ಕನಿಷ್ಠ ವೇತನ, ಗ್ರಾಚ್ಯುಟಿ, ಅಂಗನವಾಡಿ ಕೇಂದ್ರಗಳ ಮೇಲ್ದರ್ಜೆ, ಗುಣಮಟ್ಟದ ಆಹಾರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಡಿ.17, 18ರಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷೆ ಜಿ.ಎಂ ಲಕ್ಷ್ಮೀದೇವಮ್ಮ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಅಂಗನವಾಡಿ ನೌಕರರಿಗೆ 15000 ಕನಿಷ್ಠ ವೇತನವನ್ನು ಕೊಡುವ ಆರನೇ ಗ್ಯಾರಂಟಿಯ ಭರವಸೆ ನೀಡಿತ್ತು. ಆದರೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ವರ್ಷವಾದರೂ ಇದುವರೆಗೆ ಆರನೇ ಗ್ಯಾರಂಟಿಯನ್ನು ಕೊಟ್ಟಿಲ್ಲ ಎಂದು ದೂರಿದರು.

ಅಂಗನವಾಡಿ ನೌಕರರನ್ನು ಇಲಾಖೆಯ ಕೆಲಸಗಳಷ್ಟೇ ಅಲ್ಲದೇ ಮಾತೃ ವಂದನಾ, ಚುನಾವಣೆ ಕಾರ್ಯಗಳು ಸೇರಿದಂತೆ ವಿವಿಧ ಇಲಾಖೇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಯಾವುದೇ ಗೌರವ ಧನವಿಲ್ಲದ ಅಂಗನವಾಡಿ ನೌಕರರು ಇಲಾಖೇತರ ಕೆಲಸಗಳನ್ನು ನಿಭಾಯಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡಲಾಗುತ್ತಿಲ್ಲ. ಅಂಗನವಾಡಿ ನೌಕರರೇ ತಮ್ಮ ಸ್ವಂತ ಹಣ ನೀಡಿ ಮೊಟ್ಟೆ, ತರಕಾರಿ ತರುವ ದುಸ್ಥಿತಿ ಎದುರಾಗಿದೆ. ಅಂಗನವಾಡಿ ನೌಕರರನ್ನು 3 ಮತ್ತು 4ನೇ ದರ್ಜೆ ನೌಕರರನ್ನಾಗಿ ಪರಿಗಣಿಸಿ ನಿಯಮ ರೂಪಿಸುವಂತೆ ಸುಪ್ರೀಂ ಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ಹೇಳಿವೆ. ಆದಾಗ್ಯೂ ಸರಕಾರಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಡಿ.17, 18ರಂದು ಸುಮಾರು 1500ಕ್ಕೂ ಅಧಿಕ ಕಾರ್ಯಕರ್ತರೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಎರಡು ದಿನಗಳ ಕಾಲ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ ರತ್ನಮ್ಮ ಮಾತನಾಡಿ, ಸರಕಾರ 3 ತಿಂಗಳಿಗೊಮ್ಮೆ ಮೊಟ್ಟೆ ಹಣ ನೀಡುತ್ತಿದೆ. ಇದರಿಂದ ನಾವೇ ಸ್ವಂತ ಹಣ ನೀಡಿ ಮೊಟ್ಟೆ ತರಬೇಕಿದೆ. ಸರಕಾರದಿಂದ ಗುಣಮಟ್ಟದ ಆಹಾರ ಪದಾರ್ಥಗಳು ಸಿಗುತ್ತಿಲ್ಲ. ತುಷ್ಟಿ ಕಂಪನಿಯ ರೆವೆ, ಬೆಲ್ಲ, ಮಸಾಲೆ ಇತ್ಯಾದಿ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿಲ್ಲ. ರೆವೆಯಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿವೆ. ಮಸಾಲೆಯನ್ನು ಹಾಕಿದರೆ ಮಕ್ಕಳು ಊಟ ಮಾಡುತ್ತಿಲ್ಲ. ರಾಜ್ಯಾದ್ಯಂತ ಏಕಮಾದರಿಯ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ಮಕ್ಕಳು ಆಹಾರ ಸೇವನೆ ಮಾಡಲು ಕಷ್ಟವಾಗುತ್ತಿದೆ. ಸರಕಾರ ಈ ಹಿಂದಿನ ಮಾದರಿಯಲ್ಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲೇ ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಉತ್ತರ ಕರ್ನಾಟಕ ಜನತೆಯ ಆಶೋತ್ತರಗಳು ಈ ಬಾರಿಯಾದರೂ ಈಡೇರಲಿ
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಖಜಾಂಚಿ ವೆಂಕಟಲಕ್ಷ್ಮಮ್ಮ, ಲಕ್ಷ್ಮಮ್ಮ, ಮಂಜುಳಾ, ಸುಜಾತ, ಭಾಗ್ಯಲಕ್ಷ್ಮಮ್ಮ ಸೇರಿದಂತೆ ಇತರರಿದ್ದರು.