ಅತ್ಯಾಚಾರ ಪ್ರಕರಣದ ಆರೋಪಿ ಜೈಲಿನಿಂದ ಪರಾರಿಯಾಗಿರುವ ಘಟನೆ ದಾವಣಗೆರೆ ನಗರದ ಉಪಕಾರಾಗೃಹದಲ್ಲಿ ನಡೆದಿದೆ. ಪರಾರಿಯಾದ ಆರೋಪಿ ವಸಂತ್(23) ಎಂದು ಗುರುತಿಸಲಾಗಿದ್ದು, ಈತ ಕಾರಾಗೃಹದ ಗೋಡೆಯನ್ನು ಹಾರಿ ಪರಾರಿಯಾಗಿದ್ದಾನೆ.
ಆರೋಪಿ ವಸಂತ್ ದಾವಣಗೆರೆ ನಗರದ ಹೊರವಲಯದ ಕೂರರ್ ಪ್ರದೇಶದ ನಿವಾಸಿಯಾಗಿದ್ದಾನೆ. ಈತ ಆಟೋ ಚಾಲಕನಾಗಿದ್ದು, ಕಳೆದ ಎರಡು ದಿನಗಳ ಹಿಂದೆ ಈತನ ವಿರುದ್ಧ ದಾವಣಗೆರೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೋರಾ? ಬೀದರ್ | ಕಳವು ಪ್ರಕರಣ: 9 ಆರೋಪಿಗಳ ಬಂಧನ; 28 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ
ಅತ್ಯಾಚಾರ ಆರೋಪ ಎದುರಿಸುತ್ತಿದ್ದ ವಸಂತ್ನನ್ನು ಮಹಿಳಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ದಾವಣಗೆರೆ ಉಪ ಕಾರಾಗೃಹದಲ್ಲಿದ್ದ ಆರೋಪಿ ಶನಿವಾರ ಗೋಡೆಯನ್ನು ಹಾರಿ ಪರಾರಿಯಾಗಿದ್ದಾನೆ. ಈ ವೇಳೆ, ಆತನ ಕಾಲಿಗೆ ಪೆಟ್ಟಾಗಿದ್ದರೂ ಲೆಕ್ಕಿಸದೆ ತಪ್ಪಿಸಿಕೊಂಡಿದ್ದಾನೆ.
ಆರೋಪಿ ಪರಾರಿಯಾದ ಕೆಲವು ಗಂಟೆಗಳ ಬಳಿಕ ಪೊಲೀಸರಿಗೆ ಗೊತ್ತಾಗಿದೆ. ಕೂಡಲೇ ಜೈಲು ಸಿಬ್ಬಂದಿ ಬಸವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪರಾರಿಯಾಗಿರುವ ಅತ್ಯಾಚಾರ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.