ಮಳೆಯ ಕೊರತೆಯಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಮತ್ತು ನಾಲೆ ಮೂಲಕ ಅಚ್ಚುಕಟ್ಟುದಾರರ ಬೆಳೆಗಳಿಗೆ ನೀರು ಕೊಡಬೇಕಾಗಿರುವುದರಿಂದ ಭದ್ರಾ ನಾಲೆಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್ಸೆಟ್ಳನ್ನು ತೆರವುಗೊಳಿಸ ಬೇಕೆಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂ ಎ ಸೂಚನೆ ನೀಡಿದರು.
ದಾವಣಗೆರೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ನೀರಿನ ಅಭಾವ ಉಂಟಾಗಲಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ಆನ್ ಅಂಡ್ ಆಫ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈಗಾಗಲೇ ಅಕ್ಟೋಬರ್ 26 ರಿಂದ ಭದ್ರಾ ಎಡದಂಡೆಗೆ 380 ಕ್ಯೂಸೆಕ್ ಹಾಗೂ ಭದ್ರಾ ಬಲದಂಡೆಗೆ 3,100 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಬೆಸ್ಕಾಂ ಅಧಿಕಾರಿಗಳು ಭದ್ರಾ ನಾಲೆಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್ಸೆಟ್ಗಳನ್ನು ತೆರವುಗೊಳಿಸಬೇಕು ಮತ್ತು ಅಂತಹ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು” ಎಂದರು.
“ಭದ್ರಾ ಬಲದಂಡೆಯ ಭಾಗದಲ್ಲಿ ರೈತರ ಜಮೀನುಗಳಲ್ಲಿ ಭತ್ತದಲ್ಲಿ ಕಾಳು ಮೂಡುತ್ತಿದ್ದು, ಈ ಸಂದರ್ಭದಲ್ಲಿ ಭತ್ತಕ್ಕೆ ನೀರಿನ ಅವಶ್ಯಕತೆ ಮುಖ್ಯವಾಗಿರುತ್ತದೆ. ಹಾಗಾಗಿ ನೀರಾವರಿ ನಿಗಮದ ಎಂಜಿನಿಯರ್ಗಳು ಸಕಾಲದಲ್ಲಿ ರೈತರಿಗೆ ನೀರನ್ನು ಒದಗಿಸಿ ಉತ್ತಮ ಫಸಲಿಗೆ ಸಹಕರಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ₹1.9 ಕೋಟಿ ವೆಚ್ಚದಲ್ಲಿ 109 ʼಕೂಸಿನ ಮನೆʼಗಳ ಸ್ಥಾಪನೆ: ಸಚಿವ ಎನ್ ಚೆಲುವರಾಯಸ್ವಾಮಿ
“ದಾವಣಗೆರೆ ವಿಭಾಗದ ನಾಲೆಗಳಿಗೆ 7 ದಿನ ಹಾಗೂ ಮಲೆಬೆನ್ನೂರು ವಿಭಾಗದ ನಾಲೆಗಳಿಗೆ 6 ಮತ್ತು 3 ದಿನದಂತೆ ಆನ್ ಅಂಡ್ ಆಫ್ ಸಿಸ್ಟಮ್ ಅಳವಡಿಸಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶಗಳಲ್ಲಿನ 9ಬಿ ಹಾಗೂ 9ಸಿ ನಾಲೆಗಳಿಗೂ ಸಹ ನೀರು ಶೀಘ್ರವೇ ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು” ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ ಎನ್ ಲೋಕೇಶ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ದಾವಣಗೆರೆ ತಹಶೀಲ್ದಾರ್ ಡಾ ಅಶ್ವತ್, ಹರಿಹರ ತಾಲೂಕು ತಹಶೀಲ್ದಾರ್ ಪೃಥ್ವಿ ಸಾನಿಕಂ, ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್ ಎಂ ಬಿ ಹಾಗೂ ರೈತ ಮುಖಂಡರು ಇದ್ದರು.