ಕೇಂದ್ರ ಸರ್ಕಾರವು ಪಿಎಂಶ್ರೀ(ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ) ಶಾಲೆಗಳು ಎಂಬ ಹೊಸ ಪುರಸ್ಕೃತ ಯೋಜನೆಯನ್ನು ಜಾರಿಗೆ ತಂದಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ 7 ಶಾಲೆಗಳ ಅಭಿವೃದ್ಧಿಗಾಗಿ ತಲಾ ₹53 ಲಕ್ಷದಂತೆ ಒಟ್ಟು ₹3.71 ಕೋಟಿ ಅನುದಾನ ಬಿಡುಗಡೆಯಾಗಲಿದೆ ಎಂದು ದಾವಣಗೆರೆ ಸಂಸದ ಜಿ.ಎಮ್ ಸಿದ್ದೇಶ್ವರ ಮಾಹಿತಿ ನೀಡಿದರು.
“2022-23ನೇ ಸಾಲಿನಿಂದ 2026-2027ನೇ ಸಾಲಿನವರೆಗೆ ಸುಮಾರು 14,500 ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಿ ಬಲಪಡಿಸುವ ಉದ್ದೇಶ ಹೊಂದಿದ್ದು, ಈ ಯೋಜನೆಗಾಗಿ ಸರ್ಕಾರ ₹27,360 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ” ಎಂದು ಹೇಳಿದರು.
“ಕಳೆದ ಡಿಸೆಂಬರ್ನಲ್ಲಿ ಮೊದಲನೇ ಹಂತದಲ್ಲಿ ಶಾಲೆಗಳನ್ನು ಆಯ್ಕೆ ಮಾಡುವ ಸಲುವಾಗಿ ಚಾಲೆಂಚ್ ಮೆಥೆಡ್ ಮೂಲಕ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಆಯಾ ಶಾಲೆಗಳು ತಮ್ಮಲ್ಲಿರುವ ಮೂಲ ಸೌಕರ್ಯದ ವಿವರ, ಶೈಕ್ಷಣಿಕ ಸಾಮರ್ಥ್ಯ, ಶಿಕ್ಷಣದ ಗುಣಮಟ್ಟದ ವಿವರಗಳನ್ನು ಅಂತರ್ಜಾಲದಲ್ಲಿ ಮಾಹಿತಿ ನೀಡಿದ್ದು, ಇದರ ಅನುಸಾರ ಮೊದಲನೇ ಹಂತದಲ್ಲಿ ರಾಜ್ಯದ 129 ಶಾಲೆಗಳು ಪಿಎಂಶ್ರೀ ಯೋಜನೆಯಡಿ ಆಯ್ಕೆಯಾಗಿವೆ” ಎಂದರು.
“ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚನ್ನಗಿರಿ ತಾಲೂಕಿನ ಚಿರಡೋಣಿ ಶಾಲೆ, ಹರಿಹರ ತಾಲೂಕಿನ ದೊಗ್ಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಾವಣಗೆರೆ ತಾಲೂಕಿನ ಹಳೆಬಾತಿ ಗುಡ್ಡದ ಕ್ಯಾಂಪ್ ಶಾಲೆ, ನ್ಯಾಮತಿ ತಾಲೂಕಿನ ಸುರಹೊನ್ನೆ ಶಾಲೆ, ಜಗಳೂರು ತಾಲೂಕಿನ ತಮಲೇಹಳ್ಳಿ ಹಾಗೂ ರಾಮಘಟ್ಟ ಶಾಲೆಗಳು ಈ ಯೋಜನೆಯಡಿ ಆಯ್ಕೆಯಾಗಿವೆ. ಆಯ್ಕೆಯಾಗಿರುವ ಪ್ರತಿಯೊಂದು ಶಾಲೆಗಳಲ್ಲಿ ಮೂಲ ಸೌಕರ್ಯ, ಬಾಲಕರ ಹಾಗೂ ಬಾಲಕಿಯರ ಶೌಚಾಲಯ, ಬೋಧನಾ ಸಿಬ್ಬಂದಿ ಮತ್ತು ಸಾಮರ್ಥ್ಯ ಅಭಿವೃದ್ಧಿ, ಪ್ರಧಾನ ಮಂತ್ರಿ ಪೋಷಣೆ ಅಭಿಯಾನ, ಕಲಿಕಾ ಫಲಕಗಳು, ಹಸಿರು ಉಪಕ್ರಮಗಳು ಸೇರಿದಂತೆ ಇತರೆ ಶಾಲಾ ಚಟುವಟಿಕೆಗಳಿಗೆ ಈ ಅನುದಾನ ಬಳಸಲಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಮದ್ಯ ಮಾರಾಟಕ್ಕೆ ಎಂಎಸ್ಐಎಲ್ಗೆ ಅನುಮತಿ; ಮಹಿಳೆಯರ ಖಂಡನೆ
ಪಿಎಂಶ್ರೀ ಶಾಲೆಗಳು ತಮ್ಮ ಪ್ರದೇಶಗಳ ಇತರೆ ಶಾಲೆಗಳಿಗೆ ಮಾರ್ಗದರ್ಶನ ನೀಡುವ ಮೂಲಕ ನಾಯಕತ್ವವನ್ನು ಒದಗಿಸಬೇಕೆನ್ನುವ ಮೂಲ ಆಶಯವನ್ನು ಈ ಯೋಜನೆ ಹೊಂದಿದೆ. ಎರಡನೇ ಹಂತದಲ್ಲಿ ಶಾಲೆಗಳನ್ನು ಆಯ್ಕೆ ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಆಯಾ ಶಾಲೆಗಳವರು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಉಪನಿರ್ದೇಶಕರುಗಳ ಮೂಲಕ ಹೆಚ್ಚಿನ ಮಾಹಿತಿ ಪಡೆದು ಚಾಲೆಂಜ್ ಮೆಥಡ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ” ಎಂದು ಪ್ರಕಟಣೆಗೆ ತಿಳಿಸಿದ್ದಾರೆ.