ಮಾನವೀಯತೆ ಮತ್ತು ತೃಪ್ತಿ ಎಂಬುದು ನಮ್ಮ ಹಿರಿಯರು ಸಮಾಜದಲ್ಲಿ ಕಟ್ಟಿರುವ ಒಂದು ಬಹುದೊಡ್ಡ ಮೌಲ್ಯವಾಗಿದೆ ಎಂದು ವಿಶ್ರಾಂತ ನ್ಯಾ.ಸಂತೋಷ್ ಹೆಗಡೆ ಸ್ಮರಿಸಿದರು.
ದಾವಣಗೆರೆಯಲ್ಲಿ ಜಿಲ್ಲಾ ವಕೀಲರ ಸಂಘ ಆಯೋಜಿಸಿದ್ದ ವಕೀಲರ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ “ಸಾಮಾಜಿಕ ಮೌಲ್ಯ ಮತ್ತು ಸಮಕಾಲಿನ ಸಮಾಜ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
“ಇಂದು ಸಮಾಜದಲ್ಲಿ ಮೌಲ್ಯಗಳು ಮರೆಯಾಗಿವೆ. ಭ್ರಷ್ಟಾಚಾರ, ದೌರ್ಜನ್ಯ, ಅನಾಚಾರಗಳು ತಾಂಡವವಾಡುತ್ತಿವೆ. ನಾನು ಲೋಕಾಯುಕ್ತಕ್ಕೆ ಬಂದು ಅಧಿಕಾರ ವಹಿಸಿಕೊಂಡಾಗ ನನಗೆ ಅನಿಸಿದ್ದು, ಇದು ಯಾವುದೋ ಒಬ್ಬ ವ್ಯಕ್ತಿಯ ತಪ್ಪಲ್ಲ. ಇದು ಸಮಾಜದ ತಪ್ಪು ಎಂಬುದು. ಯಾಕೆಂದರೆ ಸುಮಾರು ವರ್ಷಗಳ ಹಿಂದೆ ನಾವು ಚಿಕ್ಕವರಿದ್ದಾಗ ಕೆಟ್ಟ ಕೆಲಸ ಮಾಡಿ ಜೈಲಿಗೆ ಅಥವಾ ಶಿಕ್ಷೆಗೆ ಒಳಪಟ್ಟು ಬಂದರೆ ಅವಮಾನವಾಗುತ್ತಿತ್ತು. ಅವರನ್ನು ಸಮಾಜ ತಪ್ಪಿತಸ್ಥರ ದೃಷ್ಟಿಯಲ್ಲಿ ನೋಡುತ್ತಿತ್ತು. ಆದರೆ ಇಂದು ಅದನ್ನು ಹಿರಿಮೆ ಎಂಬಂತೆ ನೋಡಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಇಂದಿನ ಸಮಾಜ ಕೆಡಲು ಮುಖ್ಯ ಕಾರಣ ದುರಾಸೆ. ಇದಕ್ಕೆ ಮದ್ದಿಲ್ಲ, ಸೂಕ್ತ ಪರಿಹಾರವನ್ನು ನಾವು ಹುಡುಕಬೇಕಿದೆ. ನನ್ನ ಜೀವಿತಾವಧಿಯಲ್ಲಿ ಈ ಸಮಾಜದಲ್ಲಿ ಬದಲಾವಣೆ ಬರಲು ಸಾಧ್ಯವಿಲ್ಲವೆಂದು ನನಗೆ ತಿಳಿದಿದೆ. ಆದರೆ ಮುಂದೊಂದು ದಿನ ಆಗಬಹುದು ಎಂಬುವ ಆಶಾದಾಯಕ ಪ್ರಜ್ಞೆಯಿಂದ ನಾನು ಹೋದಲ್ಲೆಲ್ಲ ನನ್ನ ಪ್ರಯತ್ನಗಳನ್ನು ಮತ್ತು ನನ್ನ ಅನಿಸಿಕೆಗಳನ್ನು ತಿಳಿಸಿದ್ದೇನೆ. ಮುಂದೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳಾದರೂ ಮೌಲ್ಯಯುತ ಸಮಾಜವನ್ನು ಕಾಣಲಿ ಎಂಬುದು ನನ್ನ ಕನಸಾಗಿದೆ” ಎಂದು ಆಶಯ ವ್ಯಕ್ತಪಡಿಸಿದರು.
“50ನೇ ದಶಕದಲ್ಲಿ ದೇಶದಲ್ಲಿ ಜೀಪ್ ಹಗರಣ 52 ಲಕ್ಷ ರುಪಾಯಿ ಭ್ರಷ್ಟಾಚಾರ ನಡೆದಿತ್ತು. 70ನೇ ದಶಕದಲ್ಲಿ ಬೋಫೋರ್ಸ್ 64 ಕೋಟಿ ಆಯುಧಗಳ ಹಗರಣ, 2ಜಿ ಹಗರಣದಲ್ಲಿ 1,72,000 ಕೋಟಿ ರೂ., ಕೋಲ್ಗೇಟ್ ಹಗರಣದಲ್ಲಿ 1,82,000 ಕೋಟಿ ರೂ. ಇತರೆ ಹಗರಣಗಳು ಭಾರತದಲ್ಲಿ ಕೆಲವು ಉದಾಹರಣೆಗಳ ಅಂಕಿಗಳಷ್ಟೇ. ಈ ಅಂಕಿ ಸಂಖ್ಯೆಗಳು ನನ್ನದಲ್ಲ, ಸರ್ಕಾರಕ್ಕೆ ವರದಿ ನೀಡಿದ ಸಿಎಜಿ ವರದಿ, ಈ ರೀತಿಯಲ್ಲಿ ಸರ್ಕಾರದ, ಸಾರ್ವಜನಿಕರ ಹಣ ಭ್ರಷ್ಟಾಚಾರದ ಮೂಲಕ ಸೋರಿಕೆಯಾದಲ್ಲಿ ಅಭಿವೃದ್ಧಿ ತಾನೆ ಹೇಗೆ ಸಾಧ್ಯವಾಗುತ್ತದೆ. ದೇಶದ ಆರ್ಥಿಕ ಸ್ಥಿತಿ ಏನಾಗಬಹುದೆಂದು ಅಧಿಕಾರಸ್ತರು, ಸಮಾಜ ಯೋಚನೆ ಮಾಡಬೇಕಾಗಿದೆ. ಇದಕ್ಕೆ ಉದಾಹರಣೆ ಎಂದರೆ ನಮ್ಮ ಅಕ್ಕ ಪಕ್ಕದ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ದೇಶಗಳು ಭ್ರಷ್ಟಾಚಾರ ಮತ್ತು ಅರಾಜಕತೆಯಿಂದ ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ನಾವು ಗಮನಿಸಬಹುದು” ಎಂದರು.
“ಈ ಸಮಾಜ ಮುಂಚಿನ ಹಿರಿಯರ ಮೌಲ್ಯಯುತ ಸಮಾಜವಾಗಿ ಬದಲಾಗಬೇಕಾದರೆ ತಪ್ಪು ಮಾಡಿದವರನ್ನು ಬಹಿಷ್ಕಾರ ಹಾಕಿ ದೂರ ಇಡಬೇಕಾಗುತ್ತದೆ. ಅದು ಒಂದೇ ದಾರಿಯಾಗಿದೆ. ಚೈನಾದಲ್ಲಿ ಭ್ರಷ್ಟಾಚಾರ ಭಾರತಕ್ಕಿಂತಲೂ ಹೆಚ್ಚಿದೆ. ಅಲ್ಲಿ ಭ್ರಷ್ಟಾಚಾರಕ್ಕೆ ಗಲ್ಲುಶಿಕ್ಷೆ ಇದ್ದರೂ ಕೂಡ ಅಲ್ಲಿನ ಜನ ಭ್ರಷ್ಟಾಚಾರಕ್ಕೆ ಹೆದರುತ್ತಿಲ್ಲ. ಅದೇ ರೀತಿ ಭಾರತದಲ್ಲಿಯೂ ಕೂಡ ಆಗುತ್ತಿದೆ. ಕಾರಣ ಇಲ್ಲಿ ಭ್ರಷ್ಟಾಚಾರಕ್ಕೆ ಕೇವಲ ಏಳು ವರ್ಷ ಜೈಲು ಶಿಕ್ಷೆ ಇದ್ದು, ಇಲ್ಲೂ ಕೂಡ ಭ್ರಷ್ಟಾಚಾರಗಳು ಚೀನಾವನ್ನು ಮೀರಿಸುವತ್ತ ಮುನ್ನಡೆದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಾನು ಪದೇ ಪದೆ ಹೇಳುತ್ತಿರುತ್ತೇನೆ ಶ್ರೀಮಂತರಾಗುವುದು ತಪ್ಪಲ್ಲ. ಹೆಚ್ಚು ಓದಬೇಕು, ಹೆಚ್ಚು ದುಡಿಯಬೇಕು, ಉತ್ತಮ ಹುದ್ದೆಗಳನ್ನು ಪಡೆಯಬೇಕು. ಆದರೆ ಇದು ಕಾನೂನಿನ ಚೌಕಟ್ಟಿನಲ್ಲಿರಬೇಕು. ಜೈಲಿಗೆ ಹೋಗಿ ಬಂದವರನ್ನು ಹಾರ ಹಾಕಿ ಸ್ವಾಗತಿಸಿದರೆ, ಸನ್ಮಾನಿಸಿ ಕರೆದುಕೊಂಡು ಬಂದರೆ ನಾವು ನಮ್ಮ ಮಕ್ಕಳಿಗೆ ಯಾವ ನೈತಿಕ ಪಾಠವನ್ನು ಕಲಿಸಲು ಸಾಧ್ಯವಿದೆ” ಎಂದು ಹೇಳಿದರು.
“ಈ ಸಮಾಜವನ್ನು ತಿದ್ದಲು ಕ್ರಾಂತಿಯಿಂದ ಸಂಪೂರ್ಣ ಸಾಧ್ಯವಿದೆ ಎಂದು ನನಗೆ ಅನಿಸುತ್ತಿಲ್ಲ.
ಯಾಕೆಂದರೆ ಕ್ರಾಂತಿಯು ಜಾತಿ ಭಾಷೆ, ಧರ್ಮದ ಹಿಂದೆ ಹೋದರೆ ಈ ದೇಶವನ್ನು 25 ದೇಶಗಳನ್ನಾಗಿ ಮಾಡಬೇಕಾಗುತ್ತದೆ. ನನಗೆ ಗೊತ್ತಿರುವ ಒಂದು ಘಟನೆಯಂತೆ 1954ರಲ್ಲಿ ತಮಿಳುನಾಡಿನಲ್ಲಿ ಒಂದು ಪಕ್ಷ ರಾಜಕೀಯ ಕಾರಣಗಳಿಂದ ಒಂದು ಹೇಳಿಕೆಯನ್ನು ಕೊಟ್ಟಿದ್ದು, ತಮಿಳುನಾಡು ಭಾಷೆ ಮತ್ತು ಎಲ್ಲ ದೃಷ್ಟಿಯಿಂದಲೂ ಬೇರೆಯಾಗಬೇಕು ಎಂದಿದ್ದರು. ಅದೇ ರೀತಿ ಈಗ ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ, ಹಳೆಯ ಕರ್ನಾಟಕ ಅಥವಾ ಮೈಸೂರು ಕರ್ನಾಟಕ, ಇದೇ ರೀತಿ ಮುಂದುವರೆದರೆ ಈ ಪರಿಸ್ಥಿತಿ ಏನಾಗಬೇಕೆಂಬುದನ್ನು ಊಹಿಸಲಾಗದು” ಎಂದರು.
ಜಿಲ್ಲಾ ಹಿರಿಯ ನ್ಯಾಯಾಧೀಶ ರಾಜೇಶ್ವರಿ ಹೆಗಡೆ ಮಾತನಾಡಿ, “ವಕೀಲರು ಸಮಾಜದಲ್ಲಿ ಮೌಲ್ಯ ಮತ್ತು ಬದಲಾವಣೆ ತರಲು ಪ್ರಯತ್ನಿಸಬೇಕಾಗಿದೆ. ಪ್ರಕರಣಗಳನ್ನು ಬೇಗ ಇತ್ಯರ್ಥ ಬಿಡಿಸಲು ಕೆಲಸ ಮಾಡಬೇಕಾಗಿದೆ. ನಾನು ದಾವಣಗೆರೆಗೆ ಬಂದ ನಂತರ ಅವಲೋಕಿಸಿದ ಪ್ರಕಾರ ಸಿವಿಲ್ ವ್ಯಾಜ್ಯಗಳು ಶೇ. 77 ರಷ್ಟು ಹೆಚ್ಚಾಗಿದೆ, ನಾವು ಈ ಕೇಸ್ಗಳನ್ನು ಎಲ್ಲಿ ಹೇಗೆ ಬಗೆಹರಿಸಬೇಕು ಎಂಬುದರ ಬಗ್ಗೆ ಒಂದು ಪ್ರಯತ್ನ ಪಡಬೇಕಿದೆ. ಕೆಲವು ಪ್ರಕರಣಗಳಲ್ಲಿ ಮುಂಜಾಗ್ರತೆ ತೆಗೆದುಕೊಂಡರೆ ಪ್ರಕರಣಗಳು ನಡೆಯುವುದನ್ನು ತಡೆಗಟ್ಟಬಹುದು. ಹಾಗಾಗಿ ಸಮಾಜ ಮತ್ತು ಎಲ್ಲರೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ವಜನಾಂಗದ ಅಭಿವೃದ್ಧಿ ಬಯಸುವ ಶ್ರೇಷ್ಠ ಗ್ರಂಥ ಸಂವಿಧಾನ: ಎಸ್ಟಿ ಕಲ್ಯಾಣಾಧಿಕಾರಿ ಮಂಜುಳಾ ಅಸುಂಡಿ
ಜಿಲ್ಲಾ ನ್ಯಾಯಾಧೀಶ ವಿಜಯಾನಂದ ಮಾತನಾಡಿ, “83ರ ಈ ಇಳಿ ವಯಸಿನಲ್ಲೂ ಕೂಡ ನ್ಯಾ.ಸಂತೋಷ ಹೆಗಡೆಯವರು ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ದೂರದಿಂದ ನೋಡುತ್ತಿದ್ದ ನಮಗೆ ಅವರನ್ನು ಇಂದು ಹತ್ತಿರದಿಂದ ನೋಡಿದ್ದು ನಮ್ಮ ಅಮೂಲ್ಯ ಕ್ಷಣ, ಇಂದು ಮೌಲ್ಯಗಳು ಸಾಯುತ್ತಿದ್ದು ಅದನ್ನು ನಮ್ಮಲ್ಲಿ ಉಳಿಸಿ ಬೆಳೆಸಬೇಕಿದೆ. ಜೊತೆಗೆ ನಾವು ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕಿದೆ” ಎಂದು ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಕೌಟುಂಬಿಕ ನ್ಯಾಯಾಧೀಶ ದಶರಥ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಮುಖ್ಯ ಆಡಳಿತ ಅಧಿಕಾರಿ ಶ್ರೀನಿವಾಸ್ ಬಂಡ್ರಿ, ವಕೀಲರ ಸಂಘದ ಪದಾಧಿಕಾರಿಗಳಾದ ಭಾಗ್ಯಲಕ್ಷ್ಮಿ, ಬಸವರಾಜ್ ಗೋಪನಾಳು, ಮಂಜುನಾಥ್, ಬಸವರಾಜ್ ಸೇರಿದಂತೆ ಇತರರು ಇದ್ದರು.