ಪ್ರಧಾನಿ ನರೇಂದ್ರ ಮೋದಿಯವರೇ ನೀವು ಒಂದು ದೇಶ-ಒಂದು ಚುನಾವಣೆ ಎನ್ನುವುದನ್ನು ಪಕ್ಕಕ್ಕಿಟ್ಟು, ಶ್ರಮ ಜೀವಿಗಳಿಗೆ ಒಂದೇ ರೀತಿಯ ವೇತನ ನೀಡಿ. ನಿಮಗೆ ತಾಕತ್ತಿದ್ದರೆ ಜನರನ್ನು ಬೆಲೆ ಏರಿಕೆಯಿಂದ ಕಾಪಾಡಿ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ(ಸಿಪಿಐಎಂ) ರಾಜ್ಯ ಸಮಿತಿ ಸದಸ್ಯ ಕೆ ಮಹಾಂತೇಶ್ ಪ್ರಧಾನಿಗೆ ಸವಾಲೆಸೆದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐಎಂ)ದಿಂದ ಹಮ್ಮಿಕೊಂಡಿದ್ದ ಮಂಗಳೂರು ನಗರ ದಕ್ಷಿಣ ಸಮ್ಮೇಳನದಲ್ಲಿ ಪ್ರಮುಖ ಭಾಷನಕಾರರಾಗಿ ಮಾತನಾಡಿದರು.
“ಒಂದು ದೇಶ-ಒಂದು ಚುನಾವಣೆ ದೇಶಕ್ಕೆ ದೊಡ್ಡ ಹೊರೆ. ಒಂದೇ ಬಾರಿಗೆ ಚುನಾವಣೆ ಹೇಗೆ ಸಾಧ್ಯ. ಮಂಗಳೂರಿನ ಜನರ ಸ್ಥಳೀಯ ಸಮಸ್ಯೆ ಬೇರೆ, ಲಕ್ನೋ ಜನರ ಸ್ಥಳೀಯ ಸಮಸ್ಯೆ ಬೇರೆ ಅಲ್ಲವೇ” ಎಂದು ಪ್ರಶ್ನಿಸಿದರು.
“ನಾನು ಈ ಪ್ರದೇಶದಲ್ಲೇ ಅದೆಷ್ಟೋ ಕೂಲಿ ಕಾರ್ಮಿಕರನ್ನು ನೋಡಿದೆ. ತಮ್ಮ ಊರಿನಲ್ಲಿ ಉದ್ಯೋಗವಿಲ್ಲದೆ ಇಲ್ಲಿಗೆ ಬಂದು ದುಡಿಯುತ್ತಿದ್ದಾರೆ. ಆದರೆ ಅವರಿಗೆ ಮನೆಯಿಲ್ಲ. ಇಲ್ಲೇ ಮೈದಾನದಲ್ಲಿ ಮಲಗುತ್ತಾರೆ. ದುಡಿದು ಊರಿಗೆ ಹಣ ಕಳಿಸುತ್ತಾರೆ. ಅವರಿಗೆ ಯಾವ ಸುರಕ್ಷತೆಯೂ ಇಲ್ಲ. ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿಯೂ ಕಾರ್ಮಿಕರ ಸ್ಥಿತಿ ಹೀಗೆಯೇ ಇದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಇತ್ತೀಚೆಗೆ ಗುಜರಾತ್ನಲ್ಲಿ ನಕಲಿ ಜಡ್ಜ್ ಒಬ್ಬರನ್ನು ಬಂಧಿಸಿದರು. ಅಲ್ಲೇ ನಕಲಿ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರೂ ಕೂಡಾ ಅದೇ ರಾಜ್ಯದವರು. ಮೋದಿ ಟೀ ಮಾರಿದ್ದರೆಂದು ಹೇಳುತ್ತಾರೆ. ಆದರೆ ಅವರು ಟೀ ಮಾರಿದ ರೈಲ್ವೆ ಸ್ಟೇಷನ್ ಇಲ್ಲ. ಮೋದಿ ಡಿಗ್ರಿ ಪಡೆದ ಕಾಲೇಜು ಇಲ್ಲ, ಅವರ ಸ್ನೇಹಿತರೂ ಕೂಡಾ ಇಲ್ಲ. ನಮ್ಮ ದೇಶದ ಪ್ರಧಾನಿ ಕೂಡಾ ನಕಲಿ. ನಾವು ನಕಲಿಗಳ ದೇಶದಲ್ಲಿದ್ದೇವೆ” ಎಂದು ಕುಟುಕಿದರು.
ಈಗ ಲಕ್ಷಾಂತರ ರೂಪಾಯಿ ಹಣ ಕೊಟ್ಟು ವಿದ್ಯಾಭ್ಯಾಸ ಮಾಡಿದರೂ ಉದ್ಯೋಗ ಸಿಗುವುದಿಲ್ಲ. ಉದ್ಯೋಗ ಸಿಕ್ಕರೂ ಅದು ರಾತ್ರಿ ಪಾಳಿಯ ಕೆಲಸವಾಗಿರುತ್ತದೆ. ನಾವು ನಮ್ಮ ಮಕ್ಕಳಿಗೆ ನೈಟ್ ಶಿಫ್ಟ್ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಅದರಿಂದ ಆಗುವ ಆರೋಗ್ಯ ಸಮಸ್ಯೆ ನಮಗೆ ತಿಳಿದಿಲ್ಲ. ನಿದ್ದೆಯಿಲ್ಲದೆ, ಸರಿಯಾಗಿ ಆಹಾರ ಸೇವಿಸದೇ ಸಣ್ಣ ವಯಸ್ಸಿನವರಿಗೂ ಹೃದಯಾಘಾತವಾಗುತ್ತಿದೆ” ಎಂದರು.

“ನಮ್ಮದು ಪ್ರಜಪ್ರಭುತ್ವ ಪಕ್ಷ. ಇಲ್ಲಿ ಎಲ್ಲವೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತವೆ. ಬಂಡವಾಳಶಾಹಿ ಪಕ್ಷಗಳಂತೆ ನಮ್ಮ ಪಕ್ಷವಲ್ಲ. ಬಿಜೆಪಿಯಿಂದ ಕಾಂಗ್ರೆಸ್, ಕಾಂಗ್ರೆಸ್ನಿಂದ ಬಿಜೆಪಿಗೆ ಹಾರಿ ಟೆಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಅಂತಹ ಆಯ್ಕೆ ನಮ್ಮಲ್ಲಿಲ್ಲ. ಇಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಪಕ್ಷದ ಬೋರ್ಡು ಮಾತ್ರ ಬೇರೆಯಿದೆ. ನೀತಿಯಲ್ಲಿ ವ್ಯತ್ಯಾಸವಿಲ್ಲ. ನಾವು ಅನಿವಾರ್ಯವಾಗಿ ಜನರನ್ನು ವಿಭಜಿಸುವ ಬಿಜೆಪಿಯನ್ನು ಸೋಲಿಸಲು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿದೆವು. ಹಾಗಂತ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಬೆಂಬಲಿಸುತ್ತೇವೆ ಎಂದಲ್ಲ. ನಾವು ಅದರ ವಿರುದ್ಧ ಹೋರಾಟ ಮಾಡುತ್ತೇವೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದ.ಕ | ಅಮೆರಿಕ ಮೆಚ್ಚಿಸಲು ಇಸ್ರೇಲ್ಗೆ ಮೋದಿ ಬೆಂಬಲ: ಯಾದವ್ ಶೆಟ್ಟಿ ಆರೋಪ
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, “ದೇಶದಲ್ಲಿ ಮೃತದೇಹವನ್ನೂ ಕೂಡಾ ಬಂಧನ ಮಾಡುವ ಊರು ಇದ್ದರೆ, ಅದು ಮಂಗಳೂರು ಆಗಿದೆ. ಇಲ್ಲಿ ನಾಯಿಕೊಡೆಗಳಂತೆ ಅಲ್ಲಲ್ಲಿ ತಲೆ ಎತ್ತಿರುವ ಆಸ್ಪತ್ರೆಗಳು ಲಕ್ಷಾಂತರ ರೂಪಾಯಿ ದರೋಡೆ ಮಾಡುತ್ತಾರೆ” ಎಂದು ಹೇಳಿದರು.
ವೇದಿಕೆಯಲ್ಲಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಯಾದವ್ ಶೆಟ್ಟಿ, ಪದ್ಮಾವತಿ ಶೆಟ್ಟಿ, ನೂತನ ಮಂಗಳೂರು ನಗರ ಸಮಿತಿ ಸದಸ್ಯರು ಇದ್ದರು.