ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗಳನ್ನು ಪರಿಹರಿಸಲು ವ್ಯಾಪಾರಸ್ಥರ ಜಿಲ್ಲ ಸಮಾವೇಶವನ್ನು ಫೆಬ್ರವರಿ 26ರಂದು ಬೆಳಿಗ್ಗೆ 11ಕ್ಕೆ ದಾವಣಗೆರೆ ನಗರದ ಬೀರಲಿಂಗೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ವ್ಯಾಪಾರಸ್ಥರ ಸಮಸ್ಯೆಗಳ ಕುರಿತು ಚರ್ಚಿಸಲಾಗುತ್ತದೆ ಎಂದು ದಾವಣಗೆರೆ ಜಿಲ್ಲಾ ಬೀದಿಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ದುಗ್ಗಪ್ಪ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಜಿಲ್ಲಾ ಬೀದಿಬದಿ ಸ್ಥಿರ ಹಾಗೂ ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡುತ್ತಿದ್ದೇವೆ. ಈ ಹಿಂದೆ ಸಾಕಷ್ಟು ಬಾರಿ ಪ್ರತ್ಯೇಕವಾಗಿ ಬೀದಿಬದಿ ವ್ಯಾಪಾರಸ್ಥರು ವಿವಿಧ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಡಿದರ ಫಲವಾಗಿ ಹಲವಾರು ಸಮಸ್ಯೆಗಳು ಬಗೆಹರಿದಿವೆ. 2018ರಲ್ಲಿ ಸ್ಮಾರ್ಟ್ ಸಿಟಿ ನಿಗಮವು ಕೆ ಆರ್ ಮಾರ್ಕೆಟ್ನಲ್ಲಿ ಕಾಮಗಾರಿಯ ನೆಪವೊಡ್ಡಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಿತ್ತು. ಇದರ ವಿರುದ್ಧ ಬೀದಿಬದಿ ವ್ಯಾಪಾರಸ್ಥರು ಐತಿಹಾಸಿಕ ಹೋರಾಟ ಮಾಡಿ ಮಾರುಕಟ್ಟೆಯನ್ನು ಉಳಿಸಿಕೊಂಡಿದ್ದೇವೆ” ಎಂದರು.
“ದಾವಣಗೆರೆಯಲ್ಲಿ ಹಲವಾರು ವರ್ಷಗಳಿಂದಲೂ ಟೆಂಡರ್ನವರು ಮನಸ್ಸಿಗೆ ಬಂದಷ್ಟು ಜಕಾತಿಯನ್ನು ರಶೀದಿ ನೀಡದೆ ವಸೂಲಿ ಮಾಡುತ್ತಿದ್ದರು. ಇದರ ವಿರುದ್ಧ ಬೀದಿಬದಿ ವ್ಯಾಪಾರಸ್ಥರು ಒಗ್ಗಟ್ಟಾಗಿ ಎಸ್ಯುಸಿಐ ಪಕ್ಷದ ನೇತೃತ್ವದಲ್ಲಿ ಹೋರಾಟ ನಡೆಸಿ ಯಶಸ್ವಿಯಾದರು. ಈ ಹೋರಾಟದ ಫಲವಾಗಿ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ದಾವಣಗೆರೆಯ ನಗರ ಪಾಲಿಕೆಯೇ ನೇರವಾಗಿ ಜಕಾತಿಯನ್ನು ರಶೀದಿ ನೀಡಿ ಪಡೆಯುವಂತಾಯಿತು” ಎಂದರು.
“ಫೆಬ್ರವರಿ 12ರಿಂದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಸಂಘವು ಪ್ರಾರಂಭಿಸಿದೆ. ಈ ಅಭಿಯಾನದಲ್ಲಿ ಬೀದಿಬದಿ ವ್ಯಾಪಾರ ಮಾಡುವವರು, ತಳ್ಳುವ ಗಾಡಿಯಲ್ಲಿ ಹಣ್ಣು, ಸೊಪ್ಪು ಮಾರುವವರು, ಓಣಿ ಓಣಿಗಳಲ್ಲಿ ತಿರುಗಾಡುತ್ತಾ ತಲೆ ಮೇಲೆ ಪುಟ್ಟಿ ಹೊತ್ತು ಮಾರುವವರು, ತಿಂಡಿಗಾಡಿಯವರು ಸೇರಿದಂತೆ ಎಲ್ಲರೂ ಸದಸ್ಯತ್ವ ತೆಗೆದುಕೊಳ್ಳಲಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ʼನಿಗರಾಣಿʼ ವಿನೂತನ ಯೋಜನೆ ಜಾರಿ: ಎಸ್ಪಿ ಚನ್ನಬಸವಣ್ಣ
“ದಾವಣಗೆರೆ ನಗರ ಹಾಗೂ ಎಲ್ಲ ತಾಲೂಕುಗಳಲ್ಲಿ ಇರುವ ನಿಜವಾದ ಬೀದಿಬದಿ ವ್ಯಾಪಾರಸ್ಥರಿಗೆ ಸ್ಮಾರ್ಟ್ ಕಾರ್ಡ್ ಗುರುತಿನ ಚೀಟಿ ನೀಡಬೇಕು. ಬೀದಿ ಬದಿಯ ವ್ಯಾಪಾರಸ್ಥರಿಗೆ ನಿವೇಶನ ನೀಡಬೇಕು. ಜಕಾತಿ ವಸೂಲಿಯನ್ನು ಖಾಸಗಿಯವರಿಗೆ ಯಾವುದೇ ಕಾರಣಕ್ಕೂ ನೀಡಬಾರದೆಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಸಮಾವೇಶದಲ್ಲಿ ಒತ್ತಾಯಿಸಲಾಗುವುದು” ಎಂದರು.
ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷ ಎಸ್ ಇಸ್ಮಾಯಿಲ್, ಉಪಾಧ್ಯಕ್ಷ ಎಚ್ ಸಿ ಮಲ್ಲಪ್ಪ, ಶೀಲಾ, ಶ್ರೀನಿವಾಸ್, ಕೆ ಭಾರತಿ, ಪೂಜಾ ನಂದಿಹಳ್ಳಿ, ಸಲೀಂ, ಜಬೀವುಲ್ಲ, ಕೆ ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.