“ಭಾರತದ ಪ್ರತಿಯೊಬ್ಬ ಪ್ರಜೆಗಳನ್ನು ರಕ್ಷಣೆ ಮಾಡುವ ಸಂವಿಧಾನಕ್ಕೆ ಅಪಾಯವಾದರೆ ಜನಸಾಮಾನ್ಯರ ಪಾಡೇನು? ಈ ಕುರಿತು ಪ್ರಗತಿಪರರು, ಪ್ರಜ್ಞಾವಂತರು ಚಿಂತಿಸಬೇಕಿದೆ” ಎಂದು ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಚಿತ್ರದುರ್ಗದಲ್ಲಿ “ಸಂವಿಧಾನ ಯಾನ” ಕಾರ್ಯಕ್ರಮದಲ್ಲಿ ಆತಂಕ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ “ಸಂವಿಧಾನ ಯಾನ, ದೇಶ ರಕ್ಷಣೆಯ ಹೊಣೆ ನಮ್ಮದಾಗಿಸಿಕೊಳ್ಳೋಣ ಬನ್ನಿ, ಸಂವಿಧಾನ ರಕ್ಷಣಾ ಪಡೆಗೆ ಸೇರ್ಪಡೆಯಾಗೋಣ ಬನ್ನಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಸಂವಿಧಾನಕ್ಕೆ 140 ವರ್ಷಗಳ ಶಕ್ತಿಯಿದೆ. ಇದು ಯಾರ ಆಸ್ತಿಯಲ್ಲ. ಸಂವಿಧಾನ ಆಶಯಗಳಿಗೆ ವಿರುದ್ಧವಾದ ಘಟನೆಗಳು ನಡೆಯುತ್ತಿವೆ. ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದಾಗ ದೇಶದ ಪ್ರಧಾನಿ ಸಮರ್ಥಿಸಿಕೊಂಡರು, ಇವೆಲ್ಲವನ್ನು ಗಮನಿಸಿದಾಗ ಸಂವಿಧಾನಕ್ಕೆ ಅಪಾಯವಿದೆ ಎನ್ನುವುದು ತಿಳಿಯುತ್ತದೆ” ಎಂದು ಹೇಳಿದರು.

“ಸಂವಿಧಾನವನ್ನು ಗೌರವಿಸದವರು ಯಾವ ಸ್ಥಿತಿಗೆ ಬಂದಿದ್ದರು ಎನ್ನುವುದನ್ನು ಈಗಿನ ಪ್ರಧಾನಿ ಅರ್ಥಮಾಡಿಕೊಂಡು ಸಂವಿಧಾನವನ್ನು ಗೌರವಿಸಬೇಕು. ಗೌರಿ ಲಂಕೇಶ್, ಎಂ.ಎಂ.ಕಲುಬುರ್ಗಿಯವರಂತಹ ಚಿಂತಕರ ಹತ್ಯೆಗೈದ ಹಂತಕರನ್ನು ಇನ್ನು ಪತ್ತೆ ಹಚ್ಚಲು ಆಗಿಲ್ಲ. ಸಂವಿಧಾನ ದೊಡ್ಡದು. ಕೇಂದ್ರ ಸರ್ಕಾರ ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗಗಳಲ್ಲಿ ಹಸ್ತಕ್ಷೇಪ ಮಾಡಿದ್ದು, ಚುನಾವಣಾ ವ್ಯವಸ್ಥೆ ಕುಲಗೆಟ್ಟಿದೆ. ಒಕ್ಕೂಟದ ವ್ಯವಸ್ಥೆ ನಾಶವಾಗುತ್ತಿದೆ. ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆ ಅಕ್ಷಮ್ಯ. ಬಹುತ್ವ, ಸೌಹಾರ್ದತೆ, ಸಾಮರಸ್ಯವನ್ನು ಹಾಳು ಮಾಡುವ ಕೆಲಸಗಳಾಗುತ್ತಿದೆ” ಎಂದು ಆರೋಪಿಸಿದರು.
ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ಮಾತನಾಡಿ, “ಅಕ್ಷರ ಜ್ಞಾನವುಳ್ಳ ಪ್ರತಿಯೊಬ್ಬ ನಾಗರಿಕನು ಸಂವಿಧಾನವನ್ನು ಓದಿಕೊಳ್ಳಬೇಕಿದೆ ನಾಗರೀಕರಿಂದ ಹಿಡಿದು ವಕೀಲರವರಿಗೆ ಎಲ್ಲರೂ ನಾವು ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಂಡಿದ್ದೇವೆ ಎನ್ನುವುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ಸಂವಿಧಾನಕ್ಕೆ ಅಪಚಾರವಾಗದಂತೆ ದೇಶ ಮತ್ತು ಸಂವಿಧಾನವನ್ನು ರಕ್ಷಿಸಬೇಕಿದೆ. ಸಂಘಟನೆ ಶಕ್ತಿ ಮತ್ತು ಸಹಕಾರದಿಂದ ಮಾತ್ರ ಸಂವಿಧಾನವನ್ನು ಉಳಿಸಲು ಸಾಧ್ಯ” ಎಂದು ಪ್ರತಿಪಾದಿಸಿದರು.

ವಕೀಲ ಬಿ ಕೆ ರೆಹಮತುಲ್ಲಾ ಮಾತನಾಡಿ, “ಮಹಾತ್ಮ ಗಾಂಧಿ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹದಿಂದ ನೂರಾರು ವರ್ಷ ಆಳಿದ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಗಳಿಸಿ ಕೊಟ್ಟರು. ಇದರ ಹಿಂದೆ ಅನೇಕ ಮಹನೀಯರ ತ್ಯಾಗ ಬಲಿದಾನವಿದೆ. ದುರಂತವೆಂದರೆ ಗಾಂಧಿಯನ್ನು ನಮ್ಮವರೇ ಕೊಂದುಬಿಟ್ಟರು” ಎಂದು ಕಳವಳ ವ್ಯಕ್ತಪಡಿಸಿದರು.
“ಬಲ್ಕಿಸ್ಭಾನು ಪ್ರಕರಣದಲ್ಲಿ ಗುಜರಾತ್ ಸೆಷನ್ಸ್ ನ್ಯಾಯಾಲಯ ಹೈಕೋಟ್ ಮತ್ತು ಸುಪ್ರೀಂಕೋರ್ಟ್ ಹನ್ನೊಂದು ಆರೋಪಿಗಳಿಗೆ ಸಜೆ ನೀಡಿದವು. ಕೇಂದ್ರ ಸರ್ಕಾರ ರಾಷ್ಟ್ರಪತಿಗೆ ಪತ್ರ ಬರೆದ ಪರಿಣಾಮ ಎಲ್ಲರನ್ನು ಖುಲಾಸೆಗೊಳಿಸಿತು. ಇದನ್ನು ನೋಡಿದರೆ ಸಂವಿಧಾನ ಉಳಿವಿನ ಬಗ್ಗೆ ಜಿಜ್ಞಾಸೆ ಕಾಡುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರ ಕಾನೂನಿನ ಮಧ್ಯೆ ಪ್ರವೇಶಿಸಿದರೆ ಸಂವಿಧಾನ, ಕಾನೂನು ಏಕೆ ಇರಬೇಕು? ಕೇಶವಾನಂದ ಭಾರತಿ ಪ್ರಕರಣ ದತೀರ್ಪು ಎತ್ತಿ ಹಿಡಿದು ಸಂವಿಧಾನ ರಕ್ಷಿಸಬೇಕಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ; 10 ಅಡಿಗೂ ಅಧಿಕ ಎತ್ತರಕ್ಕೆ ಹಾರಿಬಿದ್ದ ಮಹಿಳೆ ಸಾವು
ಕಾರ್ಯಕ್ರಮದಲ್ಲಿ ನ್ಯಾಯವಾದಿ ಸಿ.ಶಿವುಯಾದವ್, ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ, ನಿವೃತ್ತ ಪಿ.ಯು. ಡಿ.ಡಿ.ಪಿ.ಐ. ಶಿವಕುಮಾರ್, ಯುವ ನ್ಯಾಯವಾದಿ ಓ, ಪ್ರತಾಪ್ಜೋಗಿ, ಮಾಲತೇಶ್ ಅರಸ್, ಅಶೋಕ್ ಬೆಳಗಟ್ಟ, ನ್ಯಾಯವಾದಿ ಮಹಮದ್ ಸಾಧಿಕ್ವುಲ್ಲಾ, ಟಿ.ಶಫಿವುಲ್ಲಾ, ದಿಲ್ಶಾದ್ ಉನ್ನಿಸ, ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಹಾಗೂ ಇತರರು ಹಾಜರಿದ್ದರು.