ಮುಂದಿನ ಪ್ರಧಾನಿಯಾಗಿ ನರೇಂದ್ರಮೋದಿಯವರನ್ನು ನೇಮಕ ಮಾಡಲು ಟಿಡಿಪಿ ಮತ್ತು ಜೆಡಿಯು ಪಕ್ಷದ ಅಧ್ಯಕ್ಷರು ಬೆಂಬಲ ನೀಡದಂತೆ ಉಮತ್ ಚಿಂತಕರ ವೇದಿಕೆಯಿಂದ ಪತ್ರ ಬರೆದು ಮನವಿ ಮಾಡಿದ್ದೇವೆ ಎಂದು ವೇದಿಕೆಯ ಅಧ್ಯಕ್ಷ ಅನೀಸ್ ಪಾಷ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಟಿಡಿಪಿ ಮತ್ತು ಜೆಡಿಯು ಪಕ್ಷಗಳು ನಿರಂತರವಾಗಿ ಕೋಮುವಾದವನ್ನು ಧಿಕ್ಕರಿಸಿ ಜಾತ್ಯತೀತ, ಸಾಮಾಜಿಕ ನ್ಯಾಯ, ಭಾರತದ ಏಕತೆ ಮತ್ತು ಅಖಂಡತೆಗಾಗಿ ಅದರಲ್ಲೂ ಪ್ರಮುಖವಾಗಿ ಧ್ವನಿ ಇಲ್ಲದ ದಲಿತ ಮತ್ತು ಅಲ್ಪಸಂಖ್ಯಾತರ ಪರವಾಗಿ ನಿಂತಿರುವ ಪಕ್ಷಗಳಾಗಿವೆ” ಎಂದರು.
ಇತಿಹಾಸವನ್ನು ಗಮನಿಸಿದರೆ, ಬಿಜೆಪಿ ಪಕ್ಷವು ಪ್ರತಿ ಹಂತದಲ್ಲೂ ಕೋಮು ಧೃವೀಕರಣ ಮಾಡುತ್ತಾ ಧ್ವೇಷ ಭಾಷಣಗಳಿಂದ ಮುನ್ನೆಲೆಗೆ ಬಂದಿರುತ್ತದೆ. ದೇಶದ ಒಂದು ಭಾಗವಾಗಿರುವ ಮುಸ್ಲಿಂ ಸಮುದಾಯವನ್ನು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ದೇಶಪ್ರೇಮಿಗಳನ್ನು ನುಸುಳುಕೋರರು ಎಂದು ನೇರವಾಗಿ ತುಚ್ಛ ಮನೋಭಾವದಿಂದ ಅಪವಾದ ಮಾಡಿದ್ದು ತಪ್ಪೆಂದು ಅರಿವಿದ್ದರೂ ಕೂಡ ಮುಸ್ಲಿಂ ಸಮಾಜದ ಕ್ಷಮೆಯನ್ನೂ ಕೇಳದ ಮುಸಲ್ಮಾನರ ವಿರುದ್ಧ ದ್ವೇಷವನ್ನು ಹೊಂದಿದ ವ್ಯಕ್ತಿ ಮುಂದಿನ ದಿನಗಳಲ್ಲಿ ಪ್ರಧಾನಿಯಾದರೆ, ಯಾವ ರೀತಿ ನಡೆಸಿಕೊಳ್ಳಬಹುದು” ಎಂದು ಆತಂಕ ವ್ಯಕ್ತಪಡಿಸಿದರು.
“ಸಮಾಜವಾದಿ ಚಿಂತನೆಯನ್ನು ಹೊಂದಿರುವ ಎಲ್ಲರನ್ನೂ ಸಮಾನವಾಗಿ ಕಾಣುವ ಎರಡು ಪಕ್ಷದ ಅಧ್ಯಕ್ಷರಾದ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ರವರು ಯಾವುದೇ ಕಾರಣಕ್ಕೂ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆರಿಸಲು ಬೆಂಬಲ ನೀಡಬಾರದು” ಎಂದು ಕಳಕಳಿಯ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಡಿ ಕೆ ಸುರೇಶ್ ಸೋಲಿಗೆ ಸಿದ್ದರಾಮಯ್ಯ ಅಂಡ್ ಟೀಮ್ ಕಾರಣ: ಬಿಜೆಪಿ ಶಾಸಕ
ಸುದ್ದಿಗೋಷ್ಟಿಯಲ್ಲಿ ನಸೀಮಾ ಖಾನ್ ಬಾನು, ಅಲ್ಲಾಭಕ್ಷ, ಆದಿಲ್ ಖಾನ್ ಹಾಗೂ ಇತರ ಪದಾಧಿಕಾರಿಗಳು ಇದ್ದರು.
