ವಿದ್ಯುತ್ ಇಲಾಖೆ ಅಕ್ರಮ-ಸಕ್ರಮ ರದ್ದುಗೊಳಿಸಿ ರೈತರ ಬೆನ್ನಿಗೆ ಬರೆ ಹಾಕಿ ಗುಣಮಟ್ಟದ ವಿದ್ಯುತ್ ನೀಡದೆ ನಿತ್ಯ ಸಾಯುವಂತೆ ಮಾಡಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ಯಿಂದ ಪ್ರತಿಭಟನೆ ನಡೆಸಿದರು.
ದಾವಣಗೆರೆ ಜಿಲ್ಲೆಯ ಜಗಳೂರು ತಹಶೀಲ್ದಾರ್ ಕಚೇರಿ ಎದುರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಳಿಕ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, “ಬಿತ್ತನೆ ಮಾಡಿದ ಮುಖ್ಯ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ರಾಗಿ ಸೂರ್ಯಕಾಂತಿ, ಸಜ್ಜೆ, ಜೋಳ, ಈರುಳ್ಳಿ, ನವಣೆ, ತರಕಾರಿ ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“ಹೊಸದಾಗಿ ಬೋರ್ವೆಲ್ ಕೊರೆಸಿದರೆ ಅಕ್ರಮ-ಸಕ್ರಮ ಯೋಜನೆ ಅಡಿ ಈವರೆಗೂ ರೈತರಿಗೆ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ರೈತರಿಂದ ವಂತಿಕೆ ಹಣ ಕಟ್ಟಿಸಿಕೊಂಡು ಎರಡು ವರ್ಷಗಳಾದರೂ ಅಕ್ರಮ-ಸಕ್ರಮ ಯೋಜನೆ ಅಡಿ ವಿದ್ಯುತ್ ಸಂಪರ್ಕ ಕೊಡದೆ ರೈತರಿಗೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಚಿಕ್ಕಮಲ್ಲನ ಹೊಳೆ ಚಿರಂಜೀವಿ ಮಾತನಾಡಿ, “ಬೆಸ್ಕಾಂ ಇಲಾಖೆ ಸ್ಥಗಿತಗೊಳಿಸಿರುವ ಅಕ್ರಮ-ಸಕ್ರಮ ಯೋಜನೆ ಮುಂದುವರೆಸಬೇಕು. ಎಲ್ಟಿ ಲೈನ್ ಮತ್ತು ಪವರ್ ಲೈನ್ 500 ಮೀಟರ್ ಒಳಗೆ ಇದ್ದರೆ ಟಿ ಸಿ ಬದಲಿಗೆ ಸೋಲಾರ್ ಅಳವಡಿಕೆ ನಿಯಮವನ್ನು ಕೈ ಬಿಡಬೇಕು. ಟಿ ಸಿ ಸುಟ್ಟು 24 ಗಂಟೆಗಳ ಒಳಗೆ ಪರ್ಯಾಯ ಟಿ ಸಿಯನ್ನು ನೀಡಬೇಕು. ಪೆಂಡಿಂಗ್ ಇರುವ ಟಿ ಸಿಗಳನ್ನು ತಕ್ಷಣವೇ ನೀಡಬೇಕು. ರೈತರ ಮೇಲೆ ದಬ್ಬಾಳಿಕೆ ಮಾಡುವ ಲೈನ್ಮ್ಯಾನ್ಗಳಿಗೆ ಎಚ್ಚರಿಕೆ ಕೊಡಬೇಕು. ರಾತ್ರಿ ಸಮಯದಲ್ಲಿ ನೀಡುವ ವಿದ್ಯುತ್ ಸರಬರಾಜನ್ನು ಹಗಲು ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಐಡಿಎಸ್ಒ 70ನೇ ಸಂಸ್ಥಾಪನಾ ದಿನಾಚರಣೆ
“ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ಕಾನನಕಟ್ಟೆ ತಿಪ್ಪೇಸ್ವಾಮಿ, ದಿಬ್ಬದಹಳ್ಳಿ ಗಂಗಾಧರಪ್ಪ, ಗೌಡಗೊಂಡನಹಳ್ಳಿ ಸತೀಶ್, ಕಸವನಹಳ್ಳಿ ನಾಗರಾಜ್, ರಾಜನಹಟ್ಟಿ ರಾಜು ಸೇರಿದಂತೆ ನೂರಾರು ರೈತರು ಇದ್ದರು.