ಕೇರಳದ ಮಾಜಿ ಮುಖ್ಯಮಂತ್ರಿಗಳು ಹಿರಿಯ ಕಮ್ಯುನಿಸ್ಟ್ ನಾಯಕ ವಿ ಎಸ್ ಅಚ್ಚುತಾನಂದನ್ ಅವರಿಗೆ ಶುಕ್ರವಾರ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಸಿಪಿಎಂ ಉಡುಪಿ ಜಿಲ್ಲಾ ಸಮಿತಿಯು ಶ್ರದ್ಧಾಂಜಲಿ ಸಭೆ ನಡೆಸಿತು.
ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಮಹಾಂತೇಶ್ ಅವರು ಮಾತನಾಡಿ, ಅಚ್ಚುತಾನಂದನ್ ಅವರು 102 ವರ್ಷ ಸಾರ್ಥಕ ಜೀವನ ನಡೆಸಿದವರು ಅದರಲ್ಲಿ ಅವರು 17 ವಯಸ್ಸಿನಿಂದ 85 ವರ್ಷಗಳ ವರೆಗೆ ಸಾರ್ವಜನಿಕರಿಗಾಗಿ ತಮ್ಮ ಬದುಕು ಮೀಸಲಿಟ್ಟು ಮಾದರಿಯಾಗಿದ್ದಾರೆ ಎಂದು ಹೇಳಿದರು.
ಬದುಕಿನುದ್ದಕ್ಕೂ ಶೋಷಿತರ ಪರವಾಗಿ ಹೋರಾಟ ನಡೆಸಿದ ಅವರು ಕಠಿಣ ಹಾದಿ ತುಳಿದು ಪುನ್ನಪ್ರ ವಲಯಾರ್ ಹೋರಾಟ ಅನಂತರ ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಕ್ರೂರವಾಗಿ ಚಿತ್ರ ಹಿಂಸೆಗೆ ಒಳಗಾಗಿದ್ದರು.
1980 ರಿಂದ 1991 ವರೆಗೆ ಸಿಪಿಎಂ ಪಕ್ಷದ ಕೇರಳ ರಾಜ್ಯ ಕಾರ್ಯದರ್ಶಿಯಾಗಿ 1985 ರಲ್ಲಿ ಪಾಲಿಟ್ ಬ್ಯುರೋ ಸದಸ್ಯರಾದರು 2006 ರಿಂದ 2011 ವರೆಗೆ ಕೇರಳದ ಮುಖ್ಯಮಂತ್ರಿ ಆಗಿ ಶೋಷಣೆಗೆ ಒಳಗಾದ ಜನರಿಗೆ ಹಲವು ಜನಪರ ಯೋಜನೆಗಳನ್ನು ತಂದು ಮಗುವಿನಿಂದ ವಯೋವ್ರದ್ದರೂ ಪ್ರೀತಿಸುವವರೆಗೆ ಜನಪ್ರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಒಬ್ಬ ಕಮ್ಯುನಿಸ್ಟ್ ಸಿದ್ದಾಂತಕ್ಕೆ ಅನುಗುಣವಾಗಿ ಸಮಾಜದಲ್ಲಿ ಹೇಗೆ ಬದುಕಬೇಕೆಂದು ತೋರಿಸಿದ್ದಾರೆ ಅವರ ದಾರಿಯಲ್ಲಿ ಪಕ್ಷದ ಸದಸ್ಯರು ಮುನ್ನಡೆಯಬೇಕು ಅವರ ಸಮತೆಯ ಸಮಾಜದ ಕನಸುಗಳಿಗಾಗಿ ಹೋರಾಟಗಳನ್ನು ಸಂಘಟಿಸುವುದೇ ಅಚ್ಚುತಾನಂದನ್ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ಅವರು ಹೇಳಿದರು.
ಸಿಪಿಎಂ ಪಕ್ಷದ ಹಿರಿಯ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಶಿಧರ ಗೊಲ್ಲ, ಚಂದ್ರಶೇಖರ ವಿ ಇದ್ದರು ಎಚ್ ನರಸಿಂಹ ವಂದಿಸಿದರು.