ಸಂಘ ಪರಿವಾರ ಮತ್ತು ಮನುವಾದಿಗಳಿಂದ ಸಂವಿಧಾನ ರಕ್ಷಿಸುವುದು ನಮ್ಮೆದುರಿಗಿರುವ ದೊಡ್ಡ ಸವಾಲು, ಸಂಘ ಪರಿವಾರದ ಗುಪ್ತ ಕಾರ್ಯಸೂಚಿ ಬಗ್ಗೆ ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಅದನ್ನು ಪ್ರತಿಯೊಬ್ಬರೂ ತಮ್ಮ ಹಂತದಲ್ಲಿ ಮಾಡಬೇಕುʼ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಹೇಳಿದರು.
ಬೀದರ್ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ಆಯೋಜಿಸಿದ್ದ ʼದಲಿತ ಚಳುವಳಿಯ ಪುನರುತ್ಥಾನ ಮತ್ತು ಮುಂದಿನ ಸವಾಲುಗಳ ಅವಲೋಕನ ಹಾಗೂ ಕಾರ್ಯಕರ್ತರ ಸಮಲೋಚನಾ ಸಭೆʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರ್ಎಸ್ಎಸ್ ದಿಂದ ದಲಿತರು ಜಾಗೃತರಾಗಿರಿ :
ʼಸಾಮಾಜಿಕ, ಆರ್ಥಿಕ ಸಮಾನತೆ ಬರುವವರೆಗೆ ಈ ದೇಶದಲ್ಲಿ ಮೀಸಲಾತಿ ಮುಂದುವರೆಯುವ ಅಗತ್ಯವಿದೆ. ಸಂಘ ಪರಿವಾರದ ಸೂಚನೆಯ ಪ್ರಕಾರ ಒಳಮಿಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದಾದ್ಯಂತ ಅ.16 ರಂದು ಹೋರಾಟ ನಡೆಸಲಾಗಿತ್ತು. ಚಳುವಳಿಯ ಬಗ್ಗೆ ಏನು ಗೊತ್ತಿರದವರು ಹೋರಾಟ ಮಾಡಿದ್ದಾರೆ. ಈ ಮೂಲಕ ಮತ್ತೊಂದು ಜಾತಿಯವರನ್ನು ಕೆರಳಿಸುವ ತನ್ನ ಬೇಳೆ ಬೇಯಿಸಿಕೊಂಡಿದ್ದಾರೆ. ಸಂಘ ಪರಿವಾರದ ಈ ಪ್ರಯತ್ನ ಹೊಸದಲ್ಲ. 1996ರಿಂದ ನಿರಂತರವಾಗಿ ನಡೆಸುತ್ತಿದೆ. ಇದನ್ನು ದಲಿತ ಸಂಘರ್ಷ ಸಮಿತಿ ವಿಫಲಗೊಳಿಸುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ಎಸ್) ಸಂಘದ ಗುಪ್ತ ಕಾರ್ಯಸೂಚಿ ಬಗ್ಗೆ ದಲಿತರು ಜಾಗೃತರಾಗಿರಬೇಕುʼ ಎಂದು ತಿಳಿಸಿದರು.
ದಲಿತರು ಮುಖ್ಯಮಂತ್ರಿ ಆಗಲಿ :
ʼರಾಜ್ಯದಲ್ಲಿ ದಲಿತರಿಗೆ ಮೂರು ಸಲ ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಆದರೆ, ಅದನ್ನು ವ್ಯವಸ್ಥಿತವಾಗಿ ತಪ್ಪಿಸಲಾಗಿದೆ. ದಲಿತರು ಸಿಎಂ ಆಗಬೇಕು, ಸ್ವತಂತ್ರ ಭಾರತದಲ್ಲಿ ದಲಿತರು ಸಿಎಂ ಆಗಿಲ್ಲ. ದಲಿತರು ಸಮಾಜ ಆಳುವ ಸಮಾಜವಾಗಬೇಕೆಂಬ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸು ನನಸು ಮಾಡಲು ಎಲ್ಲರೂ ಶ್ರಮಿಸಬೇಕಿದೆ. ದಲಿತ ಸಿಎಂ ಕೂಗು ಬಲಗೊಳ್ಳಬೇಕಿದೆ. ದಲಿತರಿಗೆ ಅವರದೇ ಆದ ಪಕ್ಷ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷ ಬೆಂಬಲಿಸುವುದು ಅನಿವಾರ್ಯವಾಗಿದೆʼ ಎಂದು ತಿಳಿಸಿದರು,
ʼಈಗ ಕರ್ನಾಟಕದದಲ್ಲಿ ಮತ್ತೆ ದಲಿತರು ಸಿಎಂ ಆಗುವ ಅವಕಾಶ ಇದೆ. ನಮಗೂ ಅವಕಾಶ ಸಿಗಬೇಕಿದೆ, ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ದಲಿತರಿದ್ದಾರೆ. ಇದರಲ್ಲಿ ಶೇ.90ರಷ್ಟು ಹೊಲೆ-ಮಾದಿಗರು ಇದ್ದಾರೆ. ಯಾವುದೇ ಚುನಾವಣೆಗಳಲ್ಲಿ ಅಲ್ಲಿ ನಮ್ಮ ಪಾಲು ಹಕ್ಕಿನಿಂದ ಕೇಳಬೇಕು. ಖಾಸಗಿ ಕ್ಷೇತ್ರದಲ್ಲಿ ಕೂಡ ಮೀಸಲಾತಿ ಸಿಗಬೇಕುʼ ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಮಾತನಾಡಿ, ʼಸಂವಿಧಾನದ ಒಂದೊಂದೇ ಪುಟಗಳನ್ನು ತೆಗೆಯುವುದರ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಅದನ್ನು ದುರ್ಬಲಗೊಳಿಸುತ್ತಿದೆ. ಆದರೆ ಸಂವಿಧಾನ ಸುಟ್ಟು ಹಾಕಿದವರು ಅದನ್ನು ತಲೆ ಮೇಲೆ ಹೊತ್ತುಕೊಳ್ಳುವ ಸಂದರ್ಭ ಬಂದಿದೆ. ಮೀಸಲಾತಿ ನೀಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಕೆಲವರು ವಿರೋಧಿಸುವುದು ಸರಿಯಲ್ಲʼ ಎಂದರು.
ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಕೇವಲ ದಲಿತರಿಗಾಗಿ ಹೋರಾಟ ನಡೆಸಲಿಲ್ಲ. ಹಿಂದುಳಿದ, ಅಲ್ಪಸಂಖ್ಯಾತ, ರೈತ, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟಗಳು ರೂಪಿಸಿ ಅವರ ಹಕ್ಕುಗಳನ್ನು ಸಂರಕ್ಷಿಸಿ ಚಳವಳಿಯನ್ನು ಇಂದಿಗೂ ಜೀವಂತ ಇಟ್ಟಿದೆ. ರಾಜ್ಯದಲ್ಲಿ ಮೂರು ದಶಕಗಳಿಂದ ಒಳ ಮೀಸಲಾತಿ ಹೋರಾಟ ನಡೆಯುತ್ತದೆ. ಅಂಬೇಡ್ಕರ್ ಅವರ ಹೆಸರಿನಲ್ಲಿ ನೂರಾರು ಸಂಘಟನೆಗಳಿವೆ. ಆದರೆ ಕೆಲವೇ ಸಂಘಟನೆಗಳು ಸಮಾಜಮುಖಿ ಕೆಲಸ ಮಾಡುತ್ತಿವೆ. ಬ್ಲಾಕ್ ಮೇಲ್, ಲೆಟರ್ ಹೆಡ್ ಸಂಘಟನೆಗಳ ಸಂಖ್ಯೆ ಹೆಚ್ಚಿದೆ. ಹೊಲೆ-ಮಾದಿಗರ ಏಕತೆ ಒಡೆಯುವ ಹುನ್ನಾರ ನಡೆಯುತ್ತಿದೆ, ಈ ಬಗ್ಗೆ ಎಲ್ಲರೂ ಎಚ್ಚರದಿಂದ ಹೆಜ್ಜೆ ಇಡಬೇಕುʼ ಎಂದರು.

ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಬೆಲ್ದಾರ್ ಮಾತನಾಡಿ, ʼಸಂಘ ಪರಿವಾರ ದೇಶದಲ್ಲಿ ಅನೇಕ ಸಂಘಟನೆಗಳನ್ನು ಹುಟ್ಟುಹಾಕಿ, ಬಾಬಾಸಾಹೇಬರ ವಿಚಾರಗಳನ್ನು ಅಳಿಸಿ ಹಾಕುವ ಪ್ರಯತ್ನ ನಡೆಸುತ್ತಿದೆ. ಅದಕ್ಕೆ ಯಶಸ್ಸು ಕೂಡ ಸಿಗುತ್ತಿದೆ. ಆದರೆ, ನಾವು ಉತ್ತಮ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಫಲ ಸಿಗುತ್ತಿಲ್ಲ. ಪರಿಶಿಷ್ಟ ಜಾತಿಯಲ್ಲಿ ಅನೇಕ ಜಾತಿಗಳಿವೆ. ಆದರೆ, ಅವುಗಳು ಹೋರಾಟಕ್ಕೆ ಬೆಂಬಲಿಸುತ್ತಿಲ್ಲ. ಹೆಚ್ಚಿನವು ಸಂಘ ಪರಿವಾರದ ತಂತ್ರಕ್ಕೆ ಒಳಗಾಗಿ ಕೆಲಸ ಮಾಡುತ್ತಿವೆ. ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ರಸ್ತೆಗಳಿದು ಹೋರಾಟ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆʼ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಾಬು ಪಾಸ್ವಾನ್ ಮಾತನಾಡಿ, ʼತುಳಿತಕ್ಕೊಳಗಾದ ಸಮುದಾಯದವರನ್ನು ಜಾಗೃತಿಗೊಳಿಸುವುದರಲ್ಲಿ ದಲಿತ ಸಂಘರ್ಷ ಸಮಿತಿ ಪ್ರಮುಖ ಪಾತ್ರವಹಿಸಿದೆ. ಬರುವ ದಿನಗಳಲ್ಲಿ ಸವಾಲುಗಳನ್ನು ಎದುರಿಸಲು ಸಮಿತಿಯ ಕಾರ್ಯಕರ್ತರು ಸಿದ್ದರಾಗಬೇಕುʼ ಎಂದರು,
ಕಾರ್ಯಕ್ರಮದಲ್ಲಿ ಶೋಷಿತ ಸಮಾಜ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಾಳಗೆ, ಪತ್ರಕರ್ತ ಶಶಿಕಾಂತ್ ಶೆಂಬೆಳ್ಳಿ, ಸಂವಿಧಾನ ಸಂರಕ್ಷಣಾ ಸಮಿತಿಯ ಮುಖ್ಯಸ್ಥ ಅಬ್ದುಲ್ ಮನ್ನಾನ್ ಶೇಠ್ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ‘ಈ ದಿನ’ ಫಲಶೃತಿ: ದಶಕದ ಬಳಿಕ ಇಸ್ಲಾಂಪುರ-ಕೌಠಾ(ಬಿ) ರಸ್ತೆ ಕಾಮಗಾರಿಗೆ ಚಾಲನೆ
ಪ್ರಮುಖರಾದ ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ರವಿಕುಮಾರ ವಾಘಮಾರೆ, ಜೀವನ ಬುಡ್ತಾ, ಬಕ್ಕಪ್ಪ ದಂಡಿನ, ಅಂಬಾದಾಸ ಗಾಯಕವಾಡ, ಸಾಯಿ ಶಿಂಧೆ, ಅವಿನಾಶ ದೀನೆ, ಮೊಗಲಪ್ಪ ಮಾಲಗೆ, ರಾಜಕುಮಾರ ಶೇರಿಕರ, ಶಿವರಾಜ ಲಡಕರ, ಸುಭಾಷ ಲಾಧಾ, ಸೂರ್ಯಕಾಂತ ಸಾಧುರೆ, ಗೋವಿಂದ ಜಾಲಿ, ಅರುಣ ಪಟೇಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಂದೀಪ ಕಾಂಟೆ ನಿರೂಪಿಸಿ, ವಂದಿಸಿದರು. ಸುನೀಲ ಕಡ್ಡೆ ಹಾಗೂ ಅವರ ತಂಡ ಕ್ರಾಂತಿ ಗೀತೆಗಳನ್ನು ನಡೆಸಿದರು.