ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆ, ಇತ್ತೀಚಿನ ಬೆಳವಣಿಗೆ ಮತ್ತು ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯದ ಬಗ್ಗೆ ತೀವ್ರ ಚರ್ಚೆಯಾದ ನಂತರ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ರಾಜ್ಯ ಸರ್ಕಾರವು ಗುರುವಾರ ವರ್ಗಾವಣೆಗೊಳಿಸಿ, ಆದೇಶ ಹೊರಡಿಸಿತ್ತು.
ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಅರುಣ್ ಕೆ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿತ್ತು.
ಈ ಬೆಳವಣಿಗೆಯ ನಡುವೆಯೇ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಏಳು ಮಂದಿ ಹೆಡ್ ಕಾನ್ಸ್ಟೇಬಲ್ಗಳನ್ನು ನಿರ್ಗಮನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಗುರುವಾರ ರಾತ್ರಿ ವರ್ಗಾವಣೆಗೊಳಿಸಿರುವ ಸಂಗತಿ ಬೆಳಕಿಗೆ ಬಂದಿದೆ.
ಕಂಕನಾಡಿ ನಗರ ಠಾಣೆಯ ಪ್ರೀತೇಶ್ರನ್ನು ಸಂಚಾರ ದಕ್ಷಿಣ ಠಾಣೆಗೆ, ಕೊಣಾಜೆ ಠಾಣೆಯ ರಾಜೇಶ್ ಕೆ.ಎನ್.ರನ್ನು ಕಂಕನಾಡಿ ನಗರ ಠಾಣೆಗೆ, ಸೆನ್ ಠಾಣೆಯ ಸತೀಶ್ ಎಂ ಮತ್ತು ರಾಜಾರಾಂ ಅವರನ್ನು ಸಿಸಿಬಿ ಠಾಣೆಗೆ, ಸಂಚಾರ ದಕ್ಷಿಣ ಠಾಣೆಯ ನಾಗರಾಜ ಮಲ್ಲಿಕಟ್ಟ ಅವರನ್ನು ಸಂಚಾರ ಪೂರ್ವ ಠಾಣೆಗೆ, ಸಿಸಿಬಿ ಠಾಣೆಯಲ್ಲಿದ್ದ ಸುಧೀರ್ ಕುಮಾರ್ ಮತ್ತು ಭೀಮಪ್ಪ ಸಿದ್ದಪ್ಪ ಉಪ್ಪರ್ ಅವರನ್ನು ಸೆನ್ ಠಾಣೆಗೆ ವರ್ಗಾಯಿಸಲಾಗಿದೆ.
ಈ ವರ್ಗಾವಣೆ ಆದೇಶವು ಕಮಿಷನರ್ ಅನುಪಮ್ ಅಗರ್ವಾಲ್ ಅವರು ತನ್ನ ವರ್ಗಾವಣೆ ಆದೇಶ ಬರುವುದಕ್ಕೂ ಮುನ್ನ ಮಾಡಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿರುವ ಕಾಂಗ್ರೆಸ್ ಕಾರ್ಯಕರ್ತ ಸುನಿಲ್ ಕುಮಾರ್ ಬಜಿಲಕೇರಿ, “ತರಾತುರಿಯಲ್ಲಿ ಯಾಕಾಗಿ 7 ಜನರನ್ನ ವರ್ಗಾವಣೆ ಮಾಡಿದ್ದಾರೆ. ಯಾವುದೇ ಕೌನ್ಸೆಲಿಂಗ್ ಇಲ್ಲದೆ ವರ್ಗಾವಣೆ ಮಾಡಲು ಮೂಲ ಕಾರಣ ಏನು?” ಎಂದು ಪ್ರಶ್ನಿಸಿದ್ದಾರೆ.
“ರಾಜೇಶ್ ಎಂಬ ವ್ಯಕ್ತಿ ಮಂಗಳೂರು ಕಂಕನಾಡಿನ ಠಾಣೆಯಲ್ಲಿ ಆರು ವರ್ಷ ಕೆಲಸ ಮಾಡಿ ಅಲ್ಲಿಂದ ಕೊಣಾಜೆ ಠಾಣೆಗೆ ವರ್ಗಾವಣೆಗೊಂಡ ದಿನವೇ ಓಡಿಡಿಯಲ್ಲಿ ಕಂಕನಾಡಿಗೆ ಬಂದು, ಅಲ್ಲಿಂದ ಈಗ ಮತ್ತೆ ಅದೇ ಠಾಣೆಗೆ ಕಮಿಷನರ್ ಅವರಿಂದ ಪಕ್ಕಾ ಆರ್ಡರ್ ಮಾಡಿಸಿದ್ದಾರೆ, ಅಕ್ರಮ ವ್ಯವಹಾರ ಮಾಡುವವರ ಜೊತೆ ಒಳ್ಳೆಯ ಸಂಬಂಧದಿಂದ ಇದ್ದಾರೆಂಬ ಕಾರಣದಿಂದ ಕಮಿಷನರ್ ಇವರಿಗೆ ಉಪಕಾರ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

“ಕೇವಲ ಏಳು ಜನರನ್ನು, ಇದೆಲ್ಲ ಬಿಜೆಪಿ ನಾಯಕರ ಸೂಚನೆಯಲ್ಲಿ ಮಾಡಿರುವಂತದ್ದು ಎಂಬುದು ನಮಗೆ ಕಾಣುತ್ತಿದೆ. ಹೊಸ ಕಮಿಷನರ್ ಅವರು ಈ ಆದೇಶವನ್ನು ರದ್ದು ಮಾಡುತ್ತಾರೆಂಬ ಭರವಸೆ ಇದೆ. ನ್ಯಾಯಯುತವಾಗಿ ಸುಮಾರು 250 ಜನರಲ್ ಲಿಸ್ಟ್ ನಲ್ಲಿ ಕೌನ್ಸಿಲಿಂಗ್ ಮಾಡಿ ಕಾನೂನು ಬದ್ಧವಾಗಿ ವರ್ಗಾವಣೆ ಮಾಡುತ್ತಾರೆಂಬ ನಂಬಿಕೆ ಇದೆ. ರಾತ್ರಿ 8 ಗಂಟೆ 11 ನಿಮಿಷಕ್ಕೆ ವರ್ಗಾವಣೆಗೊಂಡು ಹೋಗುವಾಗ ಆರ್ಡರ್ ಮಾಡಿದ್ದರ ಉದ್ದೇಶ ಏನಿರಬಹುದು? ಸುಧೀರ್ ಕುಮಾರ್ ರೆಡ್ಡಿ ಅಂತಹ ಖಡಕ್ ಅಧಿಕಾರಿ ಖಂಡಿತವಾಗಿಯೂ ಇಂತ ಆರ್ಡರ್ ರದ್ದು ಮಾಡುತ್ತಾರೆ ಎಂಬ ಭರವಸೆ ಇದೆ. ಅನೇಕ ಜನ ಇದರ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಮುಂದುವರಿದರು, “ಏಕಾಏಕಿಯಾಗಿ ಈ ರೀತಿ ಮಾಡಿರುವುದು ತಪ್ಪು. ಇದನ್ನು ಮಾಡಿಸಿದ ವ್ಯಕ್ತಿ ಪಕ್ಕಾ ಬಿಜೆಪಿಯವರು ಎಂಬ ಮಾಹಿತಿ ನಮಗಿದೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಸರ್ಕಾರದ ಗಮನಕ್ಕೆ ತರದೇ ಬಿಜೆಪಿ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಕೊನೆಯ ಘಳಿಗೆಯಲ್ಲಿ ಮಾಡಿದ ವರ್ಗಾವಣೆಯನ್ನು ರದ್ದು ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸುನಿಲ್ ಕುಮಾರ್ ಬಜಿಲಕೇರಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದುನೋಡಬೇಕಿದೆ.
ಅಧಿಕಾರ ಸ್ವೀಕರಿಸಿಕೊಂಡ ನೂತನ ಕಮಿಷನರ್ ಹಾಗೂ ಎಸ್ಪಿ
ಮಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಡಾ. ಅರುಣ್ ಕೆ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

