ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ ಸಿ ರೋಡ್ನಲ್ಲಿ ಸಂಘಪರಿವಾರದ ವಿವಾದದ ನಡುವೆಯೂ ಹಿಂದೂ ಬಾಂಧವರು ಮೀಲಾದುನ್ನಬಿಯ ಮೆರವಣಿಗೆಯಲ್ಲಿ ಸಾಗಿ ಬಂದ ಮುಸ್ಲಿಮರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ, ಬೋಳಿಯಾರ್, ಅನಂತಾಡಿ, ಕಾಡುಮಠ, ಪೆರ್ಲದಬೈಲು ಇತ್ಯಾದಿ ಪ್ರದೇಶಗಳಲ್ಲಿ ಮೀಲಾದುನ್ನಬಿಯ ಮೆರವಣಿಗೆಯಲ್ಲಿದ್ದ ಮುಸ್ಲಿಮರಿಗೆ ಸಿಹಿ ತಿಂಡಿ, ಪಾನೀಯಗಳನ್ನು ಹಂಚುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನದ ಹಿನ್ನೆಲೆಯಲ್ಲಿ ಸೋಮವಾರ ಕರ್ನಾಟಕದಾದ್ಯಂತ ಮುಸ್ಲಿಂ ಬಾಂಧವರು ಮೀಲಾದುನ್ನಬಿಯನ್ನು ಆಚರಿಸಿದ್ದಾರೆ.
ಬಂಟ್ವಾಳ ಕಾಂಗ್ರೆಸ್ ಮುಖಂಡನ ಪ್ರಚೋದನಕಾರಿ ಹೇಳಿಕೆಯ ಹಿನ್ನೆಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು, ವಿವಾದಾತ್ಮಕ ಹೇಳಿಕೆ ನೀಡುವ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ಬಿಸಿ ರೋಡ್ನಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು. ಇದರಿಂದಾಗಿ ಕೆಲಕಾಲ ಬಿಗುವಿನ ವಾತಾವರಣ ಕಂಡುಬಂತು.
ಇದೆಲ್ಲದರ ನಡುವೆ ಮಾಣಿ, ಅನಂತಾಡಿ, ಕೊಡಾಜೆ, ಬೋಳಿಯಾರ್ ಸೇರಿದಂತೆ ಹಲವು ಕಡೆಯ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಸಾಗಿ ಬಂದ ಮಸ್ಲಿಮರಿಗೆ ಸಿಹಿತಿಂಡಿ ವಿತರಿಸಿ ಸೌಹಾರ್ದತೆ ಮೆರೆದಿದ್ದಾರೆ.
ಉಡುಪಿಯಲ್ಲೂ ಹಿಂದೂಗಳಿಂದ ಸಿಹಿ ತಿಂಡಿ ವಿತರಣೆ
ಹಬ್ಬಗಳ ಸಂದರ್ಭದಲ್ಲಿ ಪರಸ್ಪರ ವೈನಮಸ್ಸು ಉಂಟು ಮಾಡುವ ಪ್ರಸಂಗಗಳು ಕರಾವಳಿಯಲ್ಲಿ ನಡೆಯುತ್ತಿವೆ.ನಾಗಮಂಗಲದಲ್ಲಿ ನಡೆದ ಘಟನೆ ಮತ್ತು ಬಂಟ್ವಾಳದಲ್ಲಿ ಈಗ ನಡೆಯುತ್ತಿರುವ ಘಟನೆಗಳೇ ಇದಕ್ಕೆ ಸಾಕ್ಷಿ. ಆದರೆ ಸೌಹಾರ್ದ ಬಯಸುವ ಮನಸ್ಸುಗಳು ಎಲ್ಲ ಧರ್ಮಗಳಲ್ಲೂ ಇದ್ದಾರೆ ಎಂಬುದಕ್ಕೆ ಪದೇಪದೆ ಸಾಕ್ಷಿಗಳು ಸಿಗುತ್ತಿವೆ.
ಇಂದು ಉಡುಪಿಯ ನೇಜಾರಿನ ಜಾಮಿಯಾ ಮಸೀದಿಯಲ್ಲಿ ಮೀಲಾದ್ ಪ್ರಯುಕ್ತ ನಡೆದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೆಳಾರ್ಕಳಬೆಟ್ಟು -ನೇಜಾರಿನ ಹಿಂದೂ ಬಾಂಧವರು ಮುಸಲ್ಮಾನ ಬಾಂಧವರಿಗೆ ತಂಪು ಪಾನೀಯ ನೀಡುವ ಮೂಲಕ ಪರಸ್ಪರ ಧರ್ಮ ಸೌಹಾರ್ದತೆ ಮೆರೆದಿದ್ದು, ಕರಾವಳಿಯ ಜನರಿಗೆ ಸೌಹಾರ್ದದ ಸಂದೇಶ ರವಾನಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ, “ಬಂಟ್ವಾಳದ ಬಿಸಿ ರೋಡ್ ನಲ್ಲಿ “ಈದ್ ಮಿಲಾದ್ ಮೆರವಣಿಗೆ ತಡೆಯುತ್ತೇವೆ” ಎಂದು ಬಜರಂಗದಳದ ಕಾರ್ಯಕರ್ತರು ಶರಣ್ ಪಂಪ್ ವೆಲ್ ನ ಸಿನಿಮಾ ಸ್ಟೈಲ್ ನಾಯಕತ್ವದಲ್ಲಿ ಆರ್ಭಟಿಸುತ್ತಿರುವಾಗ ಪಕ್ಕದ ಅನಂತಾಡಿ, ಕೊಡಾಜೆ, ಮಾಣಿಯಲ್ಲಿ ಹಿಂದೂ ಸಮುದಾಯದ ಸೌಹಾರ್ದ ಪ್ರಿಯ ಬಂಧುಗಳು ಮೀಲಾದ್ ಮೆರವಣಿಗೆಗೆ ಸಿಹಿ ಹಂಚಿ ಮನುಷ್ಯ ಧರ್ಮವನ್ನು ಎತ್ತಿಹಿಡಿದಿದ್ದಾರೆ. ಅವರಿಗೆ ನಾಡು ಋಣಿ” ಎಂದು ತಿಳಿಸಿದ್ದಾರೆ.

“ನಿನ್ನೆಯಿಂದ ಶುರುವಾಗಿರುವ ರಾಜಕೀಯ ಪ್ರೇರಿತ ಉದ್ವಿಗ್ನ ಸ್ಥಿತಿಯ ನಡುವೆಯೂ, ವಿಚಲಿತರಾಗದೆ ಸಿಹಿ ಹಂಚುವ ನಿರ್ಧಾರಕ್ಕೆ ಬದ್ದರಾದ ಈ ಯುವಕರಿಗೆ ಜನತೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ನಮ್ಮ ರಾಜಕಾರಣಿಗಳು, ಶಾಸಕರುಗಳು ಈ ಯುವಕರಿಂದ ಪಾಠ ಕಲಿಯಬೇಕು. ಶರಣ್ ಪಂಪ್ ವೆಲ್, ಪುನೀತ್ ಅತ್ತಾವರ, ಶಾಸಕ ಭರತ್ ಶೆಟ್ಟಿ, ವೇದವ್ಯಾಸ್ ಕಾಮತರಿಗೆ ಈ ಯುವಕರು ತಮ್ಮ ಕೃತಿಯ ಮೂಲಕ ಸರಿಯಾದ ಉತ್ತರ ಕೊಟ್ಟಿದ್ದಾರೆ. ಇಷ್ಟು ಸಾಕು” ಎಂದು ತಿಳಿಸಿದ್ದಾರೆ.





ಅನರ್ಹರಿಗೆ ದಾನ ಆಗಲಿ ಉಪಕಾರ ಮಾಡಬರದಂತೆ.