- ಏಕಮುಖ ಕಿರಿದಾದ ರಸ್ತೆಯಲ್ಲಿ ತಡೆಗೋಡೆಗೆ ವಾಹನ ಡಿಕ್ಕಿ
- ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಸ್ಪಂದಿಸುವಂತೆ ಆಗ್ರಹ
ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಅಣ್ಣಪ್ಪ ದೇವಸ್ಥಾನದ ಬಳಿ ರಸ್ತೆಯಲ್ಲಿ ತಡೆಗೋಡೆ ಕುಸಿಯುವ ಆತಂಕ ಎದುರಾಗಿದೆ.
ಚಾರ್ಮಾಡಿ ಘಾಟಿಯಲ್ಲಿ ಬಾರಿ ಕಿರಿದಾದ ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಒಂದೇ ವಾಹನ ಸಾಗಲು ಸಾಧ್ಯವಾಗುತ್ತದೆ. ಹೀಗಾಗಿ, ಯಾವುದೋ ವಾಹನ ತಡೆಗೋಡೆಗೆ ಡಿಕ್ಕಿ ಹೊಡೆದಿರುವ ಪರಿಣಾಮ ತಡೆಗೋಡೆ ತಳದಿಂದಲೇ ಬಿರುಕು ಬಿಟ್ಟಿದ್ದು, ತಡೆಗೋಡೆ ಕುಸಿಯುವ ಸಂಭವ ಹೆಚ್ಚಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯ ಬಲ ಭಾಗದಲ್ಲಿ ಬೃಹತ್ ಬಂಡೆ ಇರುವುದರಿಂದ ಈ ಸ್ಥಳದಲ್ಲಿ ರಸ್ತೆ ಮಾಡಲು ಆಗದೇ ಸುಮಾರು ವರ್ಷಗಳಿಂದ ಎರಡು ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಿ ಸಂಚರಿಸಲು ಕಿರುದಾರಿಯನ್ನೇ ಬಿಡಲಾಗಿದೆ. ಆದರೆ ಚಾರ್ಮಾಡಿ ಘಾಟ್ನ ಈ ತಡೆಗೋಡೆ ಕುಸಿದರೆ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಆತಂಕವಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಳೆ ಅಬ್ಬರಕ್ಕೆ ಕಕ್ಕಾಬಿಕ್ಕಿಯಾದ ಜನ
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ರಸ್ತೆಯ ತಡೆಗೋಡೆ ಭಾಗದಲ್ಲಿ ಕಲ್ಲು ಇರಿಸಿ ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಆದಷ್ಟು ಬೇಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಳದಿಂದ ರಿವಿಟ್ ಮೆಂಟ್ ಕಟ್ಟಿ ತಡೆಗೋಡೆ ಏರಿಸಿದರೆ ರಸ್ತೆ ಉಳಿಯುತ್ತದೆ ಎಂದು ವಾಹನ ಸವಾರರು ಹೇಳಿದ್ದಾರೆ.
ಈಗಾಗಲೇ ತಡೆಗೋಡೆ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿದೆ ಎಂದು ಈ ಭಾಗದಲ್ಲಿ ಸಂಚರಿಸುವ ವಾಹನ ಚಾಲಕರು ತಿಳಿಸಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ತುರ್ತಾಗಿ ಗಮನ ಹರಿಸುವಂತೆ ವಾಹನ ಚಾಲಕರು ಒತ್ತಾಯಿಸಿದ್ದಾರೆ.