- ಎಫ್ಸಿಐ ಅಕ್ಕಿ ಮಾರಾಟ ಮಾಡದಂತೆ ಆದೇಶಿಸಿ ಬಡಜನರ ಹೊಟ್ಟೆಗೆ ಹೊಡೆಯುತ್ತಿರುವ ಕೇಂದ್ರ ಸರ್ಕಾರ
- ‘ದುಷ್ಟ ರಾಜಕಾರಣ ಮುಂದುವರೆಸಿದರೆ, 63 ಸ್ಥಾನ ಹೋಗಿ, ಅದು 6 ಮತ್ತು 3 ಆಗುವುದು ಗ್ಯಾರಂಟಿ’
ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯಗಳಿಗೆ ಎಫ್ಸಿಐ ಅಕ್ಕಿ ಮಾರಾಟ ಮಾಡದಂತೆ ಆದೇಶಿಸಿ ಬಡಜನರ ಹೊಟ್ಟೆಗೆ ಹೊಡೆಯುವ ದುಷ್ಟ ರಾಜಕಾರಣಕ್ಕೆ ಮುಂದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಹಸಿವು ಮುಕ್ತ ರಾಜ್ಯ ನಿರ್ಮಿಸಲು ಕಾಂಗ್ರೆಸ್ ಸರ್ಕಾರ ಜನರಿಗೆ 10ಕೆಜಿ ಅಕ್ಕಿ ನೀಡಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಅಗತ್ಯವಿದ್ದ ಹೆಚ್ಚುವರಿ ಅಕ್ಕಿಯನ್ನು ಎಫ್ಸಿಐನಿಂದ ಖರೀದಿಗೆ ನಾವು ಮುಂದಾಗಿದ್ದೇವೆ. ಆದರೆ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಕ್ಕಿ ಮಾರಾಟ ಮಾಡದಂತೆ ಆದೇಶಿಸಿದೆ. ಇದು ಬಿಜೆಪಿಯ ದುಷ್ಟ ರಾಜಕಾರಣವನ್ನು ಎತ್ತಿ ತೋರಿಸುತ್ತದೆ” ಎಂದು ವಾಗ್ದಾಳಿ ನಡೆಸಿದರು.
“ಕಾಂಗ್ರೆಸ್ ಗ್ಯಾರಂಟಿಗಳು ಜನರಿಗೆ ತಲುಪಲು ಬಿಡದಂತೆ ಕೇಂದ್ರ ಬಿಜೆಪಿ ಸರ್ಕಾರ ಈ ರೀತಿ ಷಡ್ಯಂತ್ರ ನಡೆಸಲು ಮುಂದಾಗಿರುವುದು ನಾಚಿಕೆಗೇಡಿನ ವಿಚಾರ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ 63 ಮತ್ತೊಂದು ಸೀಟಿಗೆ ತೃಪ್ತಿಪಡಬೇಕಾಗಿದೆ. ಇದೇ ರೀತಿ ದುಷ್ಟ ರಾಜಕಾರಣ ಮುಂದುವರೆಸಿದರೆ, ಮುಂದೆ ಅದು 6 ಮತ್ತು 3 ಆಗಲಿದೆ. ಇದು ಗ್ಯಾರಂಟಿ” ಎಂದು ಲೇವಡಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ನಾಳೆಯಿಂದ ‘ಗೃಹಲಕ್ಷ್ಮಿ’ ಯೋಜನೆಯ ಅರ್ಜಿ ಸಲ್ಲಿಕೆಗೆ ಅವಕಾಶ: ಲಕ್ಷ್ಮಿ ಹೆಬ್ಬಾಳ್ಕರ್
“ಮೊದಲು ಆಹಾರ ಧಾನ್ಯ ಖರೀದಿ ಮಾಡಲು ಎಫ್ಸಿಐಗೆ ಹೋಗಬೇಕು. ದುಡ್ಡು ಕೊಟ್ಟರು ಕೊಡಲ್ಲ ಅಂದ್ರೆ ಯಾಕೆ ಅಂತ ಕೇಂದ್ರ ಸರ್ಕಾರವೇ ಹೇಳಬೇಕು. ಯೋಜನೆ ವಿಳಂಬ ಆಗ್ತಿದೆ ಅಂದ್ರೆ ಅದು ಆಹಾರ ಇಲಾಖೆಯ ನಡೆ ಕಾರಣವಲ್ಲ” ಎಂದರು.
“ದುಡಿಯುವ ಕೈಯನ್ನು ಚೆನ್ನಾಗಿ ನೋಡ್ತೀವಿ ಅಂದ್ರೆ ಯಾಕೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕ್ತಿದೆ? ನಾವು ಸುಮ್ಮನೆ ಕುಳಿತುಕೊಳ್ಳಲ್ಲ, ಬೇರೆ ರಾಜ್ಯದಿಂದ ಖಾಸಗಿಯಾಗಿ ಅಕ್ಕಿ ತೆಗೆದುಕೊಂಡು ಬರ್ತಿವಿ” ಎಂದು ಹೇಳಿದರು.
“ಸಿ ಟಿ ರವಿ ಮತ್ತು ಆರ್ ಅಶೋಕ್ ಕೇಂದ್ರದ ಮುಂದೆ ಮಾತನಾಡುವ ಧೈರ್ಯವನ್ನು ಅವರು ರೂಢಿಸಿಕೊಂಡಿಲ್ಲ. ಪುಕ್ಕಟ್ಟೆ ಅಕ್ಕಿ ಕೊಡಿ ಅಂತ ನಾವೇನು ಕೇಳಲ್ಲ. ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು.