ರಾಜ್ಯದ ಹಲವು ನಗರಗಳಲ್ಲಿರುವ ನಗರ ಸಾರಿಗೆಗೂ ಕೆಎಸ್ಆರ್ಟಿಸಿಯಿಂದ ವಿದ್ಯುತ್ ಚಾಲಿತ ಬಸ್ಗಳನ್ನು ಒದಗಿಸುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ದಾವಣಗೆರೆ ನಗರದಲ್ಲಿ 120 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು. “ಹಲವು ನಗರ ಪ್ರದೇಶದಲ್ಲಿ 10 ರಿಂದ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಬಸ್ಗಳನ್ನು ಓಡಿಸುವ ಸಂಬಂಧ ಬೇಡಿಕೆ ಕಳುಹಿಸಲಾಗಿದೆ. ಈ ಹಿಂದೆ 4,000 ಬಸ್ಗಳ ಖರೀದಿಗೆ ಟೆಂಡರ್ ಆಗಿದ್ದು ಇದರೊಂದಿಗೆ ಈಗ 1000 ಬಸ್ಗಳ ಖರೀದಿ ಸೇರಿದಂತೆ ಒಟ್ಟು 5,000 ಬಸ್ಗಳನ್ನು ಖರೀದಿಸಲಾಗುತ್ತಿದೆ” ಎಂದರು.
“2016 ರಿಂದ ಸುಮಾರು 16 ಸಾವಿರ ಸಿಬ್ಬಂದಿಗಳು ನಿವೃತ್ತರಾಗಿದ್ದಾರೆ. ಅದರೆ, ಈವರೆಗೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಸಿಬ್ಬಂದಿಗಳ ಕೊರತೆಯಿಂದ ಹೆಚ್ಚುವರಿ ಬಸ್ಗಳನ್ನು ಓಡಿಸಲು ಸಾಧ್ಯವಾಗುತ್ತಿಲ್ಲ. ಹಂತ ಹಂತವಾಗಿ ಖಾಲಿ ಇರುವ ನಾಲ್ಕು ನಿಗಮಗಳ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ” ಎಂದು ಹೇಳಿದರು.
“ಶಕ್ತಿ ಯೋಜನೆಯಡಿ ಈವರೆಗೂ 43 ಕೋಟಿ ಮಂದಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಈ ಪ್ರಯಾಣದ ಮೊತ್ತ 1 ಸಾವಿರ ಕೋಟಿ ರೂ.ಗೂ ಅಧಿಕವಾಗಿದೆ. ಉಚಿತ ಪ್ರಯಾಣದ ಮೊತ್ತದಲ್ಲಿ ಈಗಾಗಲೇ ನಿಗಮಗಳಿಗೆ ಜೂನ್ ತಿಂಗಳಲ್ಲಿ ಶೇ.80 ರಷ್ಟು ಮತ್ತು ಜುಲೈ ತಿಂಗಳಲ್ಲಿ 280 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಪ್ರಯಾಣದ ಅಂಕಿ ಸಂಖ್ಯೆಯನ್ನು ಪೂರ್ಣವಾಗಿ ನೀಡಿದರೆ ಪೂರ್ಣ ಹಣ ಬಿಡುಗಡೆ ಮಾಡಲಾಗುವುದು” ಎಂದರು.
“ದಾವಣಗೆರೆಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಅತ್ಯಾಧುನಿಕವಾದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಉದ್ಘಾಟನೆ ನೆರವೇರಿಸಲು ಉದ್ದೇಶಿಸಲಾಗಿದೆ. ಆರೂವರೆ ಎಕರೆ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಶೇ.75ರಷ್ಟು ಅನುದಾನ ಮತ್ತು ಕೆಎಸ್ಆರ್ಟಿಸಿಯಿಂದ ಶೇ.25ರಷ್ಟು ಅನುದಾನದಲ್ಲಿ ನಿಲ್ದಾಣ ನಿರ್ಮಾಣವಾಗುತ್ತಿದೆ. ಈ ಬಸ್ ನಿಲ್ದಾಣದಲ್ಲಿ 3 ಮಾಲ್ಗಳು, ಹೋಟೆಲ್, ಥಿಯೇಟರ್ ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ತಕ್ಷಣದ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತದೆ. ಏಕಕಾಲದಲ್ಲಿ 41 ಬಸ್ಗಳು ಹೋಗಲು ಸ್ಥಳಾವಕಾಶ ಕಲಿಸಲಾಗಿದೆ. ಜೊತೆಗೆ ಕಾರ್ ಪಾರ್ಕಿಂಗ್ ವ್ಯವಸ್ಥೆಯು ಇರಲಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಭ್ರಷ್ಟಾಚಾರ; ತನಿಖೆಗೆ ಆಗ್ರಹ
ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮಾತನಾಡಿ, “ನೂತನ ಕೆಎಸ್ಆರ್ಟಿಸಿ ಬಸ್ ನಿಲ್ದಾಣವು ಎಲ್ಲ ನಾಗರಿಕ ಸೌಲಭ್ಯವನ್ನು ಹೊಂದಲಿದ್ದು, ಸಾರ್ವಜನಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳು ಇಲ್ಲಿರಲಿದೆ. ನಗರದಲ್ಲಿ ಟ್ರಕ್ ಟರ್ಮಿನಲ್ ಅಗತ್ಯವಿದ್ದು ಸ್ಥಳದ ಬಗ್ಗೆ ಸಭೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳಾವಕಾಶ ಕಲ್ಪಿಸಿ ಟರ್ಮಿನಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದರು.
ಈ ವೇಳೆ ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ, ಕೆಎಸ್ಆರ್ಟಿಸಿ ಎಂಡಿ ಅನುಕುಮಾರ್, ಸ್ಮಾರ್ಟ್ ಸಿಟಿ ನಿಗಮದ ಎಂಡಿ ವೀರೇಶ್ ಕುಮಾರ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.