ಹರಿಹರದ ಪಂಚಮಸಾಲಿ ಪೀಠದಲ್ಲಿ ಜನವರಿ 14ರಂದು ನಡೆಯಲಿರುವ ಹರಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಹ್ವಾನಿಸಲು ತೀರ್ಮಾನ ಕೈಗೊಂಡಿರುವುದಕ್ಕೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಖಂಡನೆ ವ್ಯಕ್ತಪಡಿಸಿದೆ.
ದಾವಣಗೆರೆಯಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಆರ್ ವಿ ಅಶೋಕ್ ಗೋಪನಾಳ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “ಆಡಳಿತವನ್ನು ದುರ್ಬಳಕೆ ಮಾಡಿಕೊಂಡು ಪಂಚಮಸಾಲಿ ಸಮಾಜದ ನ್ಯಾಯಯುತ ಬೇಡಿಕೆಯಾದ 2ಎ ಮೀಸಲಾತಿ ನೀಡುವುದನ್ನು ವಿರೋಧಿಸಿ, ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿಸಲಾಗಿದೆ. ಪಂಚಮಸಾಲಿ ಸಮಾಜದ 200ಕ್ಕೂ ಹೆಚ್ಚು ಹೋರಾಟಗಾರರು ಗಾಯಗೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಈ ನೋವಿನ ನೆನಪು ಹಸಿಯಾಗಿರುವಾಗಲೇ ಹರಿಹರದ ಶ್ರೀಗಳು, ಲಾಠಿ ಚಾರ್ಜ್ ಮಾಡಲು ಕಾರಣರಾದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿರುವುದು ಖಂಡನೀಯ” ಎಂದಿದ್ದಾರೆ.
“ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರು 2ಎ ಮೀಸಲಾತಿ ವಿರೋಧ ಮಾಡಿದಾಗಲೂ ಅವರನ್ನು ಕರೆದು ಸನ್ಮಾನ ಮಾಡಿದ್ದೀರಿ. ಈಗ ಸಿದ್ದರಾಮಯ್ಯನವರು ಮೀಸಲಾತಿಗೆ ಬಹಿರಂಗ ವಿರೋಧ ಮಾಡಿ, ಆಡಳಿತ ದುರ್ಬಳಕೆ ಮಾಡಿಕೊಂಡು ಪೊಲೀಸ್ ಇಲಾಖೆಯಿಂದ ಲಾಠಿ ಚಾರ್ಜ್ ಮಾಡಿಸಿರುವವರನ್ನು ಪೀಠಕ್ಕೆ ಕರೆದು ಸನ್ಮಾನ ಕಾರ್ಯಕ್ರಮ ನಡೆಸುತ್ತಿರುವುದು ಏನನ್ನು ಸೂಚಿಸುತ್ತದೆ ಎಂಬುದನ್ನು ಶ್ರೀಗಳು ತಿಳಿದುಕೊಳ್ಳಬೇಕಿದೆ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ?: ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್, ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಧಾರವಾಡ ಪೀಠ ನೋಟಿಸ್
“ಈ ರೀತಿ ನಿರ್ಧಾರಗಳಿಂದ ಶ್ರೀಗಳು ಸಮಾಜದ ನ್ಯಾಯಯುತ ಬೇಡಿಕೆಗಳನ್ನು ವಿರೋಧಿಸುತ್ತಿರುವ ರಾಜಕಾರಣಿಗಳ ಪರವಿದ್ದಾರೋ, ಅವರ ಒಲವು ಸಮಾಜದ ಪರವಿದೆಯೋ? ಈ ವಿಷಯಗಳನ್ನು ಚರ್ಚೆ ಮಾಡುವುದು ಅನಿವಾರ್ಯವಾಗಿದೆ. ಸಮಾಜದ ಒಳತಿಗಾಗಿ ಶ್ರಮಿಸುವ ದಾವಣಗೆರೆ ಜಿಲ್ಲೆಯ ಹಾಲಿ ಸಚಿವರು, ಮಾಜಿ ಸಚಿವರು, ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರನ್ನು, ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಾಮಾಜಿಕ ಸೇವಾ ಮುಖಂಡರನ್ನು ಸೇರಿಸಿ ಕಾರ್ಯಕ್ರಮ ಮಾಡಿದರೆ, ಅವರನ್ನೂ ಕೂಡಾ ಪ್ರೋತ್ಸಾಹಿಸಿದಂತಾಗುತ್ತದೆ” ಎಂದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಹೆಚ್ ಎಸ್ ಯೋಗೇಶ್, ಮಂಜು ಪೈಲ್ವಾನ್, ಕಲ್ಲೇಶಪ್ಪ ಕಾರಿಗನೂರು, ಗಿರೀಶ್ ಮರಡಿ, ಅಭಿ ಕಾಟನ್ ಬಕೇಶ್, ಕೊಳೇನಹಳ್ಳಿ ನಾಗರಾಜ್, ಕ್ಯಾರಕಟ್ಟೆ ಕೊಟ್ರೇಗೌಡರು, ಶಂಕರ್ ಸೇರಿದಂತೆ ಇತರರು ಇದ್ದರು.
