ್ರಕಾರ ಎಸ್ಸಿ-ಎಸ್ಟಿ, ಒಬಿಸಿ,(SC,ST,OBC) ಮಹಿಳೆಯರು, ಭೂರಹಿತರು, ಅಲ್ಪಸಂಖ್ಯಾತರಂತೆ ದಮನಕ್ಕೊಳಗಾದ ಯಾರನ್ನಾದರೂ ದಲಿತರೆಂದು ಪರಿಗಣಿಸಲಾಗುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ಉತ್ತಮ ಗುಣಮಟ್ಟದ ಶಿಕ್ಷಣ ಮಾತ್ರ ದಲಿತರ ಜೀವನವನ್ನು ಬದಲಾಯಿಸಬಹುದು. ಆದರೆ ಸರ್ಕಾರಗಳು ಶಿಕ್ಷಣವನ್ನು ಖಾಸಗಿಕರಣಗೊಳಿಸಿ, ಜನತೆಯನ್ನು ದಲಿತರನ್ನು ವಂಚನೆ ಮಾಡುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಳೆದ ಎರಡು ವರ್ಷದಿಂದ ಶಿಕ್ಷಣದ ಹಲವು ಬೇಡಿಕೆಗಳಿಗಾಗಿ ಸಚಿವರು ಹಾಗು ಸರ್ಕಾರಿ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸುತ್ತಾ ಬರುತ್ತಿದ್ದೇವೆ. ಆದರೆ ಸರ್ಕಾರ ಈ ನಾಡಿನ ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸದಿರುವುದು ವಿಪರ್ಯಾಸ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸರ್ಕಾರಿ ಶಾಲಾ ಅಭಿವೃದ್ಧಿ ವೇದಿಕೆ ಸಂಘಟನೆಯ ಪ್ರಮುಖ ಬೇಡಿಕೆಗಳಾದ, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು, ಅಲ್ಲಿಯವರೆಗೆ ಖಾಲಿ ಹುದ್ದೆಗಳನ್ನು ತಕ್ಷಣವೇ (ಜುಲೈನಲ್ಲಿ) ಅತಿಥಿ ಶಿಕ್ಷಕರನ್ನು ನೇಮಿಸಬೇಕು. ವಿಷಯವಾರು, ತರಗತಿವಾರು ಶಿಕ್ಷಕರನ್ನು ನೇಮಿಸಬೇಕು. ಸರ್ಕಾರ ತಜ್ಞರ ಸಮಿತಿಯೊಂದಿಗೆ ತಕ್ಷಣವೇ ಕ್ರಿಯಾ ಯೋಜನೆ ರೂಪಿಸಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಒತ್ತು ನೀಡಬೇಕು. ಮೂಲಭೂತ ಸೌಕರ್ಯಗಳಾದ ಕೊಠಡಿ, ಬೆಂಚುಗಳು, ವಿದ್ಯುತ್, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಪ್ಯಾಡುಗಳ ವಿತರಣೆ, ಕ್ರೀಡೆ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಶಾಲೆಗೊಬ್ಬರಂತೆ ಪರಿಚಾರಕರನ್ನು ನೇಮಿಸಬೇಕು” ಎಂದು ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
‘ಈ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಜಿಲ್ಲೆಯ ಡಿಡಿಪಿಐ ರವರು ಶಾಲೆಗಳ ಸ್ಥಿತಿಗತಿಯ ಕುರಿತು ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು. ಕೆಕೆಆರ್ಡಿಬಿ ಮತ್ತು ಪ್ರಾದೇಶಿಕ ಶಿಕ್ಷಣ ಆಯುಕ್ತರು 2 ತಿಂಗಳೊಳಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ
.ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ, ದಾವಣಗೆರೆ | ಭದ್ರಾ ಬಲದಂಡೆಯಿಂದ ಕುಡಿಯುವ ನೀರು ಹರಿಸಲು ಐಐಎಸ್ಸಿ ವರದಿ, ನಾಲೆ ಜಲಾಶಯಕ್ಕೆ ತೊಂದರೆ ಇಲ್ಲ
‘ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಸಮಾಜ ಕಲ್ಯಾಣ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ರಚಿಸಬೇಕು. ಮತ್ತು ಮೇಲ್ವಿಚಾರಣೆ ಮಾಡಿ ಸುಧಾರಣಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟವನ್ನು ಸಂಘಟನೆ ಮೂಲಕ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಸರ್ಕಾರಿ ಶಾಲಾ ಅಭಿವೃದ್ಧಿ ವೇದಿಕೆ, ಹಾಗೂ ಗ್ರಾಕೂಸ್ ಸಂಘಟನೆಯ ಮುಖಂಡರಾದ ತೇಜೇಶ್ವರಿ, ಮಂಜಮ್ಮ ಸಂಧ್ಯಾ, ಪರಮೇಶ್, ವೆಂಕಟೇಶ್, ಭಾಗ್ಯಲಕ್ಷ್ಮಿ ಸೇರಿದಂತೆ ಇತರರು ಹಾಜರಿದ್ದರು.