ದೇಶದ ರಕ್ಷಣೆ, ಸಾರ್ವಭೌಮತ್ವದ ಸಂವಿಧಾನದ ರಕ್ಷಣೆ ಮಾಡುವ ಅಭ್ಯರ್ಥಿಗೆ ನಾವು ಮತ ನೀಡಲಿದ್ದೇವೆ ಎಂದು ಸ್ಲಂ ಜನಾಂದೋಲನ ಹಾಗೂ ಸಾವಿತ್ರಿಬಾಯಿ ಫುಲೆ ಸಂಘಟನೆ ದಾವಣಗೆರೆ ಜಿಲ್ಲಾ ಗೌರವಾಧ್ಯಕ್ಷ ಎಸ್ ಎಲ್ ಆನಂದಪ್ಪ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ “ಲೋಕಸಭಾ ಚುನಾವಣೆ-2024 ಸ್ಲಂ ಜನರ ಪ್ರಣಾಳಿಕೆ” ಬಿಡುಗಡೆ ಮಾಡಿ ಮಾತನಾಡಿ, “ಕೊಳಗೇರಿಯಲ್ಲಿ ನಿವಾಸಿಗಳು ಯಾರಿಗೆ ಮತ ನೀಡಬೇಕೆಂದು ಚರ್ಚಿಸಲಾಗಿದೆ. ಪ್ರಸ್ತುತ ಪವಿತ್ರ ಸಂವಿಧಾನಕ್ಕೆ ಧಕ್ಕೆಯಾಗುತ್ತಿದೆ. ದೇಶದಲ್ಲಿ ಏಕತೆ ದೂರವಾಗುತ್ತಿದೆ. ಆದ್ದರಿಂದ ಭಾರತ ಸಂವಿಧಾನ ಮತ್ತು ದೇಶ ರಕ್ಷಣೆಗಾಗಿ ಸ್ಲಂ ಜನರ ಮತ ಎಂಬ ಜಾಗೃತಿ ಸಮಾವೇಶವನ್ನು ಏಪ್ರಿಲ್ 27ರಂದು ಹಮ್ಮಿಕೊಳ್ಳಲಾಗಿದೆ” ಎಂದರು.
“ಸಂಸತ್ ಸದಸ್ಯರ ನಿಧಿಯಲ್ಲಿ ಸ್ಲಂಗಳ ಅಭಿವೃದ್ಧಿಗೆ ಹಣ ಮೀಸಲಿಡಲಿಬೇಕು. ನಿವೇಶನ ರಹಿತರು ಹಾಗೂ ವಸತಿ ರಹಿತರಿಗೆ ನೀವೇಶನ/ವಸತಿ ದೊರೆಯಲು ರಾಷ್ಟ್ರೀಯ ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಗೊಳಿಸಬೇಕು. ವಸತಿ ಹಕ್ಕು ಕಾಯಿದೆ ಜಾರಿ ಮಾಡಬೇಕು. ದೇಶದ ಎಲ್ಲ ಪ್ರಜೆಗಳಿಗೆ ಉಚಿತ ಮತ್ತು ಕಡ್ಡಾಯ ಚಿಕಿತ್ಸೆ ನೀಡುವ ಹೆಲ್ತ್ ಗ್ಯಾರೆಂಟಿಯನ್ನು ಜಾರಿಗೊಳೊಸಬೇಕು. ರೈಟ್ ಟು ಎಜುಕೇಶನ್ ಅರ್ಥಪೂರ್ಣಗೊಳಿಸಲು ಸಮಾನ ಶಿಕ್ಷಣ ಜಾರಿಗೊಳಿಸಿ ʼರಾಷ್ಟ್ರೀಯ0 ಶಿಕ್ಷಣ ನೀತಿʼ ಕಾಯಿದೆ ರದ್ದುಗೊಳಿಸಬೇಕು. ದೇಶದ ಎಲ್ಲ ನಾಗರಿಕರಿಗೆ ಉದ್ಯೋಗ ಭದ್ರತೆ ನೀಡಲು ‘ರಾಷ್ಟ್ರೀಯ ನಗರ ಉದ್ಯೋಗ ಖಾತ್ರಿʼ ಯೋಜನೆ ಜಾರಿಗೊಳಿಸಬೇಕು ಮತ್ತು ಪ್ರತಿ ಕುಟುಂಬಕ್ಕೊಂದು ಸರ್ಕಾರಿ ಕೆಲಸ ನೀಡಬೇಕು. 1931ರ ನಂತರದಲ್ಲಿ ದೇಶದಲ್ಲಿ ಜನಗಣತಿ ನಡೆದಿರುವುದಿಲ್ಲ. ಆದ್ದರಿಂದ ಜಾತಿವಾರು ಜನಗಣತಿಯನ್ನು ನಡೆಸಬೇಕು” ಎಂಬ ಬೇಡಿಕೆಗಳು ಸೇರಿದಂತೆ ಹಲವು ಸ್ಲಂ ನಿವಾಸಿಗಳ ಸಾರ್ವತ್ರಿಕ ಬೇಡಿಕೆಗಳನ್ನು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಏಮ್ಸ್ ಮಂಜೂರು ಮಾಡದಿದ್ದರೆ ಚುನಾವಣೆ ಬಹಿಷ್ಕಾರ; ಎಚ್ಚರಿಕೆ
ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಎಂ ಶಬ್ಬಿರ್ ಯೂಸುಫ್ ಸಾಬ್, ಬಾಲಪ್ಪ, ಮಂಜುಳಾ, ಜಂಶಿದ್ ಬಾನು, ಗೀತಮ್ಮ ಇದ್ದರು.
