ಅರಣ್ಯಾಧಿಕಾರಿಗಳು ಮೊದಲು ಜನರಿಗೆ ಹುಲಿ ಉಗುರಿನಂತಹ ವಸ್ತುಗಳನ್ನು ಇಟ್ಟುಕೊಳ್ಳುವುದು ಅಪರಾಧ ಎಂಬ ಅರಿವು ಮೂಡಿಸಿ ತದನಂತರ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದ್ದಾರೆ.
ಸದ್ಯ ರಾಜ್ಯಾದ್ಯಂತ ಸುದ್ದಿಯಲ್ಲಿರುವ ಹುಲಿ ಉಗುರು ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಅ.27) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕಾಡು ಪ್ರಾಣಿಗಳ ಉಗುರು, ಚರ್ಮ, ದಂತ, ಜಿಂಕೆಯ ತಲೆ ಹೀಗೆ ಕಾಡು ಪ್ರಾಣಿಗಳ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವನ್ಯಜೀವಿ ಕಾಯ್ದೆಯ ಪ್ರಕಾರ ಅಪರಾಧ. ಇದೀಗ ಅರಣ್ಯ ಅಧಿಕಾರಿಗಳು ಹಲವು ಕಡೆ ಸೆಲೆಬ್ರಿಟಿಗಳನ್ನು, ಮಠಾಧೀಶರನ್ನು, ಅರ್ಚಕರ ಮನೆಗಳಲ್ಲಿ ಶೋಧ ನಡೆಸುತ್ತಿದ್ದು, ಕೆಲವರನ್ನು ಬಂಧಿಸಿದ್ದಾರೆ ಎಂದರು.
ಅರಣ್ಯ ಇಲಾಖೆಯವರು ಹಳ್ಳಿ ಭಾಗದಲ್ಲಿ ಹಲವಾರು ಮನೆಗಳಲ್ಲಿ ನೂರಾರು ವರ್ಷಗಳ ಹಿಂದಿನ ಜಿಂಕೆಯ ತಲೆ, ಕಾಡುಕೋಣದ ತಲೆ ಹೀಗೆ ಹಲವು ವಸ್ತುಗಳನ್ನು ಹವ್ಯಾಸದಿಂದಾಗಿ ಮತ್ತು ಪೂರ್ವಜರ ಕಾಲದ ವಸ್ತುಗಳು ಎಂದು ನೆನಪಿನಲ್ಲಿಟ್ಟುಕೊಳ್ಳುವ ದೃಷ್ಟಿಯಿಂದ ಇಂದು ಕೂಡ ಹಲವು ಮನೆಗಳಲ್ಲಿ ಹಲವು ರೀತಿಯ ಪ್ರಾಣಿಗಳ ವಸ್ತುಗಳು ಇವೆ. ಏಕಾಏಕಿ ಈ ವಸ್ತುಗಳನ್ನು ಸಂಗ್ರಹಿಸಿ, ಇಟ್ಟುಕೊಂಡವರನ್ನು ಬಂಧಿಸುವ ಬದಲು, ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧ ಎಂದು ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ಅರಣ್ಯಾಧಿಕಾರಿಗಳು ಮೊದಲು ಮುಂದಾಗಬೇಕು ಎಂದು ಅಭಿಪ್ರಾಯಿಸಿದರು.
ಜಾಗೃತಿಯ ನಂತರವೂ ಯಾರಾದರೂ ಆ ವಸ್ತುಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದರೆ, ನಿಮ್ಮ ಕಾಯ್ದೆಯ ಪ್ರಕಾರ ಅವರುಗಳ ಮೇಲೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳುವುದರಲ್ಲಿ ನಮ್ಮ ಆಕ್ಷೇಪವಿಲ್ಲ. ಆದರೆ, ಹಳ್ಳಿಯ ಜನರು ಮುಗ್ಧರು. ಇವುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಅಪರಾಧ ಎಂಬ ಅರಿವು ಸಹ ಇಲ್ಲದ ಜನರಿಗೆ ಮೊದಲು ಅರಿವು ಮೂಡಿಸುವುದು, ಶಾಲಾ ಕಾಲೇಜುಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಒಳ್ಳೆಯದು ಎಂದರು.
ಕಾಡುಪ್ರಾಣಿಗಳ ಉಗುರು, ಚರ್ಮ ಸೇರಿದಂತೆ ಯಾವುದೇ ವಸ್ತುಗಳನ್ನು ಸಂಗ್ರಹಿಸಿಡುವುದಕ್ಕೆ ನಮ್ಮ ವಿರೋಧವಿದೆ. ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ. ರಾಜೇಗೌಡರು ಸಹ ಈ ವಿಚಾರವನ್ನು ಈಗಾಗಲೇ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ಸಚಿವರ ಗಮನಕ್ಕೆ ತಂದಿದ್ದು, ಈ ತರಹದ ಯಾವುದೇ ದೂರು ಬಂದಲ್ಲಿ ಮೊದಲು ಅವರಿಗೆ ನೋಟಿಸ್ ನೀಡಿ, ತದನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಿ. ಏಕಾಏಕಿ ಬಂಧಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ನುಗ್ಗಿ ಮಂಜುನಾಥ್, ಈನೇಶ್, ಜೆ.ಎಂ. ಶ್ರೀಹರ್ಷ, ನಾರ್ವೆ ನಿಸಾರ್, ಸಂತೋಷ್ ಕುಲಾಸು, ಶ್ರೀಜಿತ್, ಕೀರ್ತಿ ಕುಮಾರ್ ಇದ್ದರು.