ಪಿ ಲಂಕೇಶ್ ಎಂಬುದು ಕೇವಲ ಒಂದು ಹೆಸರಲ್ಲ. ರಾಜ್ಯದಲ್ಲಿ ಜರುಗಿದ ವಿದ್ಯಮಾನ ಕರ್ನಾಟಕದ ರಾಜಕಾರಣ, ಸಂಸ್ಕೃತಿ, ಚರಿತ್ರೆ, ಜ್ಞಾನ ಸೇರಿದಂತೆ ಅನೇಕ ವಿದ್ಯಮಾನಗಳನ್ನು ಪ್ರಭಾವಿಸಿದವರು ಲಂಕೇಶ್ ಎಂದು ಪ್ರಾಧ್ಯಾಪಕ ಬಿ ಎಲ್ ರಾಜು ಅಭಿಪ್ರಾಯಪಟ್ಟರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ‘ಪಿ ಲಂಕೇಶ್ ಹಾಗೂ ಪ್ರಸ್ತುತ ಸಾಂಸ್ಕೃತಿಕ ವಿದ್ಯಮಾನ’ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, “ಪಿ ಲಂಕೇಶ್ ಪತ್ರಕರ್ತರು ಮಾತ್ರವಲ್ಲದೇ ಸ್ವತಃ ಕವಿ, ನಾಟಕಕಾರ, ಸಿನಿಮಾ ನಿರ್ದೇಶಕ, ಕಾದಂಬರಿಕಾರರೂ ಆಗಿದ್ದ ಅವರು ಕರ್ನಾಟಕದ 20ನೇ ಶತಮಾನದ ಕೊನೆಯ ಎರಡು ದಶಕಗಳನ್ನು ದೊಡ್ಡಮಟ್ಟದಲ್ಲಿ ಪ್ರಭಾವಿಸಿದರು. ಲಂಕೇಶ್ ಪತ್ರಿಕೆ ಓದುತ್ತಿರುವವರಿಗೆ ಅಂದಿನ ದಿನಮಾನಗಳಲ್ಲಿ ಪ್ರಜ್ಞಾವಂತರು ಎನ್ನುವ ವಿಶಿಷ್ಟವಾದ ಸ್ಥಾನ ಕಲ್ಪಿಸಿಕೊಟ್ಟಿದ್ದರು. ಒಂದು ಪತ್ರಿಕೆಯನ್ನು ಓದುಗರು ತಮ್ಮ ಜತೆಗೆ ಗುರುತಿಸಿಕೊಂಡು, ಸಮೀಕರಿಸಿಕೊಂಡ ಕಾಲಘಟ್ಟವೂ ಹೌದು” ಎಂದು ಸ್ಮರಿಸಿದರು.
“ಅನೇಕ ಪ್ರಜ್ಞಾವಂತರನ್ನು, ಸಾಹಿತಿಗಳನ್ನು ಜೋಡಿಸಿದ ವಿಶಿಷ್ಟ ಹಾಗೂ ಮಹತ್ತರ ಕೆಲಸ ಮಾಡಿದ್ದು ಲಂಕೇಶ್ ಪತ್ರಿಕೆ. 1980ರಲ್ಲಿ ಜೂನ್ 08ರಂದು ಲಂಕೇಶ್ ಪತ್ರಿಕೆ ಕಪ್ಪು-ಬಿಳುಪಿನಲ್ಲಿ ಸುಮಾರು 20 ವರ್ಷಗಳ ಕಾಲ ಜಾಹೀರಾತಿನ ಅಂಗಿಲ್ಲದೆ, ನಿರ್ಭೀತವಾಗಿ, ನಿಷ್ಠುರವಾಗಿ ಕರ್ನಾಟಕದ ಬದುಕನ್ನು ರೂಪಿಸಿದ ಪತ್ರಿಕೆ. ಕರ್ನಾಟಕದ ರಾಜಕಾರಣವನ್ನು ನೇರ-ನಿಷ್ಠುರವಾಗಿ ಟೀಕಿಸುವ, ವಿಮರ್ಶಿಸುವ ಹಾಗೂ ಪರಿಶೀಲಿಸುವ ಕೆಲಸ ಮಾಡಿದರು. ಮುಖ್ಯಮಂತ್ರಿ, ಮಂತ್ರಿ ಸೇರಿದಂತೆ ಯಾವುದೇ ರಾಜಕಾರಣಿ, ಅಧಿಕಾರಿಗಳಿರಲಿ ನಿರ್ಭೀತವಾಗಿ ಅವರ ಎಲ್ಲ ಕರ್ಮಕಾಂಡಗಳನ್ನು ಬಯಲಿಗೆಳೆದವರು ಲಂಕೇಶ್” ಎಂದು ಹೇಳಿದರು.
“ಸರ್ಕಾರಗಳನ್ನು ಪ್ರಭಾವಿಸುವ ಮಟ್ಟಿಗೆ, ಜನರಿಗೆ ವಿವೇಕವನ್ನು ನೀಡುತ್ತಿದ್ದರು. ಕರ್ನಾಟಕದ ಅಧಿಕೃತ ವಿರೋಧ ಪಕ್ಷವಾಗಿ, ವಿರೋಧ ಪಕ್ಷಗಳ ಸ್ಥಾನವನ್ನು ಲಂಕೇಶ್ ಪತ್ರಿಕೆ ತುಂಬಿದೆ. ಸರ್ಕಾರವನ್ನು ಅಧಿಕಾರಕ್ಕೆ ತರುವುದು, ಅಧಿಕಾರಕ್ಕೆ ಬಂದ ಕೂಡಲೇ ವಿರೋಧಪಕ್ಷವಾಗಿ ಕೆಲಸ ಮಾಡುವುದು, ಅಧಿಕಾರದಲ್ಲಿ ಇಲ್ಲದಿರುವವರ ಪರವಾಗಿ, ಅಧಿಕಾರದ ವಿರುದ್ಧವಾಗಿ ಲಂಕೇಶ್ ಪತ್ರಿಕೆ ಕೆಲಸ ಮಾಡಿದೆ. ರಾಜಕಾರಣ ನಿಂತ ನೀರಾಗಬಾರದು. ಅದು ನಿರಂತರತೆ ಮತ್ತು ಸದಾ ಚಲನಶೀಲವಾಗಿರಬೇಕೆಂಬ ಉದ್ದೇಶ ಲಂಕೇಶ್ ಅವರದ್ದಾಗಿತ್ತು” ಎಂದು ತಿಳಿಸಿದರು.

“ಪತ್ರಕರ್ತ ಹಾಗೂ ಲೇಖಕ ಪಿ ಲಂಕೇಶ್ ಅವರು ಬಿ ಟಿ.ಜಾಹ್ನವಿ, ಬಿ ಟಿ ಲಲಿತಾ ನಾಯ್ಕ್, ಸಾರಾ ಅಬೂಬ್ಕರ್ ಸೇರಿದಂತೆ ಬಹಳಷ್ಟು ಲೇಖಕರನ್ನು ಸೃಷ್ಠಿ ಮಾಡಿದರು. ಮೊಗಳ್ಳಿ ಗಣೇಶ್, ಸಿದ್ದಲಿಂಗಯ್ಯ, ದೇವನೂರು ಮಹಾದೇವಯ್ಯ ಅವರೂ ಕೂಡಾ ಲಂಕೇಶ್ ಪತ್ರಿಕೆಯಲ್ಲಿ ಬರೆಯಲು ಶುರು ಮಾಡಿದರು. ಲಂಕೇಶ್ ಪತ್ರಿಕೆ ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೇ ಸಂಸ್ಕೃತಿ, ಸಾಹಿತ್ಯದ ವಿಮರ್ಶೆಯೂ ಕೂಡ ಇತ್ತು. ಬರಹದಲ್ಲಿ ಮಾನವೀಯತೆ, ನಿಷ್ಠುರತೆಯನ್ನು ನಿರೀಕ್ಷೆ ಮಾಡುತ್ತಿದ್ದರು. ಜಾತಿ, ಧರ್ಮದ ಗಡಿಯನ್ನು ಮೀರಿ ಬರೆಯುವ ವಾತಾವರಣ ನಿರ್ಮಾಣ ಮಾಡಿದ್ದರು. ಅನಂತಮೂರ್ತಿ ಸೇರಿದಂತೆ ಕರ್ನಾಟಕದ ಬಹಳ ದೊಡ್ಡ ಲೇಖಕರು ಹಾಗೂ ಸಣ್ಣ ಲೇಖಕರವರೆಗೂ ಕೂಡಾ ಲಂಕೇಶ್ ಅವರ ಕುಲುಮೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದಾರೆ” ಎಂದು ಅಭಿಪ್ರಾಯಪಟ್ಟರು.
“ಪಿ ಲಂಕೇಶ್ ಅವರು ಪಟ್ಟಾಭದ್ರರ ವಿರುದ್ಧ, ಜಗದ್ಗುರುಗಳ ವಿರುದ್ಧ, ರಾಜಕಾರಣಿಗಳ ವಿರುದ್ಧ, ಭೂ ಮಾಲೀಕರ ವಿರುದ್ಧ ನಿರಂತರ ಹಾಗೂ ನಿರ್ಭೀತರಾಗಿ ಮುಖಾಮುಖಿಯಾಗಿ ನಿಂತಿದ್ದವರು. ಆದರೆ ಪ್ರಸ್ತುತ ದಿನಮಾನಗಳಲ್ಲಿ ಕರ್ನಾಟಕದ ಅಧಿಕಾರ ಕೇಂದ್ರಕ್ಕೆ ಮುಖಾಮುಖಿಯಾಗಲು ಸಾಧ್ಯವೇ ಇಲ್ಲದಂತಾಗಿದೆ. ಲಂಕೇಶ್ ಪತ್ರಿಕೆಯಿಂದ ನಾವು ಅಷ್ಟೆಲ್ಲಾ ಪ್ರಭಾವಿತರಾದರೂ, ಅವರ ಪ್ರಜ್ಞಾವಂತಿಕೆ, ನಿಷ್ಠುರತೆ ನಮ್ಮ ತಲೆಮಾರುಗಳಿಗೆ ಮುಂದುವರೆಯಲಿಲ್ಲವೆಂಬ ಪ್ರಜ್ಞೆ ಕಾಡುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ರಾಜಕಾರಣದಲ್ಲಿ ಇಂದಿಗೂ ಒಬ್ಬ ವೈ ಕೆ ರಾಮಯ್ಯ, ದೇವರಾಜ್ ಅರಸು, ನಜೀರ್ ಸಾಬ್, ಎಂ ಪಿ ಪ್ರಕಾಶ್ನಂತಹ ತತ್ವಬದ್ಧ ರಾಜಕಾರಣಿ ಮತ್ತು ಜನಪರವಾದ ರಾಜಕಾರಣಿ ಕರ್ನಾಟಕದಲ್ಲಿ ಇಲ್ಲವಾಗಿದೆ. ಇಂದಿನ ಯಾವ ರಾಜಕಾರಣಿಗಳಿಗೂ ಕೂಡಾ ಕನಿಷ್ಠ ವೇದಿಕೆ ಮೇಲೆ ನಿಂತು, ತನ್ನ ಎದುರುಗೆ ಇರುವ ಜನರ ನಿರೀಕ್ಷೆಗಳೇನು ಎಂಬುದನ್ನು ಅರ್ಥಮಾಡಿಕೊಂಡು ಮಾತನಾಡಲು ಬರುವುದಿಲ್ಲ. ಅಂತಹ ರಾಜಕಾರಣಿಗಳು ಕರ್ನಾಟಕವನ್ನು ಆಳ್ವಿಕೆ ಮಾಡುತ್ತಿದ್ದಾರೆ. ಪ್ರಜ್ಞೆಯಿಲ್ಲದ ರಾಜಕಾರಣಿಗಳು, ಅನಕ್ಷರಸ್ಥ ರಾಜಕಾರಣಿಗಳು ಕರ್ನಾಟಕದ ಅಧಿಕಾರವನ್ನು ಕೇಂದ್ರ ನಿಯಂತ್ರಿಸುತ್ತಿದೆ. ನಾವುಗಳು ಅಂತಹ ರಾಜಕಾರಣಿಗಳಿಗೆ ಮತ ಹಾಕಿ, ಅಧಿಕಾರಕ್ಕೆ ತರುತ್ತಿದ್ದೇವೆ. ಅಂದು ಇಂತಹವರನ್ನು ಅಧಿಕಾರಕ್ಕೆ ತನ್ನಿರೆಂದು ಲಂಕೇಶ್ ತಮ್ಮ ಪತ್ರಿಕೆಯ ಮೂಲಕ ಬೆಂಬಲಿಸುವ ರೀತಿಯಲ್ಲಿ ಆ ತರಹದ ನಿಷ್ಠುರವಾದ ಕೆಲಸ ಮಾಡುತ್ತಿದ್ದ ರೀತಿಯಲ್ಲಿ ಯಾವುದೇ ಒಂದು ಪತ್ರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಲಂಕೇಶ್ ಒಂದು ವಿದ್ಯಮಾನವಾಗಿ 21ನೇ ಶತಮಾನಕ್ಕೆ ಮುಂದುವರೆಯಬೇಕಾಗಿತ್ತೋ ಅದು ಮುಂದುವರೆಯಲಿಲ್ಲ” ಎಂದು ವಿಷಾಧ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬಜೆಟ್ ನಲ್ಲಿ ನೇರಪಾವತಿಗೊಳಿಸದೆ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರಿಗೆ ಅನ್ಯಾಯ; ಪ್ರತಿಭಟನೆ.
ಕಥೆಗಾರ ಡಾ. ಗಂಗಾಧರಯ್ಯ ಮಾತನಾಡಿ, “ಪತ್ರಿಕೆ ಮಾತ್ರವಾಗಿರದೆ ಸಿನಿಮಾ, ಕ್ರೀಡೆ, ರಾಜಕಾರಣ, ಟೀಕೆ-ಟಿಪ್ಪಣಿ ಸೇರಿದಂತೆ ಅನೇಕ ವಿಷಯಗಳನ್ನೂ ಕೂಡಾ ಹೇಳುತ್ತಿತ್ತು. ಲೋಹಿಯಾ ಅವರ ಆಲೋಚನೆಗಳನ್ನು, ತನ್ನ ಬದುಕು ಮತ್ತು ಬರಹದಲ್ಲಿ ರೂಢಿಸಿಕೊಂಡ ಬಹಳ ದೊಡ್ಡ ಲೇಖಕರು ಲಂಕೇಶ್. ಬರಹದಂತೆ ಬದುಕಿ ತೋರಿಸಿದ ಅವರು, ಅತ್ಯಂತ ಸರಳವಾದ ಭಾಷೆಯಲ್ಲಿ ಅತ್ಯಂತ ಸಂಕೀರ್ಣವಾದುದನ್ನು ಹೇಳಲು ಸಾಧ್ಯವಾದದ್ದು ಲಂಕೇಶ್ ಅವರಿಗೆ ಮಾತ್ರ. ಲಂಕೇಶ್ ಅವರ ಸಾಹಿತ್ಯ ವಿಶ್ವವಿದ್ಯಾಲಯಗಳಿಗೆ ಇನ್ನೂ ಸರಿಯಾಗಿ ತಲುಪಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಹೆಚ್ಚು ಲಂಕೇಶ್ ಅವರ ಸಾಹಿತ್ಯ ಬಳಸಿಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಜೆ ಕರಿಯಪ್ಪ ಮಾಳಿಗೆ, ಗೆಳೆಯರ ಬಳಗದ ಗೌನಹಳ್ಳಿ ಗೋವಿಂದಪ್ಪ, ಸಾಹಿತಿ ಪರಮೇಶ್ವರಪ್ಪ ಕುದುರಿ, ಪಿಹೆಚ್ಡಿ ಸಂಶೋಧನಾರ್ಥಿ ಬಿ ಪಿ ಸಂತೋಷ್ ಕುಮಾರ್ ಬೆಳಗಟ್ಟ ಸೇರಿದಂತೆ ಇತರರು ಇದ್ದರು.