ಮಂಡ್ಯ ಜಿಲ್ಲೆ, ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟದ ಬಳಿಕ ಬಿಜೆಪಿ ಮತ್ತು ಸಂಘ ಪರಿವಾರದವರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದ ಜ್ಯೋತಿ ಎಂಬ ಮಹಿಳೆ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಮೈಸೂರಿನಲ್ಲಿ ಐಜಿಪಿಯವರಿಗೆ ದೂರು ನೀಡಲಾಗಿದೆ.
ಮೈಸೂರು ನಗರ 12ನೇ ವಾರ್ಡ್ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಜುನೇದ್ ಎಂಬುವವರು ನೀಡಿದ ದೂರಿನಲ್ಲಿ ಮಂಡ್ಯ ಜಿಲ್ಲೆ, ಮದ್ದೂರಿನಲ್ಲಿ ಸೆ.8 ರಂದು ಗಣಪತಿ ವಿಸರ್ಜನಾ ಸ್ಥಳದಲ್ಲಿ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ನಂತರ ನಡೆದ ಬಿಜೆಪಿ ಮತ್ತು ಸಂಘ ಪರಿವಾರದ ಪ್ರತಿಭಟನಾ ಮೆರವಣಿಯಲ್ಲಿ ಜ್ಯೋತಿ ಎಂಬ ಮಹಿಳೆಯು ಮುಸ್ಲಿಮರ ವಿರುದ್ಧ ಅತ್ಯಂತ ತುಚ್ಛಪದಗಳಿಂದ ನಿಂದನೆ ಮಾಡಿ ಸಮುದಾಯಕ್ಕೆ ಅಪಮಾನ ಮಾಡಿದ್ದು, ಭಯದ ವಾತಾವರಣ ಉಂಟು ಮಾಡಿದ್ದಾರೆ ಇವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಮಂಡ್ಯ | ‘ಸ್ವರಾಜ್ ಉತ್ಸವ’ : ವಿಷಯಾಧಾರಿತ ಸಂವಾದ, ಚರ್ಚೆ, ಪ್ರದರ್ಶನ
ಸದರಿ ಪ್ರತಿಭಟನಾ ಮೆರವಣಿಗೆಯಲ್ಲಿ ಮುಸ್ಲಿಮರ ವಿರುದ್ಧ ಸಾರ್ವಜನಿವಾಗಿ ಅವಾಚ್ಯ ಶಬ್ದಗಳ ಬಳಕೆಯಿಂದ ಮುಸ್ಲಿಮ್ ಸಮುದಾಯದವರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಇದರಿಂದಾಗಿ, ಕಾನೂನು ಮತ್ತು ಸುವ್ಯವಸ್ಥೆಗೂ ಧಕ್ಕೆ ಉಂಟಾಗಿದೆ. ಜನರಲ್ಲಿ ಭಯ ಹಾಗೂ ಗೊಂದಲ ಸೃಷ್ಟಿಯಾಗಿದೆ. ಇಂತಹ ಕೃತ್ಯವು ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದು, ಮೇಲ್ಕಂಡ ಕಲ್ಲು ತೂರಾಟ ನಡೆಸಿದವರ ಮತ್ತು ಮುಸ್ಲಿಮರಿಗೆ ಅವಾಚ್ಯ ಶಭ್ದಗಳಿಂದ ನಿಂದನೆ ಮಾಡಿದ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಜುನೇದ್ ಒತ್ತಾಯಿಸಿದ್ದಾರೆ.
ವಿಶೇಷ ವಿಡಿಯೋ ನೋಡಿ : https://youtu.be/A4kqUxXWMIw?si=9rHKSUllq1fU4JDi
ದೂರು ನೀಡುವಾಗ ಕಾಂಗ್ರೆಸ್ ಮುಖಂಡರಾದ ನಸ್ರುಲ್ಲಾ, ಮೈನಾರಿಟಿ ವಿಭಾಗದ ಝಬಿ, ಸೈಯದ್ ಫಾರೂಖ್, ಮೊಹಮ್ಮದ್ ಸಲೀಂ ಇದ್ದರು.