ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ನಿರ್ಧರಿಸಿದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸ್ಪರ್ಧಿಸಿಯೇ ಸಿದ್ಧ ಎಂದು ಅಹಿಂದ ನಾಯಕ, ಕಾಂಗ್ರೆಸ್ ಟಿಕೆಟ್ ವಂಚಿತ ಇನ್ಸೈಟ್ ಐಎಎಸ್ ತರಬೇತಿ ಸಂಸ್ಥೆ ಸಂಸ್ಥಾಪಕ ಜಿ ಬಿ ವಿನಯ್ ಕುಮಾರ್ ಅಧಿಕೃತವಾಗಿ ಘೋಷಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಬಳಿಕ ಅವರ ಮುಂದಿನ ನಡೆ ಏನೆಂಬ ಪ್ರಶ್ನೆ ಮೂಡಿತ್ತು. ಆದರೆ, ದಾವಣಗೆರೆಯ ಎಸ್ ಎಸ್ ಬಡಾವಣೆಯ ಜನಸಂಪರ್ಕ ಕಚೇರಿಯಲ್ಲಿ ಕರೆದಿದ್ದ ಆಪ್ತರು, ಮುಖಂಡರು, ಹಿತೈಷಿಗಳ ಸಭೆಯಲ್ಲಿ ಅಧಿಕೃತವಾಗಿ ಘೋಷಿಸುವ ಮೂಲಕ ಕಾಂಗ್ರೆಸ್ಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.
“ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಫೋಟೋ ಗೊಂದಲಗಳನ್ನು ಹುಟ್ಟು ಹಾಕಿತು. ನಾನು ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ನಿಜ. ಆದರೆ, ಫೋಟೊ ವೈರಲ್ ಆದ ಬಳಿಕ ವಿನಯ್ ಕುಮಾರ್ ಕಣದಿಂದ ಹಿಂದೆ ಸರಿಯುತ್ತಾರೆ. ಬಂಡಾಯ ಶಮನವಾಗಿದೆ. ಎಲ್ಲವೂ ಸರಿ ಹೋಗಿದೆಯೆಂದು ಸುಳ್ಳು ಸುದ್ದಿ ಹಬ್ಬಿಸಲಾಯಿತು. ಈ ನಿರ್ಧಾರ ಮಾಡಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರೂ ಕೂಡ ಬಂಡಾಯ ಶಮನವಾಗಿದೆ, ಎಲ್ಲವೂ ಬಗೆಹರಿದಿದೆ. ವಿನಯ್ ಕುಮಾರ್ ಜೊತೆ ಮಾತನಾಡಿದ್ದು ಸರಿ ಹೋಗಿದೆ ಎಂದು ಎಲ್ಲಿಯೂ ತಿಳಿಸಿಲ್ಲ” ಎಂದು ಹೇಳಿದರು.
“ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮಿಗಳು, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಯುವ ಉತ್ಸಾಹಿ ನಾಯಕ ವಿನಯ್ ಕುಮಾರ್, ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅವರು ನನ್ನನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು ಎಂದಷ್ಟೇ ಪೋಸ್ಟ್ ಹಾಕಿದ್ದರು. ಆದರೆ ಈ ವಿಷಯದಲ್ಲಿ ತಪ್ಪು ಮಾಹಿತಿ ಹರಡಲಾಯಿತು” ಎಂದು ತಿಳಿಸಿದರು.
ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಯುವ ಉತ್ಸಾಹಿ ನಾಯಕ @vinaygb, ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅವರು ನನ್ನನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. pic.twitter.com/TMB9Bvhvh9
— Siddaramaiah (@siddaramaiah) April 7, 2024
“ಪೋಸ್ಟ್ನಲ್ಲಿ ʼಸಮಾಲೋಚನೆʼ ಎಂದಷ್ಟೇ ಬರೆಯಲಾಗಿತ್ತು. ಸಾಮಾಜಿಕ ಜಾಲತಾಣ ಹಾಗೂ ಎಕ್ಸ್ನಲ್ಲಿ ಹಾಕಿರುವ ಪೋಸ್ಟ್ನಲ್ಲಿ ಕಣದಿಂದ ಹಿಂದೆ ಸರಿದಿದ್ದಾರೆ ವಿನಯ್ ಎಂದು ಎಲ್ಲಾದರೂ ಇತ್ತಾ” ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಾದ್ಯಂತ ಕಳೆದೊಂದು ವರ್ಷದಿಂದ ಪಾದಯಾತ್ರೆ ಮಾಡಿದ್ದೇನೆ, ಜನರನ್ನು ಭೇಟಿಯಾಗಿದ್ದೇನೆ. ಪ್ರಜಾಪ್ರಭುತ್ವದ ಗೆಲುವಿಗೆ ಹೋರಾಟ ಮಾಡಲು ನಿರ್ಧರಿಸಿದ್ದೇನೆ. ಪಾಳೆಗಾರಿಕೆ ಕೊನೆಯಾಗಬೇಕು. ಜನಸಾಮಾನ್ಯರ ಕೈಗೆ ಅಧಿಕಾರ ಸಿಗಬೇಕೆಂಬುದೇ ನನ್ನ ಉದ್ದೇಶ” ಎಂದು ಜಿ ಬಿ ವಿನಯ್ ಕುಮಾರ್ ತಿಳಿಸಿದರು.
“ನನಗೆ ಟಿಕೆಟ್ ತಪ್ಪಿಸಿದಾಗ ಯಾರೂ ಕರೆ ಮಾಡಲಿಲ್ಲ, ಮನೆ ಬಾಗಿಲಿಗೂ ಯಾರೂ ಬರಲಿಲ್ಲ. ಆದರೆ, ಈಗ ನನ್ನ ಜನಪ್ರಿಯತೆ ಅರಿತ ಬಳಿಕ ರಾಜ್ಯಮಟ್ಟದಲ್ಲಿ ಸಂಧಾನ ಮಾಡಿಸಲು ಮುಂದಾದರು. ಟಿಕೆಟ್ ಘೋಷಣೆಯಾದಾಗ ಸೌಜನ್ಯಕ್ಕಾದರೂ ನನ್ನನ್ನು ಮಾತನಾಡಿಸಿದ್ದರೆ ಕಣದಿಂದ ಹಿಂದೆ ಸರಿಯಬೇಕೆಂದು ಯೋಚನೆ ಬರುತ್ತಿತ್ತೋ ಏನೋ ಗೊತ್ತಿಲ್ಲ. ಈಗ ಕಾಲ ಮಿಂಚಿ ಹೋಗಿದೆ. ಯಾವುದೇ ಒತ್ತಡ, ಆಮೀಷ, ಬೆದರಿಕೆಗೆ ಬಗ್ಗುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ ಲೋಕಸಭಾ ಕ್ಷೇತ್ರದ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ನಾಗಜ್ಯೋತಿ ಸ್ಪರ್ಧೆ
“ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಈ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸವೇ ಕಾರಣ. ನೀವು ತೋರಿದ ಪ್ರೀತಿ ವಿಶ್ವಾಸದ ಮುಂದೆ ಯಾವುದೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಸ್ ಎಸ್ ಲೇಔಟ್ ನಲ್ಲಿ ನಡೆದ ಸಭೆಯಲ್ಲಿ ಅಭಿಮಾನಿ ಬಳಗದ ಸದಸ್ಯರು, ಕ್ಷೇತ್ರದ ಮುಖಂಡರು, ವಿವಿಧ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.
