ನಾಲ್ಕು ಜಿಲ್ಲೆಗಳ 90 ಶಾಲೆಗಳಲ್ಲಿ ಒಟ್ಟು 6 ಸಾವಿರ ವಿದ್ಯಾರ್ಥಿಗಳು ಉಚಿತವಾಗಿ ಯಕ್ಷಗಾನ ನಾಟ್ಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಹೇಳಿದರು.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಕ್ಷಗಾನ ಕಲೆಯನ್ನು ಶೈಕ್ಷಣಿಕ ಆಯಾಮದೊಂದಿಗೆ ಪರಿಚಯಿಸಬೇಕೆಂಬ ಅಲೋಚನೆಯಿಂದ 2023ರಲ್ಲಿ ಕಾರ್ಯರೂಪಕ್ಕೆ ಬಂದ ಈ ಯೋಜನೆ ಮೂಲಕ ದ.ಕ. ಜಿಲ್ಲೆಯ ಒಟ್ಟು 38 ಶಾಲೆಗಳಲ್ಲಿ ಪ್ರಾರಂಭವಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಗಳ ಜತೆಗೆ ನಾಲ್ಕು ಜಿಲ್ಲೆಗಳ 87 ಶಾಲೆಗಳು ಸೇರ್ಪಡೆಯಾದವು. ಈ ಬಾರಿ ದ.ಕ. ಜಿಲ್ಲೆಯಲ್ಲಿ 58, ಉಡುಪಿಯಲ್ಲಿ 14, ಶಿವಮೊಗ್ಗದಲ್ಲಿ 16, ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಶಾಲೆಗಳಲ್ಲಿ ಯಕ್ಷ ಶಿಕ್ಷಣ ಪ್ರಾರಂಭಗೊಂಡಿವೆ ಎಂದರು.
ಇದನ್ನೂ ಓದಿ: ಮಂಗಳೂರು | ಕಲ್ಲಚ್ಚು ಪ್ರಶಸ್ತಿ; ಐವರು ಸಾಧಕರು ಆಯ್ಕೆ
ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಶಾಲಾ ಅವಧಿಯಲ್ಲಿ ಈ ಯಕ್ಷಗಾನ ತರಗತಿಯು 6ನೇ ತರಗತಿಯಿಂದ 10ನೇ ತರಗತಿಯೊಳಗಿನ ವಿದ್ಯಾರ್ಥಿಗಳಿಗೆ ನೀಡಲಾಗುವುದು. ಯಕ್ಷಗಾನದ ಜತೆಗೆ ಸಂಸ್ಕೃತಿ, ಜೀವನ ಮೌಲ್ಯ, ಕನ್ನಡ ಭಾಷಾ ಶುದ್ಧತೆಗೂ ಇದು ಸಹಾಯವಾಗಲಿದೆ. 49 ಶಿಕ್ಷಕರು ತರಗತಿ ನಡೆಸುತ್ತಿದ್ದು, 19 ಶಾಲೆಗಳಲ್ಲಿ ಬಡಗುತಿಟ್ಟು, 71 ಶಾಲೆಗಳಲ್ಲಿ ತೆಂಕುತಿಟ್ಟು ಯಕ್ಷಗಾನ ತರಗತಿಗಳು ಜರುಗಲಿದೆ. ಜೂನ್ನಿಂದ ಡಿಸೆಂಬರ್ ಕೊನೆಯವರೆಗೆ, ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 34, ಗರಿಷ್ಠ 64 ತರಗತಿಗಳನ್ನು ಮಾಡಲಾಗುತ್ತದೆ ಎಂದು ಯೋಜನೆಗೆ ನೆರವು ನೀಡುವ ವಾಸುದೇವ ಐತಾಳ್ ಹೇಳಿದರು.
ಯಕ್ಷಗಾನ ನಾಟ್ಯ ಕಲಿತ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿ ವೇದಿಕೆ ಕಲ್ಪಿಸುವ ಜತೆಗೆ, ಪ್ರಾದೇಶಿಕ ಘಟಕ ವ್ಯಾಪ್ತಿಯ ಕೇಂದ್ರಸ್ಥಾನದಲ್ಲಿ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ ನಡೆಸಿ ಅವಕಾಶ ನೀಡಲಾಗುತ್ತದೆ. ಯಕ್ಷಗಾನಾಸಕ್ತ ವಿದ್ಯಾರ್ಥಿಗಳ ಯಕ್ಷಗಾನೀಯ ಚಟುವಟಿಕೆ ಅಭಿವೃದ್ಧಿಗೆ ಪೂರಕವಾಗಿದೆ. ಮಕ್ಕಳಲ್ಲಿ ಪಠ್ಯ ಕಲಿಕಾ ಸಾಮರ್ಥ್ಯ ವೃದ್ಧಿಯಾಗಿದೆ. ಉತ್ತಮ ಅಂಕ ಪಡೆದವರಿಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುದೇಶ್ ರೈ, ಪ್ರದೀಪ್ ಆಳ್ವ, ಕದ್ರಿ ನವನೀತ್ ಶೆಟ್ಟಿ ಉಪಸ್ಥಿತರಿದ್ದರು.
