ವಿದ್ಯುತ್ ಪರಿವರ್ತಕದಿಂದ ಬೆಂಕಿ ಕಿಡಿಗಳು ಹೊತ್ತಿಕೊಳ್ಳುತ್ತಿದ್ದು, ಯಾವಾಗ ಅವಘಡ ಸಂಭವಿಸುವುದೋ ಎಂದು ಅಲ್ಲಿ ವಾಸಿಸುವ ಅಕ್ಕಪಕ್ಕದ ಮನೆಗಳ ಜನರು ಭೀತಿಯಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಇದನ್ನು ಪರಿಹರಿಸಬೇಕಾಗಿದ್ದ ವಿದ್ಯುತ್ ಇಲಾಖೆ ಕಣ್ಮುಚ್ಚಿ ಕುಳಿತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳು ಗ್ರಾಮದ ಜನವಸತಿ ಪ್ರದೇಶದಲ್ಲಿ ಬುಡಾನ್ ಸಾಬ್ ಎಂಬುವವರ ಮನೆ ಎದುರೇ ಈ ವಿದ್ಯುತ್ ಪರಿವರ್ತಕವಿದೆ. ಈ ಪರಿವರ್ತಕದಿಂದ ಆಗಾಗ ಬೆಂಕಿ ಕಿಡಿಗಳು ಚಿಮ್ಮುತ್ತಿದ್ದು, ರಸ್ತೆಯಲ್ಲಿ ಓಡಾಡುವ ಬೀದಿಯ ಜನರ ಮೇಲೆ ಯಾವಾಗ ಕಿಡಿ ಬೀಳುವುದೋ? ಯಾರಿಗೆ ವಿದ್ಯುತ್ ಶಾಕ್ ತಗಲುವುದೋ? ಎಂಬ ಆತಂಕದ ಬದುಕಿನಲ್ಲೇ ಜನರು ಓಡಾಡುತ್ತಿದ್ದಾರೆ.

ಸ್ಥಳೀಯ ನಿವಾಸಿಗಳು ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಈಗಾಗಲೇ ಕಳೆದೆರಡು ದಿನಗಳ ಹಿಂದೆ ಈ ವಿದ್ಯುತ್ ಪರಿವರ್ತಕದಿಂದ ಬೆಂಕಿ ಹೊತ್ತಿಕೊಂಡು ಕೆಟ್ಟು ಹೋಗಿದೆ. ಅದರಿಂದ ಉಗುಳಿದ ಬೆಂಕಿಯ ಕಿಡಿಗಳು ಅಲ್ಲೇ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ಬಿದ್ದು ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದಿದೆ. ಈ ಘಟನೆ ನಡೆದರೂ ಕೂಡ ಸ್ಥಳೀಯ ಬೆಸ್ಕಾಂ ಸಿಬ್ಬಂದಿಗಳಾಗಲಿ, ಪ್ರಸರಣ ಕೇಂದ್ರದ ಮುಖ್ಯಸ್ಥರು, ಎಂಜಿನಿಯರ್ಗಳಾಗಲಿ ಯಾರೂ ಕೂಡ ಗಮನಹರಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಸೌಜನ್ಯಕ್ಕೂ ಕೂಡ ಅಲ್ಲಿ ಏನಾಗಿದೆ. ಏನು ಪರಿಹಾರ ಬೇಕೆಂಬುದನ್ನೂ ಕೂಡಾ ಕೂಡ ಕೇಳಿಲ್ಲ. ಪರಿವರ್ತಕ ಸುಟ್ಟು ಹೋಗಿದ್ದು, ಹಾಳಾದ ನಂತರ ಅದರ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ” ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಮೊಸೀಮ್ ಮಾತನಾಡಿ, “ಗ್ರಾಮದ ಬುಡಾನ್ ಸಾಬ್ ಎಂಬುವರ ಮನೆ ಎದುರು ಟಿಸಿ ಇದೆ. ಟಿಸಿಯ ಎರಡೂ ಕಂಬಗಳ ನಡುವೆಯೇ ಮನೆಯ ಹೊರಗೆ, ಒಳಗೆ ಓಡಾಡಬೇಕು. ಆಗಾಗ ಟಿಸಿಯಿಂದ ಬೆಂಕಿಯ ಕಿಡಿಗಳು ಸಿಡಿಯುತ್ತವೆ. ಇದರಿಂದ ಕುಟುಂಬಸ್ಥರು ಭಯದಿಂದ ಬದುಕು ನೂಕುವಂತಾಗಿದೆ. ಪರಿವರ್ತಕದ ಮುಂದೆಯೇ ಜನರು, ಜಾನುವಾರುಗಳು ಓಡಾಡುವುದರಿಂದ ಸಾವು-ನೋವು ಸಂಭವಿಸಿದರೆ ಯಾರು ಹೊಣೆ? ವಿದ್ಯುತ್ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಗಮನ ಹರಿಸಿಲ್ಲ. ವಿದ್ಯುತ್ ಪರಿವರ್ತಕವನ್ನು ಬೇರೆಡೆ ಸ್ಥಳಾಂತರಿಸಲು ಅದರ ಸ್ಥಳಾಂತರ ವೆಚ್ಚವನ್ನು ಬುಡಾನ್ ಸಾಬ್ ಅವರೇ ಭರಿಸಲು ಹೇಳಿದ್ದಾರೆ” ಎಂದು ಆರೋಪಿಸಿದರು.

“ಈ ಗ್ರಾಮ ಚನ್ನಗಿರಿ ತಾಲೂಕು ವ್ಯಾಪ್ತಿಗೆ ಒಳಪಟ್ಟರೂ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಇರುವುದರಿಂದ ಈ ಬಗ್ಗೆ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳು ಹಾಗೂ ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಳಿಕ ಶಾಸಕರು, ಸಂಬಂಧಪಟ್ಟ ವಿದ್ಯುತ್ ಸಹಾಯಕ ಎಂಜಿನಿಯರ್ಗೆ ಕರೆಮಾಡಿ ಸ್ಥಳಾಂತರ ಮಾಡಲು ತಿಳಿಸಿದ್ದಾರೆನ್ನುವ ಮಾಹಿತಿ ಇದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ ₹500 ಕೋಟಿ ಅನುದಾನ ನೀಡುವಂತೆ ಒತ್ತಾಯ
ಸಂತೆಬೆನ್ನೂರು ವಿದ್ಯುತ್ ಪ್ರಸರಣ ಕೇಂದ್ರದ ಸಹಾಯಕ ಅಭಿಯಂತರ ನಾಗರಾಜ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಮಾತನಾಡಿ, “ಇದು ಬಹಳ ದಿನಗಳಿಂದ ನಮ್ಮ ಗಮನದಲ್ಲಿದ್ದು, ಅಲ್ಲಿ ಪರಿವರ್ತಕ ಸ್ಥಳಾಂತರಿಸಲು ಜಾಗದ ಸಮಸ್ಯೆಯಿದೆ. ಗ್ರಾಮದ ಹೊರಕ್ಕೆ ತೆಗೆದುಕೊಂಡು ಹೋಗಿ ಹಾಕಿದರೆ ವಿದ್ಯುತ್ ಗುಣಮಟ್ಟ, ವೋಲ್ಟೇಜ್ ಕಡಿಮೆಯಾಗಿ ಜನರಿಗೆ ಸಮಸ್ಯೆಯಾಗುತ್ತದೆ. ಅಲ್ಲಿಯೇ ಕೆಲವು ಸ್ಥಳಗಳಲ್ಲಿ ಗುರುತು ಮಾಡಿದ್ದು, ಅಲ್ಲಿ ಸ್ಥಳೀಯರು ಅಡ್ಡಿಪಡಿಸುತ್ತಿದ್ದಾರೆ. ಇನ್ನೊಂದೆಡೆ ಖಾಲಿ ಜಾಗವಿದ್ದರೂ ಹತ್ತಿರದಲ್ಲಿ ಶಾಲೆಯಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅಲ್ಲಿ ಟಿಸಿ ಅಳವಡಿಸಲಾಗುತ್ತಿಲ್ಲ. ಇದನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಮತ್ತು ಶಾಸಕರಿಗೂ ತಿಳಿಸಿದ್ದು, ಗ್ರಾಮಸ್ಥರು ಸೂಕ್ತ ಸ್ಥಳ ನೀಡಿದರೆ ಶೀಘ್ರವೇ ಪರಿವರ್ತಕ ಸ್ಥಳಾಂತರಿಸಿಕೊಡುತ್ತೇವೆ” ಎಂದು ಮಾಹಿತಿ ನೀಡಿದರು.
“ಒಟ್ಟಿನಲ್ಲಿ ಯಾರಿಗೂ ತೊಂದರೆಯಾಗದಂತೆ ವಿದ್ಯುತ್ ಇಲಾಖೆಯು ಸೂಕ್ತವಾದ ಸ್ಥಳಕ್ಕೆ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸುವ ಕೆಲಸ ನಿರ್ವಹಿಸಲಿ” ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು