ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ್ ಘೋಷಿಸಿದರು.
ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ನಗರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣ ದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಕೋಲಾರದ ಜನರಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು. ಮಹಾತ್ಮ ಗಾಂಧೀಜಿ ಮತ್ತು ಇತರ ಮಹಾಪುರುಷರ ತ್ಯಾಗ ಮತ್ತು ಬಲಿದಾನಗಳ ಕಾರಣಗಳಿಂದ ಇಂದು ನಾವೆಲ್ಲಾ ಸ್ವತಂತ್ರರಾಗಿದ್ದೇವೆ. ಜಿಲ್ಲೆಯು ಕರ್ನಾಟಕದ ಚಿನ್ನದ ನಾಡು. ಇಲ್ಲಿನ ಶ್ರಮಜೀವಿಗಳು ಬರಡು ಭೂಮಿಯಲ್ಲಿಯೂ ಚಿನ್ನದಂತಹ ಬೆಳೆಯನ್ನು ತೆಗೆಯುತ್ತಾರೆ. 1936ರಲ್ಲಿ ಗಾಂಧೀಜಿ ಅವರು ಕೋಲಾರಕ್ಕೆ ಭೇಟಿ ನೀಡಿದ್ದು ಮತ್ತು ಟಿ. ಚನ್ನಯ್ಯ ಅವರು ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ” ಎಂದು ಹೇಳಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಸಂಪೂರ್ಣವಾಗಿ ಯಶಸ್ವಿಯಾಗಿವೆ. ಜಿಲ್ಲೆಯಲ್ಲಿ 12.43 ಲಕ್ಷಕ್ಕೂ ಹೆಚ್ಚು ಅನ್ನಭಾಗ್ಯ ಫಲಾನುಭವಿಗಳು ತಲಾ 10 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ. 4,720 ಯುವಕ-ಯುವತಿಯರು ಯುವನಿಧಿ ಯೋಜನೆಯ ಲಾಭ ಪಡೆದಿದ್ದಾರೆ. ಜುಲೈ ಅಂತ್ಯದ ವೇಳೆಗೆ ಜಿಲ್ಲೆಯ 10 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ. ಜಿಲ್ಲೆಯ 4.10 ಲಕ್ಷಕ್ಕೂ ಹೆಚ್ಚು ಬಳಕೆದಾರರು 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ 3.26 ಲಕ್ಷಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಅವರ ಖಾತೆಗಳಿಗೆ ಈವರೆಗೆ 1,143.40 ಕೋಟಿ ರೂಪಾಯಿ ಜಮಾ ಮಾಡಲಾಗಿದೆ” ಎಂದು ವಿವರಿಸಿದರು.

“ಒಳಚರಂಡಿ ಮತ್ತು ಸ್ವಚ್ಛತೆಗಾಗಿ ಕೋಲಾರ ನಗರಕ್ಕೆ 60 ಕೋಟಿ ರೂ. ಮತ್ತು ಕೆ.ಜಿ.ಎಫ್.ಗೆ 20 ಕೋಟಿ ರೂ.ಗಳನ್ನು ಒಳಚರಂಡಿ ಜಾಲ ಮತ್ತು ಸಂಸ್ಕರಣ ಘಟಕಗಳಿಗೆ ಅನುಮೋದಿಸಲಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಜಿಲ್ಲೆಯ ನಗರಗಳಿಗೆ 25.11 ಕೋಟಿ ರೂ. ಅನುದಾನ ನೀಡಲಾಗಿದೆ. ಅಮೃತ್ 2.0 ಯೋಜನೆಯಡಿಯಲ್ಲಿ ಕುಡಿಯುವ ನೀರು ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ 40 ಕೋಟಿ ರೂ. ಮಂಜೂರು ಮಾಡಲಾಗಿದೆ. ಯರಗೋಳ್ ಡ್ಯಾಂನಿಂದ ನೀರು ಸರಬರಾಜು ಯೋಜನೆಗೆ 308.46 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೋಲಾರ ನಗರದ ರಸ್ತೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಸುಮಾರು 25 ಕೋಟಿ ರೂ. ಅನುದಾನ ನೀಡಲಾಗಿದೆ. ಹಳೆ ಬಸ್ ನಿಲ್ದಾಣದ ನವೀಕರಣಕ್ಕಾಗಿ 5 ಕೋಟಿ ರೂ. ಒದಗಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಇರುವ 3 ಕ್ಯಾಂಟೀನ್ಗಳ ಜೊತೆಗೆ, ಕೆ.ಜಿ.ಎಫ್, ಮುಳಬಾಗಿಲು, ಮಾಲೂರು ಮತ್ತು ವೇಮಗಲ್-ಕುರುಗಲ್ನಲ್ಲಿ ತಲಾ ಒಂದು ಕ್ಯಾಂಟೀನ್ ಆರಂಭಿಸಲಾಗಿದೆ. ಇತರೆ ಅಭಿವೃದ್ಧಿ ಕಾರ್ಯಗಳು: ನಗರಾಭಿವೃದ್ಧಿ ಇಲಾಖೆಯಡಿ ಒಳಚರಂಡಿ ವ್ಯವಸ್ಥೆ ಸುಧಾರಣೆ ಸೇರಿದಂತೆ ಮೂಲಸೌಕರ್ಯಕ್ಕಾಗಿ 515 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ಸಂಗ್ರಹಿಸಲು ಪ್ರಯತ್ನಿಸಲಾಗುತ್ತಿದೆ” ಎಂದರು.
ಇದನ್ನೂ ಓದಿ: ಕೋಲಾರ | ಅಲೆಮಾರಿ ಚನ್ನದಾಸ ಸಮುದಾಯ ನಾಡಿನ ಸಾಂಸ್ಕೃತಿಕ ರಾಯಭಾರಿ: ಪಲ್ಲವಿ ಜಿ
“ಲಭಿಸಿದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ಮತ್ತು ದೇಶದ ಘನತೆ, ಸಾರ್ವಭೌಮತೆ ಹಾಗೂ ಅಖಂಡತೆಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. “Act Locally, Think Globally” ಎಂಬ ನುಡಿಯಂತೆ, ನಮ್ಮ ಸಣ್ಣ ಪ್ರಯತ್ನಗಳು ದೇಶವನ್ನು ವಿಶ್ವ ಭೂಪಟದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಎಂ. ಮಲ್ಲೇಶ್ ಬಾಬು, ಶಾಸಕರು ಕೊತ್ತೂರು ಜಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯರು ಇಂಚರ ಗೋವಿಂದರಾಜು, ಎಂ. ಎಲ್. ಅನಿಲ್ ಕುಮಾರ್ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಬಿ. ನಿಖಿಲ್, ಅಪರ ಜಿಲ್ಲಾಧಿಕಾರಿ ಮಂಗಳ,ಉಪವಿಭಾಗಾಧಿಕಾರಿ ಡಾ. ಮೈತ್ರಿ,ಜಿಲ್ಲೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.