ದಾವಣಗೆರೆ ಪಾಲಿಕೆ ಆವರಣದಲ್ಲಿರುವ ಚನ್ನಗಿರಿ ರಾಧಮ್ಮ ರಂಗಪ್ಪ ಸ್ಮಾರಕ ವೇದಿಕೆಯಲ್ಲಿ ಡಿಸೆಂಬರ್ 28ರಂದು ಮಧ್ಯಾಹ್ನ 1ಕ್ಕೆ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೂತನ ಬಣದ ಉದ್ಘಾಟನೆ ಜರುಗಲಿದೆ ಎಂದು ಎಚ್ ಕೆ ರಾಮಚಂದ್ರಪ್ಪ ಬಣದ ಮಹಿಳಾ ಮುಖಂಡೆ ವಿಶಾಲಾಕ್ಷಿ ಮೃತ್ಯುಂಜಯ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು “ಸುಮಾರು 40 ವರ್ಷಗಳಿಂದ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘವನ್ನು ಸ್ಥಾಪನೆ ಮಾಡಿ ಎಚ್ ಕೆ ರಾಮಚಂದ್ರಪ್ಪನವರ ನೇತೃತ್ವದಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ₹100 ಸಂಬಳದಿಂದಲೂ ಕೆಲಸ ಮಾಡಿಕೊಂಡು ಬಂದಿದ್ದೇವೆ” ಎಂದು ತಿಳಿಸಿದರು.
“1982ರಿಂದ ಅಂದರೆ ನಾಲ್ಕು ದಶಕಗಳಿಂದಲೂ ಹಳ್ಳಿ ಹಳ್ಳಿಗಳಿಗೆ ಸುತ್ತಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಂಘಟಿಸಿ ಹಳ್ಳಿ, ತಾಲೂಕು, ಜಿಲ್ಲೆಯವರೆಗೂ ಪ್ರತಿಭಟನೆಗಳನ್ನು ಮಾಡಿಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದೇವೆ. ಬೆಂಗಳೂರು ಚಲೋ ಮಾಡಿ ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ, ದೆಹಲಿ ಚಲೋನಂತಹ ಪ್ರತಿಭಟನೆಗಳನ್ನು ಹಲವಾರು ಬಾರಿ ಮಾಡಿ ಕೇಂದ್ರ ಸರ್ಕಾರದ ಗಮನ ಸೆಳೆದು ಹಲವಾರು ಬೇಡಿಕೆಗಳನ್ನು ಈಡೇರಿಸುವುದಕ್ಕೆ ಕಾರಣೀಭೂತರಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ” ಎಂದರು.
“ಎಚ್ ಕೆ ರಾಮಚಂದ್ರಪ್ಪನವರ ನಿಧನ ನಂತರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಭರವಸೆಯ ನಾಯಕರು ಸಿಗಲಿಲ್ಲ. ಇದರ ಮಧ್ಯೆ ನಮ್ಮ ಸಂಘಟನೆ ಜಿಲ್ಲಾಧ್ಯಕ್ಷರನ್ನು, ಟ್ರಸ್ಟ್ ರಾಜ್ಯ ಸಂಚಾಲಕರು, ಟ್ರಸ್ ಅಧ್ಯಕ್ಷರನ್ನು ಪಕ್ಷದ ನಿಯಯದ ಪ್ರಕಾರ ಪ್ರಶ್ನೆ ಮಾಡಿದಕ್ಕೆ ಕಮ್ಯೂನಿಸ್ಟ್ ಪಕ್ಷದಿಂದ ವಜಾ ಮಾಡಲಾಗಿದೆ. ನಮ್ಮ ಅಂಗನವಾಡಿ ಸಂಘಟನೆಯಲ್ಲಿ ಹಸ್ತಕ್ಷೇಪ ಮಾಡಿ ಕಾರ್ಯಕರ್ತೆಯರ ಮಧ್ಯೆ ವೈಮನಸ್ಸು ಹುಟ್ಟಲು ಕಾರಣರಾಗಿದ್ದಾರೆ. ಇದರಿಂದಾಗಿ ಬೇಸತ್ತು ಹಿರಿಯರಾದ ಎಚ್ ಕೆ ಆರ್ ಆದರ್ಶವನ್ನು ಇಟ್ಟುಕೊಂಡು ಹೊಸ ಬಣ ಕಟ್ಟಿದ್ದು, ಅವರ ಆದರ್ಶವನ್ನು ಮುಂದುವರೆಸಿಕೊಂಡು ಹೋಗುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಇಡಗೂರು ವಿಎಸ್ಎಸ್ಎನ್ ಅಧ್ಯಕ್ಷರಾಗಿ ಛೇರ್ಮನ್ ರವಿ ಅವಿರೋಧ ಆಯ್ಕೆ
“ಎಚ್ಕೆಆರ್ ಅವರ ಹೆಸರು ಚಿರಾಯವಾಗಿ ಇರುವುದಕ್ಕಾಗಿ ಅವರ ಹೆಸರಿನ ಬಣವನ್ನೇ ಹುಟ್ಟುಹಾಕಿದ್ದು, ಅವರು ಹಾಕಿಕೊಟ್ಟ ಧ್ಯೇಯ, ಉದ್ದೇಶ, ಆದರ್ಶಗಳನ್ನು ಮುಂದುವರೆಸುತ್ತೇವೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಎಂ ಸರ್ವಮ್ಮ, ಜೆ ಎಂ ಉಮಾ, ಜಿ ರೇಣುಕಾ, ಕೆ ಸುಧಾ, ಚೌಡಮ್ಮ, ರೇಣುಕಾ, ಕಾಳಮ್ಮ ಇದ್ದರು.