ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಗೆ ರಾಷ್ಟ್ರಪತಿ ದಲಿತೆ ಎಂಬ ಎಕೈಕ ಕಾರಣಕ್ಕೆ ದೂರವಿಟ್ಟವರು, ಧಾರ್ಮಿಕತೆಯೆಂದು ಜಾತೀಯತೆ ಮಾಡುವವರು ಕೇವಲ ಓಟಿಗಾಗಿ ದಲಿತರ ಮನೆಗಳಿಗೆ ಶ್ರೀರಾಮನ ಮಂತ್ರಾಕ್ಷತೆ ತಂದರೆ, ಅದನ್ನು ದಲಿತರು ಸ್ವೀಕರಿಸಬಾರದು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಕರೆ ನೀಡಿದ್ದಾರೆ.
ಉಡುಪಿಯ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಹಿಂದು ಧರ್ಮದ ದೇವರುಗಳ ಕೊಳಕನ್ನು ಎತ್ತಿ ತೋರಿಸುವ ಕೆಲಸವನ್ನು ಅಂಬೇಡ್ಕರ್ ಮಾಡಿದ್ದಾರೆ. ರಾಮಾಯಾಣದ ಮೌಲ್ಯಗಳು ನಮ್ಮ ಸಾಮಾಜಿಕ ಸಂಬಂಧಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದ ಜಯನ್ ಮಲ್ಪೆ, ರಾಜಕೀಯ ಆದರ್ಶಗಳನ್ನು ರೂಪಿಸಿದೆ. ವರದಕ್ಷಿಣೆ ತರದ ಹೆಣ್ಣಿಗೆ ಬೆಂಕಿ, ಸ್ವಾತಂತ್ರ್ಯ ಬಯಸುವ ದಲಿತರಿಗೆ ಹೇಲು ತಿನ್ನಿಸುವುದು, ಕುಡಿಯಲೂ ನೀರು ಕೊಡದೆ, ದೇವರನ್ನೂ ನೋಡಲು ಬಿಡದೆ, ಮೂಕ ಹೆಣ್ಣುಗಳ ಮೇಲಿನ ಅತ್ಯಾಚಾರಗಳೆಲ್ಲವೂ ರಾಮಾಯಣದ ಸ್ಪೂರ್ತಿಯನ್ನು ಪಡೆದಿದೆ” ಎಂದರು.
“ನಿಜವಾಗಿ ಭಾರತದ ದಲಿತ ಹೆಣ್ಣುಮಕ್ಕಳ ಭವಿಷ್ಯವನ್ನು ಶಿಕ್ಷಣದ ಮೂಲಕ ಬೆಳಕಿಗೆ ತಂದು ಹೊಸ ಇತಿಹಾಸ ಸೃಷ್ಟಿಸಿದ್ದ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ ದಲಿತರ ಪಾಲಿನ ನಂದಾದೀಪ” ಎಂದು ಜಯನ್ ಮಲ್ಪೆ ತಿಳಿಸಿದ್ದಾರೆ.
“ದೇಶದ ಸಂಪ್ರದಾಯವಾದಿಗಳು, ಮನುವಾದಿಗಳು ಹುಟ್ಟುಹಾಕಿದ ದೇವರು, ಧರ್ಮ, ಮೂಢನಂಬಿಕೆ, ಅಸಮಾನತೆ, ಅಸ್ಪøಶ್ಯತೆಯಿಂದ ತಳ ಸಮುದಾಯಗಳು ದಬ್ಬಾಳಿಕೆ, ದೌರ್ಜನ್ಯಕ್ಕೆ ಒಳಗಾಗಿದ್ದ ಕಾಲಘಟ್ಟದಲ್ಲಿ ಸಾವಿತ್ರಿ ಬಾಯಿ ಫುಲೆಯವರ ಗಟ್ಟಿತನವೇ ನಮಗೆಲ್ಲ ಆದರ್ಶವಾಗಬೇಕು” ಎಂದರು.
ಅಂಬೇಡ್ಕರ್ ಯುವಸೇನೆಯ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ತೊಟ್ಟಂ ಮಾತನಾಡಿ, “ದಲಿತರು, ಶೂದ್ರರು ಮತ್ತು ಮೇಲ್ಜಾತಿ ಸೇರಿದಂತೆ ಎಲ್ಲಾ ಮಹಿಳೆಯರಿಗೆ ಕಠಿಣ ಸಾಮಾಜಿಕ ಪರಿಸ್ಥಿತಿಯಲ್ಲಿ ಅಪಾರ ಕಷ್ಟಗಳನ್ನು ಎದುರಿಸಿ ಅಕ್ಷರ ಕಲಿಸಿದ ಸಾವಿತ್ರಿ ಬಾಯಿ ಸಾಧನೆ ಬಗ್ಗೆ ನಮ್ಮ ಸಮಾಜದಲ್ಲಿ ಹೆಚ್ಚು ಪ್ರಚಾರ ಸಿಕ್ಕಿಲ್ಲ” ಎಂದರು.
ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿ, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಅಕ್ಷರಶ ಸತ್ಯ. ಒಬ್ಬ ಮಹಿಳೆ ಅಕ್ಷರಸ್ಥಳಾದರೆ ಇಡೀ ಕುಟುಂಬವೇ ಅಕ್ಷರಸ್ಥ ಕುಟುಂಬವಾಗುತ್ತದೆ ಸಾವಿತ್ರಿ ಬಾಯಿ ಫುಲೆಯವರ ಸಾಧನೆ ಭಾರತದ ಮಹಿಳೆಯರ ಶಿಕ್ಷಣಕ್ಕೆ ಹಿಡಿದ ಕನ್ನಡಿಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ರವಿರಾಜ್ ಲಕ್ಷ್ಮೀನಗರ, ನಾಗೇಶ್ ನೆರ್ಗಿ, ವಸಂತ ಅಂಬಲಪಾಡಿ, ಅರುಣ್ ಸಲ್ಯಾನ್, ಭಗವಾನ್ ಮಲ್ಪೆ, ದೀಪಕ್ ಕೊಡವೂರು, ನವೀನ್ ಬನ್ನಂಜೆ, ಪ್ರಸಾದ್ ಮಲ್ಪೆ,ರತನ್ ನೆರ್ಗಿ, ಕೃಷ್ಣ ಶ್ರೀಯಾನ್, ಪ್ರಶಾಂತ್ ಕಾಂಚನ್ ನೆರ್ಗಿ, ಕಲಾವತಿ ತೊಟ್ಟಂ, ಸಂಕಿ ತೊಟ್ಟಂ, ಸಂಧ್ಯಾ ಕೃಷ್ಣ ಶ್ರೀಯಾನ್, ಹರೀಶ್ ನೆರ್ಗಿ, ಮುಂತಾದವರು ಭಾಗವಹಿಸಿದ್ದರು. ಸುಕೇಶ್ ಪುತ್ತೂರು ಸ್ವಾಗತಿಸಿದರು., ದಯಾಕರ ಮಲ್ಪೆ ವಂದಿಸಿದರು.