ಹರಿಹರ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಗರಸಭೆ ಸದಸ್ಯರೆಲ್ಲ ಒಟ್ಟಾಗಿ ಸಿಎಂ ಸಿದ್ದರಾಮಯ್ಯನವರ ಬಳಿಗೆ ನಿಯೋಗ ಹೋಗಿ ಅನುದಾನ ಕೋರಿಕೆ ಇಡೋಣ ಎಂದು ಶಾಸಕ ಬಿ ಪಿ ಹರೀಶ್ ಸಲಹೆ ನೀಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆ ಸಭಾಂಗಣದಲ್ಲಿ ನೂತನ ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, “ಸಾರ್ವಜನಿಕರು ನಗರಸಭೆಯ ಆಡಳಿತ ವ್ಯವಸ್ಥೆ ನೋಡಿ ಬೇಸರಗೊಂಡಿದ್ದಾರೆ. ನಗರಸಭೆ ವ್ಯವಸ್ಥೆ ಹದಗೆಟ್ಟಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವಾದರಿಂದ, ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಅಧೋಗತಿಯತ್ತ ಸಾಗಿದೆ” ಎಂದು ಹೇಳಿದರು.
“ಹಲವಾರು ಗ್ರಾಮೀಣ ಭಾಗದ ಕೆರೆಗಳಿಗೆ ಹರಿಹರದಿಂದಲೇ ನೀರು ಸರಬರಾಜಾಗುತ್ತದೆ. ಆದರೆ, ಹರಿಹರದ ಜನತೆಗೆ ಬೇಸಿಗೆ ಕಾಲದಲ್ಲಿ ಕುಡಿಯಲು ನೀರಿಲ್ಲದೇ ಪರದಾಡುವಂತಾಗಿದೆ. ಇದಕ್ಕೆ ಯಾವುದೇ ಯೋಜನೆ, ನೀರು ಶೇಖರಣಾ ಸಂಗ್ರಹಾಗಾರ ಇಲ್ಲ. ಮೊದಲು ಇಲ್ಲಿನ ಜನರಿಗೆ ನೀರು ಕೊಟ್ಟು ನಂತರ ಜಗಳೂರು ಸೇರಿದಂತೆ ಇತರೆ ಕೆರೆಗಳಿಗೆ ಸರಬರಾಜಾಗುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿಕೊಂಡು ಹೋರಾಟ ಮಾಡಬೇಕಿದೆ. ಕೆರೆಗಳಿಗೆ ನೀರು ಸರಬರಾಜಾಗುವ ಜಾಕ್ವೆಲ್ ಹತ್ತಿರ ಪ್ರತ್ಯೇಕವಾದ ಪೈಪ್ಲೈನ್ ವ್ಯವಸ್ಥೆ ಮಾಡಿಕೊಂಡು ಆ ಮೂಲಕ ನಗರದ ಜನತೆಗೆ ನೀರು ಸರಬರಾಜು ಮಾಡಬೇಕಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೆ ಆರ್ ಪೇಟೆ ಪುರಸಭೆ ಉಪಾಧ್ಯಕ್ಷರಾಗಿ ಸೌಭಾಗ್ಯ ಉಮೇಶ್ ಆಯ್ಕೆ
“ನಗರದಲ್ಲಿ ಹರಿಹರ-ದಾವಣಗೆರೆ ವಾಟರ್ ಹೌಸ್ ಬಳಿ ಇರುವ ಜಾಗದಲ್ಲಿ ನೀರು ಶೇಖರಣಾ ಘಟಕದ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ನೀಲ ನಕ್ಷೆಯನ್ನು ತಯಾರಿಸಿದ್ದು, ಶೇಖರಣಾ ಘಟಕಕ್ಕೆ ಅದು ಸಮಂಜಸವಾದ ಸ್ಥಳವಲ್ಲವೆಂದು ತಜ್ಞರು ನನಗೆ ವರದಿ ನೀಡಿದ್ದಾರೆ. ನಗರಸಭೆಯ ಸರ್ವ ಸದಸ್ಯರನ್ನು ಒಗ್ಗೂಡಿಸಿಕೊಂಡು ಸಿಎಂ ಬಳಿ ನಿಯೋಗ ಹೋಗಿ, ಕುಡಿಯುವ ನೀರಿನ ಶೇಖರಣಾ ಘಟಕ ಸ್ಥಾಪನೆ ಸೇರಿದಂತೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲ ಬಗೆಯ ಸಹಕಾರವನ್ನು ನೀಡುವಂತೆ ಕೋರಿಕೆ ಇಡೋಣ” ಎಂದು ತಿಳಿಸಿದರು.
ಇದೇ ವೇಳೆ ಹರಿಹರ ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಸನ್ಮಾನಿಸಿದರು. ನಗರಸಭೆ ಅಧ್ಯಕ್ಷರಾಗಿ ಜೆಡಿಎಸ್ ಕವಿತಾ ಮಾರುತಿ ಬೇಡರ್ ಮತ್ತು ಉಪಾಧ್ಯಕ್ಷರಾಗಿ ಜಂಬಣ್ಣಗುತ್ತೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.