ರಾಜ್ಯಾದ್ಯಂತ ನೇರಪಾವತಿ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಚತಾ ಕಾರ್ಮಿಕರು, ವಾಹನ ಚಾಲಕರು, ನೀರು ಸರಬರಾಜು ಸಹಾಯಕರು ಹಾಗೂ ಸಹಾಯಕರನ್ನು ಕೂಡಲೇ ಖಾಯಂಗೊಳಿಸಲು ಆಗ್ರಹಿಸಿ ಡಿಸೆಂಬರ್ 1ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾರ್ಯಾಧ್ಯಕ್ಷ ಎಲ್ ಎಂ ಹನುಮಂತಪ್ಪ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರಾಜ್ಯ ಸರ್ಕಾರ ಕಳೆದ ಎರಡು ದಶಕಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ಸಮುದಾಯದ ನೌಕರರನ್ನು ನಗರಗಳನ್ನು ಸ್ವಚ್ಚತೆ ಮಾಡಲು ಗುತ್ತಿಗೆ ಪೌರಕಾರ್ಮಿಕರಾಗಿ, ಒಳಚರಂಡಿ ಸ್ವಚ್ಚತೆ ಹಾಗೂ ಒಣಕಸ ಹಾಗೂ ಹಸಿಕಸ ವಿಲೇವಾರಿ ಮಾಡಲು ವಾಹನ ಸಹಾಯಕರನ್ನು, ಚಾಲಕರನ್ನು, ನೀರು ಸರಬರಾಜು ಸಹಾಯಕರುಗಳನ್ನು ಗುತ್ತಿಗೆದಾರರೆನ್ನುವ ಮದ್ಯವರ್ತಿಗಳ ಮೂಲಕ ನೇಮಿಸಿಕೊಂಡಿರುವುದು ನಿಯಮಬಾಹಿರ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕಾರ್ಮಿಕರಿಗೆ ನಿಯಮಾನುಸಾರ ನೀಡಬೇಕಾದ ಮೂಲಭೂತ ಸೌಕರ್ಯಗಳಾದ ಕನಿಷ್ಟ ವೇತನ,
ಭವಿಷ್ಯ ನಿಧಿ, ಆರೋಗ್ಯ ವಿಮೆ, ಮಕ್ಕಳ ಶಿಕ್ಷಣ, ಉದ್ಯೋಗ ಭದ್ರತೆ ಮತ್ತು ಪೌರಕಾರ್ಮಿಕರು
ವಾಸಿಸುವ ಪ್ರದೇಶಗಳಲ್ಲಿ ಸೂಕ್ತವಾದ ವಸತಿ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಗಳನ್ನು ಮಾಡದೆ ನಿರಂತರವಾಗಿ ವಂಚಿಸುತ್ತಿದ್ದಾರೆ” ಎಂದು ಕಿಡಿಕಾರಿದರು.
“ರಾಜ್ಯ ಸರ್ಕಾರಗಳು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಇಂತಹ ವಂಚನೆ, ನಿರ್ಲಕ್ಷ್ಯ ಮತ್ತು ಜಾತಿ ತಾರತಮ್ಯಗಳ ವಿರುದ್ಧ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕರ ಮಹಾ ಸಂಘ ಕಳೆದ 20 ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಕೂಡ ನೌಕರರ ಕಾಯಮಾತಿ ಬೇಡಿಕೆ ಈಡೇರಿಲ್ಲ” ಎಂದು ತಿಳಿಸಿದರು.
“ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ 119 ಮಂದಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿರುತ್ತಾರೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು 134 ಮಂದಿ ನೇರಪಾವತಿ ಪೌರಕಾರ್ಮಿಕರನ್ನು ಏಕಕಾಲದಲ್ಲಿ ಖಾಯಂಗೊಳಿಸಲು ಸರ್ಕಾರಕ್ಕೆ ಪತ್ರ ನೀಡಿ ವಾಹನ ಚಾಲಕರು, ಯುಜಿಡಿ ಸಹಾಯಕರು, ವಾಟರ್ಮ್ಯಾನ್ಗಳನ್ನು ಖಾಯಂ ಮಾಡಬೇಕು” ಎಂದು ಒತ್ತಾಯಿಸಿದರು.
ಯುಜಿಡಿ ಸಹಾಯಕರು, ವಾಟರ್ಮ್ಯಾನ್ಗಳು, ವಾಹನ ಚಾಲಕರ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ, ನೇರಪಾವತಿ ಅಡಿ ಕೆಲಸಕ್ಕೆ ತೆಗೆದುಕೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಆದರೆ ಉಳಿದ ಅನೇಕ ಜಿಲ್ಲೆಗಳಲ್ಲಿ ಯಾವುದೇ ಪ್ರಕ್ರಿಯೆಗಳು ನಡೆದಿರುವುದಿಲ್ಲ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಎಲ್ಲ ನೇರಪಾವತಿ ಪೌರಕಾರ್ಮಿಕರನ್ನು ಏಕಕಾಲದಲ್ಲಿ ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಡಿಸೆಂಬರ್ 1ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ನೀರು ನಿರ್ವಹಣೆಗೆ ಸಮಿತಿ ರಚಿಸಿದ ಜಿಲ್ಲಾಡಳಿತ
ಸುದ್ದಿಗೋಷ್ಠಿಯಲ್ಲಿ ಬಿ ಹೆಚ್ ವೀರಭದ್ರಪ್ಪ, ಎಲ್ ಹೆಚ್ ಸಾಗರ್, ಎನ್ ನೀಲಗಿರಿಯಪ್ಪ, ಎಂ ಓಮೇಶ್, ವೀರೇಶ್, ಕಾಂತರಾಜ್, ಅಂಜಿನಪ್ಪ ಸೇರಿದಂತೆ ಇತರರು ಇದ್ದರು.